ಮಂಡ್ಯ ಜಿಲ್ಲೆಗೆ ಸಿಕ್ಕ ಕನಸುಗಾರ ಚಲುವರಾಯಸ್ವಾಮಿ: ಸಾಹಿತ್ಯ ಸಮ್ಮೇಳನವನ್ನೂ ಯಶಸ್ವಿಯಾಗಿ ಸಂಘಟಿಸಿದ ಸಚಿವ

| N/A | Published : Jun 01 2025, 11:15 AM IST

N. Chaluvarayaswamy
ಮಂಡ್ಯ ಜಿಲ್ಲೆಗೆ ಸಿಕ್ಕ ಕನಸುಗಾರ ಚಲುವರಾಯಸ್ವಾಮಿ: ಸಾಹಿತ್ಯ ಸಮ್ಮೇಳನವನ್ನೂ ಯಶಸ್ವಿಯಾಗಿ ಸಂಘಟಿಸಿದ ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

78 ವರ್ಷಗಳ ಸುದೀರ್ಘ ಪ್ರಜಾಪ್ರಭುತ್ವ ಆಡಳಿತದಲ್ಲಿ ಮೊದಲ ಬಾರಿಗೆ ಮಂಡ್ಯಕ್ಕೆ ಕೃಷಿ ಇಲಾಖೆ ಹೊಣೆಗಾರಿಕೆ ಸಿಕ್ಕಿದೆ. ಚಲುವರಾಯಸ್ವಾಮಿ ತಾವು ಕೃಷಿ ಸಚಿವರಾಗಿ 15-16 ತಿಂಗಳೊಳಗಾಗಿ ಅನುಷ್ಠಾನಗೊಳಿಸಿರುವುದು ವಿಶೇಷ.

-ಕಿರಣ್ ಕಿರುಗಾವಲು, ಸಿಇಒ, ಸಿನಾಪ್ಸೆನೆಟ್ ಪ್ರೈವೇಟ್ ಲಿಮಿಟೆಡ್

ಕೇವಲ 400 ವರ್ಷಗಳಿಂದೀಚೆಗೆ ಕಟ್ಟಿದ ಅಮೆರಿಕ ಇಂದು ಪ್ರಪಂಚದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿದೆ. ವ್ಯಾಪಾರ, ಸಂಪನ್ಮೂಲ, ಭಾಗವಹಿಸಿದ ಯುದ್ಧಗಳು ಹೀಗೆ ಹಲವು ಆಯಾಮಗಳು ಅದಕ್ಕೆ ಕಾರಣ. ದೇಶ, ರಾಜ್ಯ ಅಥವಾ ಯಾವುದೇ ಪ್ರದೇಶ ಅಭಿವೃದ್ಧಿ ಹೊಂದುವುದು ಕೈಗಾರಿಕೋದ್ಯಮ, ವಿದ್ಯಾಭಾಸಕ್ಕೆ ನೀಡಿರುವ ಪ್ರಾಶಸ್ತ್ಯ ಹಾಗೂ ವಿವಿಧ ಸಂಪನ್ಮೂ ಲಗಳ ಸಮರ್ಪಕ ಬಳಕೆಯಿಂದ. ಅಮೆರಿಕ ಕೂಡ ಹೀಗೆಯೇ ಬೆಳೆದಿದೆ. ನ್ಯೂಯಾರ್ಕ್ ಅಮೆರಿಕದ ಪ್ರಮುಖ ನಗರವಷ್ಟೇ ಅಲ್ಲ, ಇಡೀ ಪ್ರಪಂಚದಲ್ಲೇ ವಾಣಿಜ್ಯ ಕ್ಷೇತ್ರದಲ್ಲೇ ಅತ್ಯಂತ ಪ್ರಭಾವಿ ನಗರ. ರಾಬರ್ಟ್ ಮೋಸೆಸ್ ಎಂಬ ಅಪ್ರತಿಮ ಅರ್ಬನ್ ಪ್ಲಾನರ್ ಇದರ ಹಿಂದಿನ ರೂವಾರಿ ಎಂದು ಹೇಳಲಾಗುತ್ತದೆ.

