ಸಾರಾಂಶ
ಯಲಹಂಕ : ವಿಶೇಷಚೇತನರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ, ಉದ್ಯೋಗ ಸಿಗಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ಲತಾಕುಮಾರಿ ಅಭಿಪ್ರಾಯಪಟ್ಟರು.
ಯಲಹಂಕ ತಾಲೂಕು ಪಂಚಾಯತಿ, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸಿಂಗನಾಯಕನಹಳ್ಳಿಯ ಪುನೀತ್ ರಾಜ್ಕುಮಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷಚೇತನರ ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶೇಷಚೇತನರಿಗೆ ಪ್ರತಿ ಕ್ಷೇತ್ರಗಳಲ್ಲೂ ಮೀಸಲಾತಿ ಮತ್ತು ಉದ್ಯೋಗ ದೊರಕುವಂತಾಗಬೇಕು. ವಿಶೇಷಚೇತನರ ಬಗ್ಗೆ ಬಾಯಿ ಮಾತಿನ ಕರುಣೆ ತೋರುವುದಕ್ಕಿಂತ ನಾವು ಅವರ ಬಗ್ಗೆ ಕಾಳಜಿ ಮತ್ತು ಉತ್ತಮ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದರು
ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ ವೀಲ್ ಚೇರ್, ವಾಕಿಂಗ್ ಸ್ಟಿಕ್, ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುವವರಿಗೆ ಲ್ಯಾಪ್ಟಾಪ್ ಸೇರಿದಂತೆ ವಿವಿಧ ಸಲಕರಣೆಗಳನ್ನು ನೀಡಿ ಗೌರವಿಸಲಾಯಿತು.ಇದೇ ವೇಳೆ ನರೇಗಾ ಐಇಸಿ ಸಂಯೋಜಕ ನವೀನ್ ಬಾಬು ಅವರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಹೊಸ ಮೊಬೈಲ್ ಪೋನ್ ನೀಡಲಾಯಿತು.
ಈ ವೇಳೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅನಿತಾ, ಯೋಜನಾ ನಿರ್ದೇಶಕ ಮೋಹನ್ ಕುಮಾರ್ ಎಲ್., ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಎ. ಕುಲಕರ್ಣಿ, ಸಹಾಯಕ ನಿರ್ದೇಶಕ ಅಮರಯ್ಯ, ಸಿಂಗನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಉಪಾಧ್ಯಕ್ಷ ಎಸ್.ಜಿ. ಪ್ರಶಾಂತ್ ರೆಡ್ಡಿ, ಗ್ರಾ.ಪಂ.ಸದಸ್ಯರಾದ ಪದ್ಮಶ್ರೀ ನಾಗರಾಜರೆಡ್ಡಿ, ಶಾಂತಲಾ ರಾಜಣ್ಣ, ಜೀವಿತಾಮುನಿಕೃಷ್ಣ, ಪಿಡಿಒಗಳಾದ ದಾಮೋದರ್, ನಾಗರಾಜ್ ಸೇರಿದಂತೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ತಾಲೂಕು ಮಟ್ಟದ ವಿಶೇಷಚೇತನರು ಹಾಗೂ ಗ್ರಾಮಸ್ಥರಿದ್ದರು.