ಮೃತ್ಯುಮಂಚದಲ್ಲೂ ಸಾಹಿತ್ಯವನ್ನೇ ಧ್ಯಾನಿಸುತ್ತಿದ್ದ ಕವಿಮಿತ್ರ : ಕೆ ಮುದ್ದುಕೃಷ್ಣ

| N/A | Published : May 31 2025, 10:35 AM IST

HS Venkateshmurthy

ಸಾರಾಂಶ

ಇದು ನನ್ನ ಬದುಕಿನ ಅತ್ಯಂತ ದುರಂತದ ಕ್ಷಣ. ನಾಡು ಕಂಡ ಅಪ್ರತಿಮ ಕವಿ, ಸಾಹಿತಿ, ಗೀತರಚನಕಾರ, ಬುದ್ಧಚರಣದಂಥಾ ಮಹಾಗ್ರಂಥ ಕೊಟ್ಟ ಹೆಚ್‌ ಎಸ್‌ ವೆಂಕಟೇಶ್‌ ಮೂರ್ತಿ ಅಗಲಿಕೆ ನಮಗೆಲ್ಲ ಭರಿಸಲಾರದ ನಷ್ಟ.

ಇದು ನನ್ನ ಬದುಕಿನ ಅತ್ಯಂತ ದುರಂತದ ಕ್ಷಣ. ನಾಡು ಕಂಡ ಅಪ್ರತಿಮ ಕವಿ, ಸಾಹಿತಿ, ಗೀತರಚನಕಾರ, ಬುದ್ಧಚರಣದಂಥಾ ಮಹಾಗ್ರಂಥ ಕೊಟ್ಟ ಹೆಚ್‌ ಎಸ್‌ ವೆಂಕಟೇಶ್‌ ಮೂರ್ತಿ ಅಗಲಿಕೆ ನಮಗೆಲ್ಲ ಭರಿಸಲಾರದ ನಷ್ಟ.

ಹೆಚ್‌ಎಸ್‌ವಿ ಅವರು ನನಗೆ 40 ವರ್ಷಗಳ ಪರಿಚಯ. ಮೈಸೂರು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ,

ಸಿ ಅಶ್ವತ್ಥ, ಹೆಚ್‌ ಕೆ ನಾರಾಯಣ್‌, ನಾನು, ರತ್ನಮಾಲಾ ಪ್ರಕಾಶ್‌, ಮಾಲತಿ ಶರ್ಮಾ, ಪುತ್ತೂರು ನರಸಿಂಹ ನಾಯಕ್‌ ಎಲ್ಲ ಹೆಚ್ಚು ಕಡಿಮೆ ಹೆಚ್‌ಎಸ್‌ವಿ ಅವರ ಗೀತೆಗಳನ್ನೇ ಹಾಡುತ್ತಾ ಬಂದವರು.

1991 ರಲ್ಲಿ ವೆಂಕಟೇಶ್‌ ಮೂರ್ತಿ, ಜಿ ಎಸ್‌ ಶಿವರುದ್ರಪ್ಪ, ಕಣವಿ, ಬಿ ಆರ್‌ ಲಕ್ಷ್ಮಣ್‌ ರಾವ್‌, ವ್ಯಾಸರಾವ್‌, ಎನ್‌ ಎಸ್‌ ಲಕ್ಷ್ಮೀನಾರಾಯಣ್‌ ಭಟ್ಟ, ನಾನು ಹಾಗೂ ಸಿ ಅಶ್ವತ್ಥ, ‘ಧ್ವನಿ’ ಅಂತ ಒಂದು ಸಂಸ್ಥೆ ಮಾಡಿದೆವು. ಆ ಸಂಸ್ಥೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕವಿ, ಗಾಯಕರನ್ನು ಕರೆದುಕೊಂಡು ಹೋಗಿದ್ದೆವು. ಈ ಮೂಲಕ ಸುಗಮಸಂಗೀತವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಕೆಲಸ ಮಾಡಿದ್ದೆವು. ನನ್ನ ಜೀವದ ಗೆಳೆಯ ಅಶ್ವತ್ಥ್‌ ಹಾಗೂ ನಾನು ಇದರ ಮುಂಚೂಣಿಯಲ್ಲಿದ್ದೆವು. ಆಗ ನಮ್ಮ ಒಡನಾಡಿಗಳಾಗಿದ್ದವರು ಹೆಚ್‌ಎಸ್‌ವಿ.

‘ಧ್ವನಿ’ ಸಂಸ್ಥೆಯ ಬಳಿಕ 2003ರಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಸ್ಥಾಪನೆ ಮಾಡಿದೆ. ಅದಕ್ಕೆ ಹೆಚ್‌ಎಸ್‌ವಿ ಪ್ರೀತಿ, ಸಹಕಾರ ಇತ್ತು.

ಹೆಚ್‌ಎಸ್‌ವಿ ಬಹಳ ಸೌಮ್ಯ ಸ್ವಭಾವದವರು. ಅಂಥವರು ಕಾವ್ಯ ಲೋಕದಲ್ಲಿ ಕಾಣಸಿಗುವುದು ಅಪರೂಪ. ಅವರು ಮುನಿಸಿಕೊಂಡದ್ದು, ಗಂಟುಮೋರೆ ಹಾಕಿದ್ದನ್ನು ನಾನು ನೋಡಿಲ್ಲ.

ನನಗೂ ಅವರಿಗೂ ಆಪ್ತ ಸಂಬಂಧ. ಅವರ ಪತ್ನಿ ಮೃತಪಟ್ಟ ಸಂದರ್ಭ ಆಸ್ಪತ್ರೆಯ ಮೂಲೆಯಲ್ಲಿ ಒಂಟಿಯಾಗಿ ನಿಂತಿದ್ದರು. ಮನೆಯವರೆಲ್ಲ ಪಾರ್ಥಿವ ಶರೀರವನ್ನು ಸಾಗಿಸುವ ಕೆಲಸದಲ್ಲಿ ಮಗ್ನರಾಗಿದ್ದರು. ಅವರ ಮುಖದಲ್ಲಿ ನೋವು, ಯಾತನೆ ಎದ್ದು ಕಾಣುತ್ತಿತ್ತು. ಆಗ ಅವರೊಂದಿಗೆ ನಿಂತು ಧೈರ್ಯ ತುಂಬಿದ್ದೆ. ಆ ಬಳಿಕ ನಮ್ಮ ನಡುವೆ ನಿರಂತರ ಸಂಪರ್ಕವಿತ್ತು.

