ನೆಲಮಂಗಲ ಅಥವಾ ಬಿಡದಿ ಬಳಿ 2ನೇ ಏರ್‌ಫೋರ್ಟ್‌ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧಾರ?

| N/A | Published : Feb 20 2025, 01:33 AM IST / Updated: Feb 20 2025, 07:21 AM IST

Bengaluru Airport Pick up Lane

ಸಾರಾಂಶ

ಬೆಂಗಳೂರು ನಗರದ ಸಮೀಪ 2ನೇ ಅಂತಾರಾಷ್ಟ್ರೀಯ ನಿಲ್ದಾಣ ನಿರ್ಮಾಣದ ಸ್ಥಳ ಅಂತಿಮಗೊಳಿಸುವ ಪ್ರಕ್ರಿಯೆ ರಾಜ್ಯ ಬಜೆಟ್‌ ಕಾರಣದಿಂದಾಗಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

 ಬೆಂಗಳೂರು :  ಬೆಂಗಳೂರು ನಗರದ ಸಮೀಪ 2ನೇ ಅಂತಾರಾಷ್ಟ್ರೀಯ ನಿಲ್ದಾಣ ನಿರ್ಮಾಣದ ಸ್ಥಳ ಅಂತಿಮಗೊಳಿಸುವ ಪ್ರಕ್ರಿಯೆ ರಾಜ್ಯ ಬಜೆಟ್‌ ಕಾರಣದಿಂದಾಗಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲಿನ ಒತ್ತಡ ನಿವಾರಣೆಗಾಗಿ ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಈಗಾಗಲೇ ಸ್ಥಳ ಗುರುತಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಅಲ್ಲದೆ, ಫೆ.17ರೊಳಗೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಅಂತಿಮಗೊಳಿಸಿ ಭಾರತ ವಿಮಾನನಿಲ್ದಾಣ ಪ್ರಾಧಿಕಾರ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಈ ಹಿಂದೆ ತಿಳಿಸಿದ್ದರು.

ಅದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ, ಸ್ಥಳ ಅಂತಿಮಗೊಳಿಸಲಾಗುವುದೂ ಎಂದು ಮಾಹಿತಿ ನೀಡಿದ್ದರು. ಆದರೆ, ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವ ಕಾರಣದಿಂದಾಗಿ, ಅವರೊಂದಿಗೆ ಸಭೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ.

ಸದ್ಯದ ಮಾಹಿತಿಯಂತೆ 2ನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಕುಂಬಳಗೋಡು, ಬಿಡದಿ, ಕನಕಪುರ ಹಾಗೂ ನೆಲಮಂಗಲ ಭಾಗದಲ್ಲಿ ಸ್ಥಳ ಗುರುತಿಸಲಾಗಿದ್ದು, ಅದರಲ್ಲಿ ಎರಡು ಸ್ಥಳವನ್ನು ಅಂತಿಮಗೊಳಿಸಬೇಕಿದೆ. ವಿಮಾನನಿಲ್ದಾಣಕ್ಕೆ ಒಟ್ಟಾರೆ 3,500 ರಿಂದ 4 ಸಾವಿರ ಎಕರೆ ಭೂಮಿಯ ಅವಶ್ಯಕತೆಯಿದ್ದು, ಅಷ್ಟು ಪ್ರಮಾಣದ ಭೂಮಿಗಾಗಿ ಸರ್ವೇ ಕಾರ್ಯ ಮಾಡಲಾಗುತ್ತಿದ್ದು, ಬಹುತೇಕ ಅದು ಅಂತಿಮ ಹಂತದಲ್ಲಿದೆ.