ಸಾರಾಂಶ
ಬೆಂಗಳೂರು : ಬೆಂಗಳೂರು ನೇತ್ರ ವಿಜ್ಞಾನ ಸಂಘವು (ಬೆಂಗಳೂರು ಅಪ್ತಾಲ್ಮಿಕ್ ಸೊಸೈಟಿ) ಭಾನುವಾರ ಹೊಸ ದಾಖಲೆಗೆ ಮುನ್ನುಡಿ ಬರೆಯಿತು. ರಾಜ್ಯದಲ್ಲೇ ಮೊದಲ ಮೌನ ಶೃಂಗಸಭೆಯನ್ನು ಆಯೋಜಿಸಿದ ಹೆಗ್ಗಳಿಕೆಗೆ ಸಂಘ ಪಾತ್ರವಾಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಸಂಘದಿಂದ ಆಯೋಜಿಸಿದ್ದ ಬಾಸ್ ಸಮ್ಮಿಟ್ನಲ್ಲಿ ವೈದ್ಯಕೀಯ ಕ್ಷೇತ್ರದಲ್ಲೇ ಮೊದಲ ‘ಮೌನ ಶೃಂಗಸಭೆ’ಯನ್ನು ಪರಿಚಯಿಸಿ ಇತಿಹಾಸ ನಿರ್ಮಿಸಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಮತ್ತು ಪ್ರತಿನಿಧಿಗಳು ಸಾಂಪ್ರದಾಯಿಕ ಧ್ವನಿವರ್ಧಕ ವ್ಯವಸ್ಥೆಗಳ ಬದಲಿಗೆ ಟ್ರಾನ್ಸ್ಮೀಟರ್ಗಳಿಗೆ ಸಂಪರ್ಕಗೊಂಡಿರುವ ವೈಯಕ್ತಿಕ ವೈರ್ಲೆಸ್ ಹೆಡ್ಫೋನ್ಗಳನ್ನು ಬಳಸಿದ್ದು ವಿಶೇಷವಾಗಿತ್ತು.
ಈ ಬಗ್ಗೆ ಸಂಘದ ಅಧ್ಯಕ್ಷ ಡಾ.ಪಿ. ಎಲಂಕುಮಾರನ್ ಮಾತನಾಡಿ, ಇದೇ ಮೊದಲ ಬಾರಿಗೆ ನಾವು ವೈದ್ಯಕೀಯ ಕ್ಷೇತ್ರದಲ್ಲಿ ಮೊದಲ ಮೌನ ಶೃಂಗಸಭೆಯನ್ನು ಪರಿಚಯಿಸಿದ್ದೇವೆ. ಪ್ರತಿಯೊಬ್ಬರೂ ಹೆಡ್ ಫೋನ್ ಮೂಲಕ ಭಾಷಣ ಆಲಿಸಿದರು. ಸಂವಹನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು.
ನಿಶ್ಯಬ್ದ ವಾತಾವರಣ:
ಈ ಪ್ರಗತಿಪರ ತಂತ್ರಜ್ಞಾನವು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅನೇಕ ಸೆಷನ್ಗಳನ್ನು ಯಾವುದೇ ಅಡೆತಡೆಯಿಲ್ಲದೇ ನಡೆಸಲು ಅವಕಾಶ ಕಲ್ಪಿಸಿತು. ಒಂದೇ ಸಮಯದಲ್ಲಿ ಅಕ್ಕಪಕ್ಕದಲ್ಲೇ ಆಯೋಜಿಸಿದ್ದ ಮೂರು ಗೋಷ್ಠಿಗಳಲ್ಲಿ ತಮಗೆ ಯಾವುದು ಇಷ್ಟವೋ ಅದನ್ನು ಟ್ಯೂನ್ ಮಾಡಿಕೊಳ್ಳಲು ಪ್ರತಿನಿಧಿಗಳಿಗೆ ಅವಕಾಶವಿತ್ತು. ಆಡಿಯೋ ಸ್ಪಷ್ಟತೆಯೂ ಇದ್ದು ನಿಶ್ಯಬ್ದದ ವಾತಾವರಣ ನಿರ್ಮಾಣವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.
ಶೃಂಗಸಭೆಯಲ್ಲಿ ಅಖಿಲ ಭಾರತ ನೇತ್ರ ವಿಜ್ಞಾನ ಸೊಸೈಟಿಯ ಅಧ್ಯಕ್ಷ ಡಾ.ಪಾರ್ಥ ಬಿಸ್ವಾಸ್, ನವದೆಹಲಿಯ ಏಮ್ಸ್ನ ನೇತ್ರ ವಿಜ್ಞಾನ ಪ್ರಾಧ್ಯಾಪಕಿ ಡಾ.ನಮ್ರತಾ ಶರ್ಮಾ ಮತ್ತಿತರರು ಪಾಲ್ಗೊಂಡಿದ್ದರು.