ಅದೊಂದು ರೀತಿಯಲ್ಲಿ ಗಾಯನ ಅಂಟಿನಂತೆ ನಮ್ಮಿಬ್ಬರನ್ನೂ ಬೆಸೆದಿತ್ತು. ಅವರು ನಾನು ಹಾಡಲಿ ಅಂತ ಬರೆದ ಗೀತೆ - ಯಾರಿವಳ್ಯಾರಿವಳ್ ಯಾರಿವಳು

ಕುಡಿಗಣ್ಣಲ್ಲೆ ಮಿಂಚನು ಈಯುವಳು

ಇನ್ನೊಂದು -

ಆಹಾ ಪ್ರೀತಿ ಅದರ ರೀತಿ ಯಾರು ಬಲ್ಲರು

ನೀರಿನಲ್ಲಿ ಇರುವ ಮೀನು ನೀರನರಿಯದು

ತನ್ನ ಒಳಗೆ ಇರುವ ಶಿಲ್ಪ ಶಿಲೆಗೆ ಹೊಳೆಯದು

ತಾಪವೆಂದರೇನು ಎಂದು ಬೆಂಕಿಯರಿಯದು

ಮೌನದಾಳವನ್ನು ಮಾತು ತುಂಬಲಾರದು

ಭಾವೈಕ್ಯತೆ ಬಗ್ಗೆ ‘ಐದು ಬೆರಳು ಕೂಡಿ ಒಂದು ಮುಷ್ಠಿಯು’, ‘ಎಲೆಗಳು ನೂರಾರು’ ಈ ಥರದ ಹಾಡುಗಳನ್ನು ಕೊಟ್ಟಿದ್ದಾರೆ. ಜೊತೆಗೆ ಕೃಷ್ಣನ ಬಗ್ಗೆ ಅನೇಕ ಹಾಡನ್ನು ರಚಿಸಿದ್ದಾರೆ.

ಕಳೆದ ಶುಕ್ರವಾರ ಅವರು ಆಸ್ಪತ್ರೆಗೆ ದಾಖಲಾಗೋದಕ್ಕೂ ಮುಂಚೆ, ನಾನು, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ ಅವರ ಮುಂದೆ ಒಂದಿಷ್ಟು ಹಾಡುಗಳನ್ನು ಹಾಡಿದೆವು. ಆಗಲೂ ಲವಲವಿಕೆಯಿಂದ ಕೇಳ್ತಿದ್ರು.

ಸುಗಮ ಸಂಗೀತದ ಬೆಳವಣಿಗೆಗೆ ಅವರ ಪಾತ್ರ ಬಹುದೊಡ್ಡದು. ಅವರು ಸುಗಮ ಸಂಗೀತಕ್ಕೆ ಪುಷ್ಠಿ ನೀಡಿದವರು. ಸುಗಮ ಸಂಗೀತ ಪರಿಷತ್ತು ವಿಶ್ವವನ್ನೇ ತಲುಪಿರುವುದರ ಹಿಂದೆ ಅವರ ಪಾತ್ರ ದೊಡ್ಡದು. ಕೊನೆ ಉಸಿರಿನವರೆಗೂ ಅವರು ಇದರ ಸಲಹಾಸಮಿತಿ ಅಧ್ಯಕ್ಷರಾಗಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಆಡಳಿತ ಸೇವೆಯಲ್ಲಿದ್ದ ಅಧಿಕಾರಿಯಾಗಿ ಸುಗಮ ಸಂಗೀತದಲ್ಲಿ ಬೆಳೆಯಲು ಕಾಳಿಂಗ ರಾವ್‌ ಕಾರಣರಾದರು. ಆದರೆ ಹೆಚ್‌ಎಸ್‌ವಿ ಸ್ನೇಹ ನಾನು ಕ್ಷೇತ್ರಕ್ಕೆ ಇನ್ನಷ್ಟು ಅಂಟಿಕೊಳ್ಳುವಂತೆ ಮಾಡಿತು.

ಹೆಚ್‌ಎಸ್‌ವಿ ಅವರ ‘ಚಿತ್ರಪಟ ರಾಮಾಯಣ’ವನ್ನು ಬಿ ಜಯಶ್ರೀ ಅವರ ಅಭಿನಯದಲ್ಲಿ ನೋಡಿದ್ದು ರೋಮಾಂಚನ ಮೂಡಿಸಿದ ಅನುಭವ.

ಇನ್ನೊಂದು ರೀತಿಯಲ್ಲಿ ಕನ್ನಡನಾಡಿನ ಋಣ ತೀರಿಸುವ ಹುಮ್ಮಸ್ಸು ಅವರ ರಕ್ತದ ಕಣಕಣದಲ್ಲೂ ಇತ್ತು. ಅವರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾಗ ನಾವೂ ಅವರೊಂದಿಗೆ ಹೋಗಿದ್ದೆವು.

ಅವರು ಮೃತ್ಯಮಂಚದಲ್ಲಿ ಮಲಗಿದ್ದಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತಿದ್ದರು. ಆ ಹೊತ್ತಲೂ ಹತಾಶರಾದವರಲ್ಲ. ವಿಲ್‌ ಪವರ್‌ ಅವರನ್ನು ಇಲ್ಲಿವರೆಗೆ ತಂದು ನಿಲ್ಲಿಸಿತ್ತು. ಈಗ ಅವರಿಲ್ಲ ಅನ್ನುವುದು ಬಹಳ ನೋವನ್ನು ತಂದಿದೆ.

ಮೇರು ವ್ಯಕ್ತಿತ್ವವೊಂದು ನಂದಿ ಹೋಗಿದೆ. ಇದನ್ನು ಮರೆಯೋದು ಕಷ್ಟ.

ಕನ್ನಡ ಸಾಹಿತ್ಯ ಲೋಕದ ಅತ್ಯುತ್ತಮ ಧ್ವನಿ: ನಟ ರಕ್ಷಿತ್‌ ಶೆಟ್ಟಿ

ಇಂದು ಕನ್ನಡ ಸಾಹಿತ್ಯ ಲೋಕವು ತನ್ನ ಅತ್ಯುತ್ತಮ ಧ್ವನಿಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅದು ಎಚ್‌ ಎಸ್‌ ವೆಕಟೇಶಮೂರ್ತಿ. ಆದರೆ, ಅವರ ಮಾತುಗಳು ನಮ್ಮ ಜೀವನವನ್ನು ಬೆಳಗಿಸುತ್ತಲೇ ಇರುತ್ತವೆ. ಎಚ್ಚಸ್ವಿ ಅವರ ಎರಡು ಸುಂದರ ಹಾಡುಗಳು ನನ್ನ ಚಿತ್ರಗಳಲ್ಲಿ ಬಳಕೆ ಆಗಿದೆ. ಇದು ನಮಗಾಗಿ ಎಚ್ಚಸ್ವಿ ಅವರು ಬಿಟ್ಟು ಹೋಗಿರುವ ಒಂದು ಸಣ್ಣ ಪರಂಪರೆ. ಕನ್ನಡದ ಮೇರು ಕವಿ, ಸಾಹಿತಿ ಡಾ. ಎಚ್‌ ಎಸ್‌ ವೆಂಕಟೇಶಮೂರ್ತಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.

