ಸಾರಾಂಶ
ಬೆಂಗಳೂರು : ಬಡ ದೇಶವಾಗಿದ್ದ ದಕ್ಷಿಣ ಕೊರಿಯಾದಲ್ಲಿ 1960ರಲ್ಲಿ ಕಲೆ, ಸಂಸ್ಕೃತಿ, ಪಾರಂಪರಿಕ ವೃತ್ತಿ ಕೌಶಲ್ಯಗಳಿಗೆ ಅಲ್ಲಿನ ಸರ್ಕಾರ ಆದ್ಯತೆ ನೀಡಿದ ಬಳಿಕ ಆ ದೇಶದ ಬೆಳವಣಿಗೆಯ ದಿಕ್ಕು ಬದಲಾಯಿತು ಎಂದು ಚೆನ್ನೈನ ದಕ್ಷಿಣಚಿತ್ರ ಮ್ಯೂಸಿಯಂ ಸಂಸ್ಥಾಪಕಿ ಡಾ। ಡೆಬೋರಾ ತ್ಯಾಗರಾಜನ್ ಹೇಳಿದರು.
ಶನಿವಾರ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ತಮ್ಮ ‘ಕರ್ನಾಟಕ ರೂರಲ್ ಕ್ರಿಯೇಟಿವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಟ್ಟ ದೇಶ ದಕ್ಷಿಣ ಕೊರಿಯಾ ಇಂದು ವ್ಯಾಪಕವಾಗಿ ಅಭಿವೃದ್ಧಿ ಸಾಧಿಸಿದೆ. ಕೊರಿಯಾದ ಕೆ-ಪಾಪ್, ಕೆ-ಡ್ರಾಮಾಗಳು ಭಾರತ ಸೇರಿದಂತೆ ಜಗತ್ತಿನಾದ್ಯಂತ ಖ್ಯಾತಿ ಗಳಿಸಿವೆ. ಅದು ರಾತ್ರೋ ರಾತ್ರಿ ಬೆಳೆದಿದ್ದಲ್ಲ. 1960ರ ದಶಕದಲ್ಲಿ ಸುಮಾರು 100 ಕಲಾ ಕೇಂದ್ರಗಳು ಸ್ಥಾಪನೆಯಾದವು. ಆ ದೇಶದ ಇತಿಹಾಸದಲ್ಲಿ ಬೆಳೆದು ಬಂದ ಎಲ್ಲ ಮಾದರಿಯ ಕಲೆಗಳಿಗೆ ಅಲ್ಲಿನ ಸರ್ಕಾರ ಉತ್ತೇಜನ ನೀಡಿತು ಎಂದರು.
ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಟಿ.ಪ್ರಭಾಕರ್ ಮಾತನಾಡಿ, ಇಡೀ ದಕ್ಷಿಣ ಭಾರತದ ಕಲೆ, ಸಂಸ್ಕೃತಿಯನ್ನು ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ ಎಂದರು.
ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಮಾಜಿ ಅಧ್ಯಕ್ಷೆ ಗೀತಾ ರಾವ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.