ದೂರದ ಅಮೆರಿಕದ ಮಾತು ಹಾಗಿರಲಿ, ನಮ್ಮ ನಡುವೆಯೂ ಅಂತಹ ಉದಾಹರಣೆಯಿದೆ. ಇಡೀ ಭಾರತದಲ್ಲೇ ಸ್ವಾತಂತ್ರ್ಯ ಪೂರ್ವದಿಂದಲೂ ತಮ್ಮ ರಾಜ್ಯದ ಜನಸಾಮಾನ್ಯರಿಗೆ ಎಲ್ಲ ರೀತಿಯ ಅನುಕೂಲಗಳು ಹಾಗೂ ವ್ಯವಸ್ಥೆಗಳು ಅಚ್ಚುಕಟ್ಟಾಗಿರಬೇಕೆಂದು ಎಣಿಸಿ ಅತ್ಯಂತ ಮುಂದಾಲೋಚನೆಯಿಂದ ನೀರಾವರಿ ಯೋಜನೆಗಳು, ಶಾಲಾ- ಕಾಲೇಜುಗಳು, ಅಣೆಕಟ್ಟೆಗಳು, ಚೆಕ್‌ಡ್ಯಾಮ್‌ಗಳು, ಸಂಶೋಧನಾ ಕೇಂದ್ರಗಳು, ರಸ್ತೆ ಮಾರ್ಗಗಳು, ವಿಜ್ಞಾನ ಕೇಂದ್ರಗಳು ಹೀಗೆ ಹಲವು ಚಾರಿತ್ರಿಕ ನಿರ್ಧಾರಗಳನ್ನು ಕೈಗೊಂಡು ಇಂದಿನ ಹಳೆ ಮೈಸೂರು ಅಥವಾ ದಕ್ಷಿಣ ಕರ್ನಾಟಕ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ದೇಶದಲ್ಲೇ ಅತ್ಯಂತ ಸುಭೀಕ್ಷವಾಗಿರಲು ಅಂದಿನ ಮೈಸೂರು ಸಂಸ್ಥಾನದ ದೊರೆಗಳು ಅಡಿಪಾಯ ಹಾಕಿದ್ದರು.