 ಬರೆದಂತೆ ಬದುಕಿದ ಭಾವ ಕವಿ: ಗಾಯಕಿ ನಾಗಚಂದ್ರಿಕಾ ಭಟ್‌

ನನ್ನ ಧ್ವನಿಯಲ್ಲಿ ಮೂಡಿ ಬಂದು, ರೆಕಾರ್ಡ್‌ ಆದ ಮೊಟ್ಟ ಮೊದಲ ಭಾವಗೀತೆ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು ಬರೆದಿದ್ದು. ‘ಎಲ್ಲಿರುವೆಯೊ ಘನಶ್ಯಾಮ’ ಎಂದು ಸಾಗುವ ಕೃಷ್ಣನ ಕುರಿತಾದ ಈ ಭಾವಗೀತೆ ಹಾಡು ಮೂಲಕ ನನಗೆ ಎಚ್‌ ಎಸ್‌ ವಿ ಅವರ ಪರಿಚಯ ಆಯಿತು. ಅವರು ಸಾಹಿತಿ, ಕವಿ, ಸಿನಿಮಾ ನಿರ್ದೇಶಕ, ನಟ, ನಾಟಕ ರಚನೆಕಾರ ಹೀಗೆ ಏನೆಲ್ಲ ಆಗಿದ್ದರೂ ಯಾರನ್ನೂ ನೋಯಿಸದ, ಇದು ಚೆನ್ನಾಗಿಲ್ಲ ಎಂದು ಹೇಳಿ ನಿರಾಸೆ ಮಾಡುತ್ತಿರಲಿಲ್ಲ. ತುಂಬಾ ತಾಳ್ಮೆ, ಸಹನೆಯಿಂದ ಕೇಳಿಸಿಕೊಂಡು ಇನ್ನೂ ಚೆನ್ನಾಗಿ ಹಾಡು, ಇನ್ನೂ ಚೆನ್ನಾಗಿ ಬರಯಬಹುದು ಎಂದು ಅತ್ಯಂತ ಸೌಜನ್ಯದಿಂದ ಪ್ರೋತ್ಸಾಹಿಸುತ್ತಿದ್ದ ವ್ಯಕ್ತಿ. ಎಚ್ಚಸ್ವಿ ಅವರು ಸಿಟ್ಟು ಮಾಡಿಕೊಂಡಿದ್ದು ನಾನು ನೋಡೇ ಇಲ್ಲ. ಬಹುಶಃ ಅವರು ಮೇಸ್ಟ್ರು ಆಗಿದ್ದ ಕಾರಣಕ್ಕೋ ಏನೋ ಮತ್ತೊಬ್ಬರ ಪ್ರತಿಯನ್ನು ಗುರುತಿಸಿ, ಬೆಳೆಸುವ ಗುಣ ಅವರಲ್ಲಿತ್ತು.

ವೆಂಕಟೇಶಮೂರ್ತಿ ಅವರು ಅಗಲಿದ್ದಾರೆ ಎಂದಾಗ ನಮ್ಮ ಮನೆಯ ಸದಸ್ಯರೇ ಹೋದಷ್ಟು ದುಃಖವಾಗುತ್ತಿದೆ. ಮಹಕಾವ್ಯ, ವಿಮರ್ಶೆ, ಮಕ್ಕಳ ಸಾಹಿತ್ಯ, ಭಾವಗೀತೆ ಪ್ರಪಂಚ. ನಾಟಕ, ಸಿನಿಮಾ... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸೃಜನಶೀಲ ಕೃಷಿಯಿಂದ ಗುರುತಿಸಿಕೊಂಡು, ತೊಡಗಿಸಿಕೊಂಡವರು. ಅವರು ನಿಂತ ನೀರಲ್ಲ. ನಿರಂತವಾಗಿರುವ ಹರಿಯುತ್ತಿದ್ದ ಸೃಜಶೀಲ ವ್ಯಕ್ತಿತ್ವ ಅವರದ್ದು. ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಿ ನಿಲ್ಲುವ ವ್ಯಕ್ತಿ. ‘ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ, ಮಳೆಸುರಿಸಿ ಹಗುರಾದ ಮುಗಿಲಿನಂತೆ..’ ಎಂದು ಬರೆದು, ತಾವು ಬರೆದಂತೆ ಬದುಕಿದ ಮಹಾನ್‌ ಭಾವ ಕವಿ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು.

ಸೂಕ್ಷ್ಮ ಸಂವೇದನೆಯ ಗೀತೆಗಳ ಜನಕ : ಗಾಯಕಿ ಎಂ ಡಿ ಪಲ್ಲವಿ

ಭಾವ ತುಂಬಿ ಹಾಡಬಹುದಾದ ಹತ್ತಾರು ಭಾವಗೀತೆಗಳಿಗೆ ಸಾಹಿತ್ಯ ನೀಡಿದವರು ಎಚ್ಚಸ್ವಿ. ನನ್ನ ಪುಣ್ಯಕ್ಕೆ ಅವರ ರಚನೆಯ ಅಸಂಖ್ಯಾತ ಗೀತೆಗಳಿಗೆ ನಾನು ಧ್ವನಿಯಾಗಿದ್ದೇನೆ. ಅನ್ನ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಲೋಕದ ಕಣ್ಣಿಗೆ ರಾಧೆ ಕೂಡ, ತೂಗು ಮಂಚದಲ್ಲಿ ಕೂತು, ಎಲೆಗಳು ನೂರಾರು... ಹೀಗೆ ಸಾಕಷ್ಟು ಗೀತೆಗಳನ್ನು ನಾನು ಹಾಡಿದ್ದೇನೆ.

ಎಚ್‌ ಎಸ್‌ ವೆಂಕಟೇಶಮೂರ್ತಿ ಅವರ ಭಾವಗೀತೆಗಳು ಹೇಗಿದ್ದವು ಎಂದರೆ ನಾವು ದಿನ ನಿತ್ಯ ಕೊಡುವ ಯಾವುದೇ ಕಾರ್ಯಕ್ರಮದ ವೇದಿಕೆ ಮೇಲೆ ಹಾಡಬಹುದಿತ್ತು. ಭಾವ ತುಂಬಿ ಹಾಡುವಂತಹ, ಸೂಕ್ಷ್ಮ ಸಂವೇದನೆಯ ಗೀತೆಗಳನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಕೊಟ್ಟವರು. ಹೀಗಾಗಿ ಅವರ ನಿಧನ ಸುಗಮ, ಭಾವಗೀತೆ, ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.

ದಿಗ್ಗಜ ಕವಿಗಳ ಕೊನೆಯ ಕೊಂಡಿ ಎಚ್ಚಸ್ವಿ: ಗಾಯಕಿ ಅರ್ಚನಾ ಉಡುಪ

ನನ್ನ ಗಾಯನ ಮತ್ತು ಎಚ್‌ ಎಸ್‌ ವೆಂಕಟೇಶಮೂರ್ತಿ ಅವರ ಸಾಹಿತ್ಯದ ನಂಟು ‘ಚಿನ್ನಾಮುತ್ತ’ ಚಿತ್ರದಿಂದ ಶುರುವಾಗಿದ್ದು.

ಎಚ್ಚಸ್ವಿ ಅವರ ನಿಧನ ನನ್ನ ಪ್ರಕಾರ ದಿಗ್ಗಜ ಕವಿಗಳ ಸಾಲಿನಲ್ಲಿದ್ದ ಕೊನೆಯ ಕೊಂಡಿ ಮುಗಿದು ಹೋದಂತೆ. ನನ್ನ ಸಂಬಂಧಿರಲ್ಲದ ಇಬ್ಬರನ್ನು ನಾನು ದೊಡ್ಡಪ್ಪ ಅಂತಲೇ ಕರೆಯುತ್ತಿದ್ದೆ. ಒಬ್ಬರು ಎಸ್‌ ಪಿ ಬಾಲಸುಭ್ರಮಣ್ಯಂ ಹಾಗೂ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು. ಅವರೂ ಕೂಡ ನನ್ನ ಮಗಳೇ ಅಂತಲೇ ಕರೆಯುತ್ತಿದ್ದರು. ನಾನು ಅವರ ರಚನೆಯ ಅಸಂಖ್ಯಾತ ಹಾಡುಗಳನ್ನು ಹಾಡಿದ್ದೇನೆ, ಕಂಪೋಸ್‌ ಮಾಡಿದ್ದೇನೆ. ನಾನು ‘ಬಾಳಗಾಯನ’ ಎನ್ನುವ ಆಲ್ಬಂ ಮಾಡಿದಾಗ ಅದರಲ್ಲಿ ನಾಲ್ಕು ಗೀತೆಗಳು ಎಚ್ಚಸ್ವಿ ಅವರದ್ದೇ ಆಗಿದ್ದವು. ಹಾಡುಗಳ ಧ್ವನಿ ಮುದ್ರಣ ಮಾಡುವ ಮೊದಲು ಒನ್ನೆ ಅವರ ಮುಂದೆ ಹಾಡಿದಾಗ ತುಂಬಾ ಚೆನ್ನಾಗಿದೆ ಮಗಳೇ ಅಂತ ಮೆಚ್ಚಿಕೊಂಡರು. ‘ಇರಬೇಕು ಇರುವಂತೆ ಸಾವಿರದ ಚಿಂತೆ ತೊರದು’ ಹಾಡನ್ನು ಹಾಡಿದಾಗ ಅವರ ಕಣ್ಣಿಲ್ಲಿ ನೀರಿತ್ತು.

ಕಳೆದ ವರ್ಷ ರಾಮನವಮಿಗೆ ಅವರು ರಚನೆ ಮಾಡಿದ್ದ ‘ರಾಮ ನವಮಿ’ ಕವನವನ್ನು ಸಂಯೋಜನೆ ಮಾಡಬೇಕು ಎಂದಾಗ ಇದನ್ನು ರೆಕಾರ್ಡ್‌ ಮಾಡಬೇಕು ಅಂದರು. ನಾವು ವಿಡಿಯೋ ಕೂಡ ಮಾಡುತ್ತೇನೆ. ನೀವೇ ವಿಡಿಯೋದಲ್ಲಿ ಇರಬೇಕು ಎಂದಾಗ ಆರೋಗ್ಯ ಸಮಸ್ಯೆ ಇದ್ದರೂ ತುಂಬಾ ಉತ್ಸಾಹದಿಂದ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡರು. ಇದು ನನ್ನ ಅದೃಷ್ಟ.

ಇತ್ತೀಚೆಗೆ ನಾನು ಅವರನ್ನು ನೋಡಲು ಹೋದೆ. ನನ್ನ ಕಂಪೋಸಿಂಗ್‌ನಲ್ಲಿ ಬಂದಿರುವ ಎಚ್ಚಸ್ವಿ ಅವರ ಮೆಚ್ಚಿನ ‘ಏಕೆ ಬಾರದಿರುವೆ ನನ್ನ ಮರಳಿ ಮೋಹನ’ ಹಾಡನ್ನು ಅವರ ಮುಂದೆ ಹಾಡಿದೆ. ಇದೆಲ್ಲವೂ ಈಗ ನೆನಪು ಮಾತ್ರ.

ಕೊನೆಯ ಹಾಡು ಕೇಳದೆ ಹೋದರು: ಪಂಚಮ್ ಹಳಿಬಂಡಿ

ಎಚ್ಚಸ್ವಿ ಅವರನ್ನು ಕನ್ನಡದ ಹಿರಿಯ ಸಾಹಿತಿ ಮತ್ತು ಸಾರಸತ್ವ ಲೋಕದ ತಜ್ಞ ಅಂತಲೇ ಹೇಳಬಹುದು. ಸಹೃದಯಿ ವ್ಯಕ್ತಿತ್ವದ ಅವರಿಗೆ ನಾನು ತರುಣ ಮಿತ್ರನಾಗಿದ್ದೆ. ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಒಂದು ರೀತಿಯಲ್ಲಿ ನಾನು ಅವರ ಮನೆ ಮಗನೇ ಆಗಿದ್ದೆ. ಎಲ್ಲಾ ವರ್ಗದವರನ್ನು ತುಂಬಾ ಪ್ರೀತಿಯಿಂದ ಸಹೃದಯದಿಂದ ಮಾತನಾಡಿಸುತ್ತಿದ್ದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು.