ಸಣ್ಣ ಹಳ್ಳಿಯಾಗಿದ್ದ ಮಂಡ್ಯ, ಜಿಲ್ಲೆಯಾಗಲು ಕಾರಣ ಮೈಸೂರು ಅರಸರ ಕನಸಾಗಿದ್ದ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ಮೈಷುಗರ್ ಅಥವಾ ಮೈಸೂರು ಸಕ್ಕರೆ ಕಾರ್ಖಾನೆ. ರಾಜ್ಯ ರಾಜಧಾನಿಗೂ ಸಾಂಸ್ಕೃತಿಕ ರಾಜಧಾನಿಗೂ ಮಧ್ಯೆ ಹಾಗೂ ಕೂಗಳತೆ ದೂರದಲ್ಲಿರುವ ಮಂಡ್ಯ ಕಾವೇರಿ ಕಣಿವೆಯಲ್ಲಿದ್ದೂ, ಹೆಚ್ಚೇನೂ ಅಭಿವೃದ್ಧಿಯನ್ನೇ ಕಾಣದ ದುರದೃಷ್ಟ ಜಿಲ್ಲೆ ಎನ್ನಬಹುದು. ಪ್ರಪಂಚದ ವಾಣಿಜ್ಯ ನಗರಿ ನ್ಯೂಯಾರ್ಕ್‌ಗೂ ಭಾರತದ ಪುಟ್ಟ ಜಿಲ್ಲೆ ಮಂಡ್ಯಕ್ಕೂ ಯಾವ ರೀತಿಯಲ್ಲೂ ತಾಳೆಹಾಕಲಾಗದಿದ್ದರೂ, ಪ್ರತಿ ಹಳ್ಳಿ, ಊರು, ಜಿಲ್ಲೆಗೂ ಅಲ್ಲಿನ ಸ್ಥಳೀಯ ಕನಸುಗಾರನ ಪ್ರಾಮುಖ್ಯತೆ ಎಷ್ಟಿದೆ ಎಂಬುದನ್ನು ಈ ಹೋಲಿಕೆ ಸುಪ್ತವಾಗಿ ತಿಳಿಸುತ್ತದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಹಳೆ ಮೈಸೂರು ಭಾಗವಾಗಿದ್ದ ಮಂಡ್ಯ ಕೃಷ್ಣರಾಜಸಾಗರ ಹಾಗೂ ಮೈಷುಗರ್‌ನಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಿ ತಲೆಯೆತ್ತಿ 1939ರಲ್ಲಿ ಜಿಲ್ಲೆಯಾಯಿತು. ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತವಾದಲ್ಲಿ ರಾಜಕೀಯವಾಗಿ ಅನೇಕ ನಾಯಕರಿಗೆ ಚಿಮ್ಮು ಅಲಗೆ ಯಾದರೂ, ನೂರಾರು ನಾಯಕರುಗಳ ಬೆಳವಣಿಗೆಗೆ, ಹತ್ತಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರ ಉತ್ಪಾದಿಸಿದ ಜಿಲ್ಲೆ, ತನ್ನೊಡಲಿನ ಜನಕ್ಕೆ ದಕ್ಕಿಸಿಕೊಂಡ ಅಭಿವೃದ್ಧಿಯ ಕಾರ್ಯಗಳು ನಗಣ್ಯ. ಕೃಷಿ ಭೂಮಿ ಎಂಬ ಕಾರಣವೋ, ನಾಯಕರುಗಳು ಗಟ್ಟಿಯಾಗಿ ದನಿಯೆತ್ತಿ ಶ್ರಮಿಸಲಾಗಲಿಲ್ಲವೋ ಅಥವಾ ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ದಕ್ಕಿದ ಹೆಚ್ಚಿನ ಪ್ರಾಮುಖ್ಯತೆ ಕಂಡು ನಲುಗಿದೆಯೋ ತಿಳಿಯದು.

ಸಕ್ಕರೆ ನಾಡಿನ ಅಭಿವೃದ್ಧಿಗೆ ಪಣ: ಅಮೆರಿಕದ ನ್ಯೂಯಾರ್ಕ್‌ನ ರಾಬರ್ಟ್ ಮೋಸೆಸ್‌ನಂತೆ, ಮೈಸೂರು ಮನೆತನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತೆ, ನಾಗಮಂಗಲದ ಚಲುವರಾಯಸ್ವಾಮಿ ತಮಗೆ ಸಿಕ್ಕ ಅವಕಾಶದಲ್ಲಿ ಅತ್ಯಂತ ಯಶಸ್ವೀ ಯೋಜನೆಗಳನ್ನು ರೂಪಿಸಿ, ತಂದೊದಗಿಸಿ, ಅನುಷ್ಠಾನಗೊಳಿಸುವಲ್ಲಿ ಮೊದಲಿಗರು ಎಂಬ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ. ಜಿಲ್ಲಾ ಪಂಚಾಯತಿ ಸದಸ್ಯನಾಗಿರಲಿ, ಉಪಾಧ್ಯಕ್ಷರಾಗಿರಲಿ, ಶಾಸಕನಾಗಿರಲಿ, ಸಂಸದನಾಗಿರಲಿ, ಸಚಿವರಾಗಿರಲಿ, ಖಾತೆ ಯಾವುದೇ ಇರಲಿ, ತನ್ನೂರಿಗೆ, ತನ್ನವರಿಗೆ ತರುವುದನ್ನು ಮರೆತಿಲ್ಲ. ಈ ಮಾತಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಸಿಕ್ಕ ಪ್ರತೀ ಅವಕಾಶದಲ್ಲೂ, ತಾವು ನಿರ್ವಹಿಸಬಹುದಾದ್ದನ್ನೂ ಅತ್ಯಂತ ಗುಣಮಟ್ಟದಲ್ಲಿಯೇ ನಿರ್ವಹಿಸಿದ್ದಾರೆ. 1999 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ, 2004ರಲ್ಲಿ ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಮಂಡ್ಯಕ್ಕೆ ವೈದ್ಯಕೀಯ ಕಾಲೇಜು ತರುವಲ್ಲಿ ಯಶಸ್ವಿಯಾದರು. 2006ರ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕೆಎಸ್‌ಆರ್‌ಟಿಸಿಗೆ ಮಂಡ್ಯ ವಿಭಾಗವನ್ನು ಪರಿಚಯಿಸಿ, ತಾಲೂಕುಗಳಿಗೆ ಡಿಪೋ ಕಟ್ಟಿಸಿ, ಎಲ್ಲ ತಾಲೂಕುಗಳ ಪ್ರಮುಖ ಹಳ್ಳಿಗಳಿಗೆ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಿದ್ದರು.