ಎಚ್ಚಸ್ವಿ ಅವರ ಮತ್ತೊಂದು ವಿಶೇಷ ಎಂದರೆ ಯಾವುದೇ ಕಾರ್ಯಕ್ರಮದಲ್ಲಿ ಅವರು ಮಾತನಾಡಲು ನಿಂತರೆ ಜನರನ್ನು ತಮ್ಮತ್ತ ಸೆಳೆಯುತ್ತಿದ್ದರು. ಆ ಮಟ್ಟಿಗೆ ಭಾಷೆಯ ಕೌಶಲ್ಯ ಇತ್ತು. ಅವರು ಬಳಸುತ್ತಿದ್ದ ಪದಪುಂಜಗಳು, ಸುಗಮ ಸಂಗೀತದ ಬಗ್ಗೆ ಅವರಿಗೆ ಇದ್ದ ಒಲವು, ಮತ್ತೊಬ್ಬ ಕವಿಯನ್ನು ಪ್ರೋತ್ಸಾಹಿಸುವ ಅವರ ಔದಾರ್ಯ ಇದೆಲ್ಲವನ್ನು ಮರೆಯಲಾಗದು. ಅವರ ಹಲವು ಗೀತೆಗಳಿಗೆ ನಾನು ಕಂಠದಾನ ಮಾಡಿದ್ದೇನೆ. ಹತ್ತು ದಿನಗಳ ಹಿಂದೆಯಷ್ಟೆ ಒಂದು ರಾತ್ರಿ 10 ಗಂಟೆಗೆ ನನಗೆ ಫೋನ್‌ ಮಾಡಿ, ‘ಪಂಚಮ....’ ಅಂದಾಗ ನನ್ನ ಎದೆ ಝಳ್‌ ಅಂದಿತ್ತು. ನಾನು ಒಂದು ಹಾಡು ಬರೆದಿದ್ದೇನೆ. ನೀನೇ ಅದನ್ನು ರೇಕಾರ್ಡ್‌ ಮಾಡಬೇಕು ಅಂದರು. ‘ಜಗದಲಿ ಸುಂದರ ಎರಡೇ ರಾಮ, ಅವಧೆಯ ರಾಮ, ಮಧುರೆಯ ಶಾಮ’ ಎಂದು ಸಾಗುವ ಗೀತೆ ಅದು. ಫೋನಿನಲ್ಲಿ ನನಗೆ ಇಡೀ ಗೀತೆಯನ್ನು ಚಿಕ್ಕ ಮಗುವಿನಂತೆ ಓದಿ ಹೇಳಿದಾಗ ನನಗೇ ಅಚ್ಚರಿ ಆಯಿತು. ನಿಜ ಹೇಳಬೇಕು ಅಂದರೆ ಈ ಹಾಡನ್ನು ನಾವು ಇವತ್ತು ಅವರಿಗೆ ಕೇ‍ಳಿಸಬೇಕಿತ್ತು. ಆದರೆ, ಅವರಿಲ್ಲ. ತಾವು ಬರೆದ ಹಾಡನ್ನು ಕೇಳಿದೆ ಹೊರಟು ಬಿಟ್ಟಿದ್ದಾರೆ.

ಏನಾದರು ಆಗು ಮೊಲು ಮಾನವನಾಗು ಸಾಲಿಗೆ ಅನ್ವರ್ಥ : ಪುತ್ತೂರು ನರಸಿಂಹನಾಯಕ್‌

ನನಗೆ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು ಸುಮಾರು 40 ವರ್ಷಗಳಿಂದ ಗೊತ್ತು. ಅವರೊಬ್ಬ ಶ್ರೇಷ್ಠ ಕವಿ, ಸಾಹಿತಿ ಎಂಬುದು ನಿಜ. ಆದರೆ, ಅವರ ಜತೆಗೆ ಮಾತನಾಡುತ್ತಿದ್ದಾಗ ಈ ಶ್ರೇಷ್ಠತೆ ಭಾವನೆ ಕಾಣದಂತೆ ನೋಡಿಕೊಳ್ಳುತ್ತಿದ್ದರು. ಅಂದರೆ ಅವರು ನಮ್ಮ ಜತೆಗೆ ಮಾತನಾಡುವಾಗ, ಇದ್ದಾಗ ನಮ್ಮ ಕುಟುಂಬದ ವ್ಯಕ್ತಿ, ಸ್ನೇಹಿತ, ಆಪ್ತನೆಂಬ ಭಾವನೆ ಮೂಡಿಸುತ್ತಿದ್ದರು. ಯಾಕೆಂದರೆ ಕಾವ್ಯದಲ್ಲಿ ಶ್ರೇಷ್ಠತೆ ಕಾಣಬೇಕು ಎಂದು ನಂಬಿದವರು ಎಚ್ಚಸ್ವಿ ಅವರು. ಅಂತ್ಯತ ಸರಳವಾಗಿ ಇದ್ದರು. ಅವರು ನನ್ನ ನೋಡಿದ ಕೂಡಲೇ ನಾಯಕರೇ ಹೇಗಿದ್ದೀರಿ ಅಂತ ತುಂಬಾ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಇದು ಎಲ್ಲಕ್ಕಿಂತ ದೊಡ್ಡದು. ಏಕಕಾಲಕ್ಕೆ ಮಾಸ್ ಮತ್ತು ಕ್ಲಾಸ್ ತಲುಪಿದ ಕವಿ ಅವರು. ಸಾಮಾನ್ಯ ಓದುಗನಿಗೆ ತಲುಪುತ್ತಿದ್ದರು ಎಂಬುದು ಅವರ ಕಾವ್ಯಕ್ಕೆ ಇದ್ದ ಶಕ್ತಿ. ಮನುಷ್ಯನಾಗಿ ತಾನು ಏನೂ ಅಂತ ತೋರಿಸಿ ಕೊಟ್ಟವರು. ‘ಏನಾದರೂ ಆಗು ಮೊದಲು ಮಾನವಾನಗು’ ಎನ್ನುವ ಸಾಲಿಗೆ ಎಚ್ಚಸ್ವಿ ಅವರದ್ದು ಅನ್ವರ್ಥನಾಮ.

ಲೌಕಿಕ, ಅಲೌಕಿದಲ್ಲಿ ಜೀವನ ಪ್ರೀತಿ ಕಲಿಸಿದರು: ಗಾಯಕ ರಾಘವೇಂದ್ರ ಬಿಜಾಡಿ

ಸಾಹಿತ್ಯ, ಬರವಣಿಗೆ, ನಾಟಕ, ಸಿನಿಮಾ ಇವುಗಳ ನಡುವೆಯೂ ಜೀವನ ಪ್ರೀತಿ ಕಲಿಸಿಕೊಟ್ಟ ಮಹಾನ್‌ ವ್ಯಕ್ತಿ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು. ಅಂದರೆ ಲೌಕಿಕ ಜಗತ್ತಿನಲ್ಲಿದ್ದು ಅಲೌಕಿವಾಗಿ ಹೇಗಿರಬೇಕು, ಅಲೌಕಿಕ ಪ್ರಪಂಚದಲ್ಲಿ ಇದ್ದಾಗಲೂ ಲೌಕಿಕವಾಗಿ ಹೇಗೆ ಜೀವನ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಕೆಲವು ಬಾರಿ ಹಾಡುಗಳನ್ನು ಕಂಪೋಸ್‌ ಮಾಡುವಾಗ ‘ಅದು ಬೇಡ ಕಣಯ್ಯ, ಸಾಹಿತ್ಯ ಅಷ್ಟು ಬಿಗಿಯಾಗಿಲ್ಲ’ ಎನ್ನುತ್ತಿದ್ದರು.

‘ಇದು ಚೆನ್ನಾಗಿದೆ. ಇದು ಮಾಡು. ಇದು ನಿನ್ನ ಜೀವನಕ್ಕಾಗಿ. ಇದು ಲೌಕಿಕ. ವರ್ಷದಲ್ಲಿ ಒಂದೋ-ಎರಡೋ ಹಾಡುಗಳನ್ನು ಮಾಡು. ಅದನ್ನು ಯಾರು ಕೇಳುತ್ತಾರೋ, ಇಲ್ಲವೋ, ಲಾಭವೋ, ನಷ್ಟವೋ ಅಂತ ಯೋಚಿಸಬೇಡ. ಅದು ನಿನಗಾಗಿ ಮಾಡಿಕೊಂಡಿರುವುದು. ಇದು ಅಲೌಕಿಕವಾದದ್ದು’ ಎಂದು ತಿಳಿ ಹೇಳಿದವರು ಎಚ್‌ ಎಸ್‌ ವೆಂಕಟೇಶವಮೂರ್ತಿ ಅವರು.

ಬೇರೆಯವರು ರಚಿಸಿದ, ಹಾಡಿದ ಹಾಡುಗಳನ್ನು ಕೂಡ ಕೇಳಿ ಸಂಭ್ರಮಿಸುತ್ತಿದ್ದರು. ಸಣ್ಣ ಸಣ್ಣ ಸಂಗತಿಗಳನ್ನು ಹಾಗೂ ಸಂತೋಷದ ಕ್ಷಣಗಳನ್ನು ಮಕ್ಕಳಂತೆ ಸಂಭ್ರಮಿಸುತ್ತಾ, ಹಿರಿ-ಕಿರಿಯರನ್ನು ಸಮಾನವಾಗಿ ಮಾತನಾಡಿಸುತ್ತಾ ಆ ಮೂಲಕ ಜೀವನ ಅಂದರೆ ಏನೂ ಅಂತ ತೋರಿಸಿಕೊಟ್ಟವರು ಎಚ್ಚಸ್ವಿ.

ಅಪಾರ ಜ್ಞಾನ ಇದ್ದ ನಗುಮುಖದ ವ್ಯಕ್ತಿ : ನಟ ವಿಜಯ್‌ ರಾಘವೇಂದ್ರ

ಅವರ ಬರಹವೇ ನನ್ನ ನಟನೆಯಲ್ಲಿ ಬಂದ ‘ಚಿನ್ನಾರಿಮುತ್ತ’ ಸಿನಿಮಾ. ಆದರೆ, ಎಚ್‌ ಎಚ್‌ ವೆಂಕಟೇಶಮೂರ್ತಿ ಅವರ ಬಗ್ಗೆ ಹೇಳಬೇಕು ಎಂದರೆ ‘ಚಿನ್ನಾರಿಮುತ್ತ’ ಚಿತ್ರಕ್ಕೂ ಮೀರಿದ್ದು. ಯಾಕೆಂದರೆ ಸಾಹಿತ್ಯಕ್ಕೆ ಅವರ ಕೊಡು ಅಪಾರ. ನನಗೆ ಅವರ ಸಾಹಿತ್ಯದ ಕೃಷಿ, ಬರಹಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದಿದ್ದರೂ ಎಚ್ಚಸ್ವಿ ಅಂಕಲ್‌ ಅಂದರೆ ನಗು ಮುಖವೊಂದು ಕಣ್ಣ ಮುಂದೆ ಬರುತ್ತದೆ.

ಪ್ರೀತಿಯಿಂದ ಬರೆಯುತ್ತಿದ್ದವರು. ಯಾರೇ ಕಂಡರೂ, ನಾನು ಎಲ್ಲೇ ಕಂಡರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದವರು. ನನ್ನ ಪ್ರಕಾರ ಎಚ್ಚಸ್ವಿ ಅಂಕಲ್‌ ಎಂದರೆ ಅಪಾರ ಜ್ಞಾನ ಇದ್ದ ನಗು ಮುಖದ ಚೇತನ. ಈಗ ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ನಾವು ಮಾತಿನಲ್ಲಿ ಹೇಳಿ ಶೋಕ ವ್ಯಕ್ತಪಡಿಸಬಹುದು. ಆದರೆ, ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿನ ಅವರ ಸೇವೆಯ ಮೂಲಕ ಎಚ್ಚಸ್ವಿ ಅವರು ಸದಾ ನಮ್ಮೊಂದಿಗೆ ಇದ್ದಾರೆ.