ಹಲವು ಅಭಿವೃದ್ಧಿಗೆ ಮುನ್ನುಡಿ: 2023ರಲ್ಲಿ 4ನೇ ಸಲ ಶಾಸಕರಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಸ್ತುತ ಕೃಷಿ ಸಚಿವರಾಗಿ ಎರಡು ವರ್ಷ ಪೂರೈಸುವುದರೊಳಗಾಗಿ ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯವನ್ನು ತಂದಿರುವುದು ಆ ಭಾಗದ ಪ್ರತಿಯೊಬ್ಬರಿಗೂ ಅಭಿಮಾನದ ವಿಚಾರ. ತಾಂತ್ರಿಕವಾಗಿ ಹಳೆ ಮೈಸೂರು ಭಾಗಕ್ಕೆ ಇದು ದಶಕಗಳೇ ಹಿಂದೆಯೇ ಸಿಗಬೇಕಿತ್ತು. ಸಂಶೋಧನೆಗೆ ಪೂರಕವಾದ ವಾತಾವರಣ, ಸಂಪನ್ಮೂಲ, ವಿಸಿ ಫಾರ್ಮ್‌ನಲ್ಲಿರುವ ಕೃಷಿ ಕಾಲೇಜು, ಸಂಪೂರ್ಣ ಕೃಷಿ ಅವಲಂಬಿತ ಪ್ರದೇಶ, ನೀರಾವರಿ ಯೋಜನೆಯಂತಹ ವಿಚಾರಗಳು ಇಲ್ಲಿಗೆ ಕೃಷಿ ವಿಶ್ವವಿದ್ಯಾಲಯದ ಅವಶ್ಯಕತೆ ಹೆಚ್ಚಿದ್ದರೂ ಸಾಕಾರಗೊಂಡಿರಲಿಲ್ಲ.

78 ವರ್ಷಗಳ ಸುದೀರ್ಘ ಪ್ರಜಾಪ್ರಭುತ್ವ ಆಡಳಿತದಲ್ಲಿ ಮೊದಲ ಬಾರಿಗೆ ಮಂಡ್ಯಕ್ಕೆ ಕೃಷಿ ಇಲಾಖೆ ಹೊಣೆಗಾರಿಕೆ ಸಿಕ್ಕಿದೆ. ಚಲುವರಾಯಸ್ವಾಮಿ ತಾವು ಕೃಷಿ ಸಚಿವರಾಗಿ 15-16 ತಿಂಗಳೊಳಗಾಗಿ ಅನುಷ್ಠಾನಗೊಳಿಸಿರುವುದು ವಿಶೇಷ. ಅಲ್ಲದೇ ಮೈಷುಗರ್ ಪುನಶ್ಚೇತನಕ್ಕೆ ನಿರಂತರ ಶ್ರಮ ಶ್ಲಾಘನೀಯ. ಕಳೆದ 15 -20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವನ್ನು ಹಣ ಬೇಡದೆ ಸ್ವಾವಲಂಬಿಯಾಗಿ ಷುಗರ್ ಮಿಲ್ ನಡೆಸುವ ಆತ್ಮವಿಶ್ವಾಸ ತೋರಿದೆ ಕಾರ್ಖಾನೆಯ ಆಡಳಿತ ಮಂಡಳಿ. 30 ವರ್ಷಗಳ ನಂತರ 2024ರಲ್ಲಿ ಮಂಡ್ಯಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಬಂದಾಗ, ಅದರ ಸದುಪಯೋಗ ಪಡಿಸಿಕೊಂಡು ಹಿಂದೆಂದೂ ಯಾವ ಜಿಲ್ಲೆಯಲ್ಲೂ ನಡೆಯದ ರೀತಿಯಲ್ಲಿ ಆಯೋಜಿಸಿದ ಕೀರ್ತಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲುತ್ತದೆ.