ಎಚ್ಚಸ್ವಿ, ನನ್ನ ಚಿನ್ನಾರಿ ಮುತ್ತಣ್ಣ ಸೃಷ್ಟಿಕರ್ತ: ನಿರ್ದೇಶಕ ಟಿ ಎಸ್‌ ನಾಗಭರಣ

ಚಿನ್ನಾರಿಮುತ್ತ ಸೃಷ್ಟಿಕರ್ತ ನಮ್ಮನ್ನು ಅಗಲಿದ್ದಾರೆ. 70ರ ದಶಕದಲ್ಲಿ ಸಿನಿಮಾ, ಸಾಹಿತ್ಯ ಹಾಗೂ ರಂಗಭೂಮಿ ಹೀಗೆ ಪ್ರತಿಯೊಂದರಲ್ಲೂ ಹೊಸ ಮೆರುಗು ಕಾಣುತ್ತಿದ್ವಿ. ಅಂಥ ಮೆರುಗಿನ ಕಾಲಘಟ್ಟದಲ್ಲಿ ಅದ್ಭುತವಾದ ಸಾಹಿತಿಗಳು, ನಾಟಕಗಾರರು, ಸಿನಿಮಾದವರು ಇದ್ದರು. ನಾವು ಅಂಥ ಕಾಲಘಟ್ಟದಲ್ಲಿ ಇದ್ದೇವೆ ಎಂಬುದೇ ನಮ್ಮ ಅದೃಷ್ಟ. ಪಿ ಲಂಕೇಶ್‌, ಗಿರೀಶ್‌ ಕಾರ್ನಾಡ್‌, ಇವರ ಸಾಲಿನಲ್ಲಿ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರು. ಇವರೆಲ್ಲ ಕನ್ನಡ ಸಾಹಿತ್ಯವನ್ನು ವಿಭೃಂಬಿಸಿದರು. ಎಚ್ಚಸ್ವಿ ಅವರು ನಿರಂತರವಾಗಿ ಬರೆಯುತ್ತಿದ್ದವರು. ಯಾವುದೋ ಒಂದು ಆಯಾಮಕ್ಕೆ ಸೀಮಿತವಾದವರಲ್ಲ. ಸಿನಿಮಾ ಸಾಹಿತ್ಯ, ನಾಟಕ, ಕವನ, ಹಾಡುಗಳು, ಪದ್ಯಗಳು, ಕಿರುತೆರೆಯಲ್ಲಿ ಶೀರ್ಷಿಕೆ ಗೀತೆಗಳು ಹೀಗೆ ಎಲ್ಲಾ ರೀತಿಯ ಪ್ರಕಾರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದವರು.

ಸಿನಿಮಾಗಳಿಗೆ ಬರೆಯುವುದು ಎಂದರೆ ಕೀಳರಿಮೆಯಾಗಿ ನೋಡುತ್ತಿದ್ದ ಕಾಲದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರೂ ತಾನು ಸಿನಿಮಾ ಸಾಹಿತಿಯಾಗಿ ಏನು ಮಾಡಬೇಕು ಎಂದು ಯೋಚಿಸಿ, ಆ ನಿಟ್ಟಿನಲ್ಲಿ ಹತ್ತಾರು ಹಾಡುಗಳನ್ನು ಸಿನಿಮಾಗಳಿಗೆ ಕೊಟ್ಟವರು. ನಾಟಕಗಳಿಗೆ ಕತೆ ನೀಡಿದವರು. ಆ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬರಲು ಬಹಳಷ್ಟು ಸಾಹಿತಿಗಳಿಗೆ ಸ್ಫೂರ್ತಿ ಆದವರು ಎಚ್ಚಸ್ವಿ ಅವರು. ನಿಜವಾಗಲೂ ಗುರುವಿನ ಸ್ಥಾನ ತುಂಬಿದ ನನ್ನ ಗುರುಗಳು ಅವರು. ನಾನು ಅವರನ್ನು ಗುರುಗಳೇ ಅಂತಲೇ ಕರೆಯುತ್ತಿದ್ದೆ. ಅವರು ನನ್ನ ಭರಣರೇ ಅಂತ ಬಾಯಿತುಂಬಾ ಕರೆಯುತ್ತಿದ್ದರು.

ನನ್ನ ಸದಾ ಕಾಲ ಮನತುಂಬಿ ಹರಿಸಿದ ನನ್ನ ಸ್ನೇಹಿತ, ಗುರು ಮತ್ತು ಸ್ಫೂರ್ತಿ ಎಂದರೆ ಎಚ್ಚಸ್ವಿ. ಮತ್ತೊಂದು ‘ಚಿನ್ನಾರಿಮುತ್ತ’ ಮಾಡಕ್ಕೆ ಆಗಲ್ಲ. ಅದು ಎಚ್ಚಸ್ವಿ ಅವರಿಗೆ ಸಾಧ್ಯ. ನುಡಿದಂತೆ ನಡೆದವರು. ನಮಗೂ ಅದನ್ನೇ ಹೇಳಿಕೊಟ್ಟವರು. ಪ್ರಯೋಗ ಶೀಲ ಮನಸ್ಸಿನ ಎಚ್‌ ಎಸ್‌ ವೆಂಕಟೇಶಮೂರ್ತಿ ಅವರ ಜೊತೆಗಿನ ಪಯಣ, ಒಡನಾಟ ಅಜರಾಮರ.

ನನ್ನ ಕನ್ನಡ ಮೇಷ್ಟ್ರು

ನಾನು ಕಾಲೇಜಿಗೆ ಸೇರಿದಾಗ ನನಗೆ ಕನ್ನಡ ಮೇಷ್ಟರಾಗಿ ಸಿಕ್ಕಿದವರು ಅವರು. ಮೊದಲ ದಿನ ನನಗೆ ಕೆ ಎಸ್ ನರಸಿಂಹಸ್ವಾಮಿ ಅವರ ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಪದ್ಯ ಕೊಟ್ಟು, ವಿಮರ್ಶೆ ಬರಿ ಅಂದಿದ್ದರು. ನಾನಾಗ ಬರೆದಿದ್ದೆ. ನಂತರ ಆ ಪದ್ಯವನ್ನು ಹೇಗೆ ನೋಡಬೇಕು, ಓದಬೇಕು ಅನ್ನುವುದನ್ನು ಹೇಳಿಕೊಟ್ಟರು.

ಸಾರಸ್ವತ ಲೋಕದ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದ್ದೇ ಅವರು. ಸಾಹಿತ್ಯವನ್ನು ಹೇಗೆ ನೋಡಬೇಕು ಅಂತ ಹೇಳಿಕೊಟ್ಟವರು ಕೂಡ. ನನ್ನ ಕನ್ನಡ ಮೇಷ್ಟ್ರು ಅಂತ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ. ಅವರು ಕೂಡ ಎಲ್ಲೇ ಸಿಕ್ಕರೂ ನನ್ನ ಮೆಚ್ಚಿನ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅದಕ್ಕಿಂತ ಹೆಚ್ಚಿಗೇನು ಬೇಕು?

ಹಿಂದೊಮ್ಮೆ ನನ್ನ ಬಗ್ಗೆ ಮಾತಾಡುತ್ತಾ `ನನ್ನ ಕೆನ್ನೆಯ ಮೇಲಿನ ಕಂಬನಿಯನ್ನು ಒಂದು ತಂಗಾಳಿ ಒರೆಸಿ ಹೋಯಿತು. ಧನ್ಯವಾದ ಹೇಳೋಣ ಅಂತ ತಿರುಗಿ ನೋಡುವಷ್ಟರಲ್ಲಿ ಆ ತಂಗಾಳಿ ಮಾಯವಾಗಿತ್ತು. ಈ ದಕ್ಷಿಣ ಕನ್ನಡವರೇ ಹೀಗೆ, ಥ್ಯಾಂಕ್ಸ್ ಹೇಳೋದಕ್ಕೂ ಕಾಯೋದಿಲ್ಲ'' ಅಂತ ಹೇಳಿದ್ದರು. ಆ ನೆನಪು ನನ್ನಲ್ಲಿದೆ.

ನುಡಿದಂತೆ ನಡೆದ ವಿನಯವಂತರು ಅವರು. ಅವರ ನಿರ್ಗಮನ ನೋವು ತಂದಿದೆ.

-ಪ್ರಕಾಶ್ ರೈ

ಭಾವಗೀತೆ ಪರಂಪರೆಯ ಬಹು ಮುಖ್ಯ ಕೊಂಡಿ

ಕನ್ನಡದಲ್ಲಿ ಭಾವಗೀತೆ ಪರಂಪರೆ ನವೋದಯ ಕವಿಗಳಿಂದ ಆರಂಭವಾಯಿತು. ಆರಂಭದಲ್ಲಿ ಕುವೆಂಪು, ಬೇಂದ್ರೆ, ನಿಸಾರ್ ಅಹಮದ್, ಗೋಪಾಲಕೃಷ್ಣ ಅಡಿಗ, ವಿ ಕೃ ಗೋಕಾಕ, ಜಿ ಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ, ಚನ್ನವೀರ ಕಣವಿ, ಸಿದ್ದಯ್ಯ ಪುರಾಣಿಕರಂಥ ಕವಿಗಳಿಂದ ಭಾವಗೀತೆಗಳು ಪ್ರವರ್ಧಮಾನಕ್ಕೆ ಬಂದವು. ಅವುಗಳನ್ನು ಎರಡನೆಯ ಹಂತದಲ್ಲಿ ಮುಂದುವರಿಸಿಕೊಂಡು ಹೋದ ಕವಿಗಳೆಂದರೆ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ಬಿ ಆರ್ ಲಕ್ಷ್ಮಣರಾವ್, ಎಂ ಎನ್ ವ್ಯಾಸರಾವ್, ಸುಬ್ರಾಯ ಚೊಕ್ಕಾಡಿ, ಎಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು. ಈ ಕವಿಮಾಲೆಯಲ್ಲಿ ಭಾವಗೀತೆಯ ಜತೆ ಗಟ್ಟಿಯಾಗಿ ನಿಂತವರು ಎಚ್ ಎಸ್ ವೆಂಕಟೇಶಮೂರ್ತಿ. ಭಾವಗೀತೆಯ ಪರಂಪರೆಯ ಬಹುಮುಖ್ಯ ಕೊಂಡಿಯೆಂದು ಅವರನ್ನು ಕರೆಯಬಹುದು. ನವಿರಾದ ರಚನೆ, ಭಾವಪೂರ್ಣ ಕವಿತೆಗಳನ್ನು ಅವರು ಬರೆದು ಅಸಂಖ್ಯಾತ ಗಾಯಕರಿಗೆ ಸ್ಫೂರ್ತಿಯಾಗಿದ್ದರು.

ಹೆಚ್‌ಎಸ್‌ವಿ ಅವರಿಂದ ಬಹುಮಾನ ಪಡೆದ ಧನ್ಯತೆ : ಗೀತಾ ವಸಂತ

ಕವಿ ಮನುಕುಲದ ಹಾಡುಗಾರ. ಕಾಲದಲ್ಲಿ ಕಾಲೂರಿ ನಿಂತೇ ಕಾಲಾತೀತವಾದ ಬದುಕಿನ ಚೆಲುವನ್ನು ಹಾಗೂ ಸಂಕಟಗಳನ್ನುಹಾಡುವುದು ಕವಿಯ ಅಭೀಪ್ಸೆ. ಕವಿ ಕಾಲವಾದರೂ ಹಾಡು ಮುಗಿಯುವುದಿಲ್ಲ. ಸಾವಿನೊಂದಿಗೆ ಜೀವಿತದ ಪಾಡಷ್ಟೇ ಅಳಿಯುತ್ತದೆ. ಕಾವ್ಯವೆಂಬ ಜೀವಕೇಂದ್ರದ ನಾಡಿಮಿಡಿತ ಹಿಡಿದ ಕವಿ ಎಚ್ಚೆಸ್ವಿ. ಒಂದು ಭಾವದ ಒಳಗನ್ನು ಧ್ಯಾನಿಸಿ ಬರೆಯಬಲ್ಲ ಅಪರೂಪದ ಅಂತಃಸತ್ವದ ಕವಿ ಅವರು.

ಜೀವಪ್ರೇಮದ ಒಳಗಣ್ಣು ತೆರೆದಂತೆ ಬರೆಯುವ ಅವರಿಗೆ ರಾಧೆ ಲೋಕಕ್ಕೆ ಕೃಷ್ಣನನ್ನು ತೋರುವ ಕಣ್ಣಾಗಬಲ್ಲಳು. ಬುದ್ದಚರಿತೆಯ ಮೂಲಕ ಬದುಕಿನ ಮತ್ತೊಂದು ನೆಲೆಯ ದರ್ಶನವಾಗಬಲ್ಲದು. ಕಾವ್ಯ ನಾಟಕ ಮಕ್ಕಳ ಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಬರೆದ ಅವರು ಕನ್ನಡದ ಭಾವಜಗತ್ತನ್ನು ಸಂಪನ್ನಗೊಳಿಸಿದ ಬರಹಗಾರ. ಅವರು ಬುದ್ದ ಪ್ರಜ್ನೆಯೆಡೆ ಕೊನೆಗೆ ಚಲಿಸಿದ್ದೂ ವಿಶೇಷ. ಮೆಲು ಮಾತಿನ ಮೃದು ಹೃದಯದ ಎಚ್ಚೆಸ್ವಿ ಮನುಷ್ಯ ಸಂಬಂಧಗಳ ಘನತೆಗೂ ಮಾದರಿಯಾಗಿದ್ದವರು.

ಅವರೊಂದಿಗೆ ಕೆಲ ನೆನಪುಗಳ ಋಣವಿದೆ. ಕಾಲೇಜು ದಿನಗಳಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಾಗ ಅವರೇ ಬಹುಮಾನ ನೀಡಿದ್ದು. ನನ್ನ ಪರಿಮಳದ ಬೀಜ ಸಂಕಲನಕ್ಕೆ ಮುನ್ನುಡಿ ಬರೆದು ಹರಸಿದ್ದರು. ಈ ಕಾವ್ಯಯಾನ ಕೊನೆಯಾಗದಿರಲಿ.

Read more Articles on