ಮಂಡ್ಯದಿಂದ ರಾಜಕೀಯವಾಗಿ ಬೆಳೆದು, ಫಲಕಂಡವರಿಂದ ಜನತೆಗೆ ಒಳಿತಾಗಿರುವುದು ತೀರಾ ಕಡಿಮೆ. ಕೆ.ಆರ್ . ಎಸ್ ಹಾಗು ಮೈಶುಗರ್ ನಿಂದ ಬದುಕು ಕಟ್ಟಿಕೊಂಡು ಈ ಭಾಗದ ಅನೇಕರು ಇಂದಿಗೂ ನಾಲ್ವಡಿ ಕೃಷ್ಣರಾಜ ಒಡೆಯರ್ , ಸರ್ ಎಂ. ವಿಶ್ವೇಶ್ವರಯ್ಯನವರ, ಕೋಲ್ಮನ್ ಭಾವಚಿತ್ರಗಳನ್ನು ಮನೆಯಲ್ಲಿಟ್ಟು ನೆನೆಯುತ್ತಾರೆ. ಆಡಳಿತಗಾರ, ರಾ ಕಾರಣಿ ಯಾವುದೇ ಪಕ್ಷದವರಾಗಲೀ, ಪಂಥದವರಾಗಲೀ, ಜನರ ಒಳಿತಿಗಾಗಿ ಅಭಿವೃದ್ದಿಗಾಗಿ ಶ್ರಮಿಸುವವರನ್ನು ಪಕ್ಷಾತೀತವಾಗಿ ಒಪ್ಪಬೇಕು, ಪ್ರಶಂಸಿಸಬೇಕು.

ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮಂಡ್ಯ ಜಿಲ್ಲೆಗೆ ಹಾಗು ರೈತಾಪಿ ವರ್ಗಕ್ಕೆ ಆಗಲೆಂದು ಆಶಿಸೋಣ. ಮಂಡ್ಯ ಇಂತಹ ಅನೇಕ ಕಾರ್ಯಕ್ರಮಗಳಿಂದ ಅಭಿವೃದ್ಧಿಗೆ ದಿಕ್ಕಿನಡೆಗೆ ಸಾಗಿ ರಾಜ್ಯದ ಕೃಷಿ, ಕಬ್ಬು, ಕೃಷಿ ಸಂಶೋಧನಾ ಕೇಂದ್ರಸ್ಥಾನವಾಗಿ ಮಾರ್ಪಾಡಾಗಬಹುದು.ಸುಮಾರು 95 ವರ್ಷಗಳ ಹಿಂದೆಯೇ ಇಲ್ಲಿ ಮೈಸೂರು ಮಹಾರಾಜರ ದೂರದೃಷ್ಟಿಯ ಫಲದಿಂದ ಕೃಷಿ ಕಾಲೇಜು ಹಾಗೂ ಅಧ್ಯಯನ ಕೇಂದ್ರವು ಸ್ಥಾಪನೆಗೊಂಡು ಪ್ರಸ್ತುತ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Read more Articles on