ಸಾರಾಂಶ
- ಶ್ರೀಧರ್ ವೆಂಕಟ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ, ಅಕ್ಷಯಪಾತ್ರ ಫೌಂಡೇಶನ್
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುವ ಯೋಜನೆಯು ಭಾರಿ ಮಹತ್ವದ್ದಾಗಿದ್ದು, ವಿಶ್ವದಾದ್ಯಂತ ಈ ಯೋಜನೆಗೆ ಮನ್ನಣೆ ದೊರಕಿದೆ. ಪ್ರಸ್ತುತಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಅವಶ್ಯಕತೆ ಇದ್ದು, ಜಾಗತಿಕ ಮಟ್ಟದ ಪಾಲುದಾರಿಕೆಗಳನ್ನು ಬಳಸಿಕೊಂಡು ಈ ಯೋಜನೆಯನ್ನು ನಾವು ಮತ್ತಷ್ಟು ಬಲಪಡಿಸಿಕೊಳ್ಳಬಹುದಾಗಿದೆ. ಆ ಮೂಲಕ ದೊಡ್ಡ ಪ್ರಮಾಣಶಾಲಾ ಮಕ್ಕಳ ಹಸಿವನ್ನು ತೊಡೆಯಬಹುದಾಗಿದೆ.ಪೌಷ್ಟಿಕತೆಯು ಮಕ್ಕಳಿಗೆ ಬಹಳ ಮುಖ್ಯ. ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ, ಒಟ್ಟಾರೆ ಆರೋಗ್ಯಕ್ಕೆ ಮತ್ತು ಕಲಿಕೆಯ ಸಾಮರ್ಥ್ಯ ಹೆಚ್ಚಳಕ್ಕೆ ಹಾಗೂ ಶೈಕ್ಷಣಿಕ ಸಾಧನೆ ಮಾಡುವುದಕ್ಕೆ ಪೌಷ್ಟಿಕತೆ ಅತ್ಯಗತ್ಯವಾಗಿದೆ. ಹಲವಾರು ಅಧ್ಯಯನ ವರದಿಗಳು ಶಿಕ್ಷಣ ಮತ್ತು ಪೌಷ್ಟಿಕತೆಗೆ ಹತ್ತಿರದ ಸಂಬಂಧ ಇರುವುದನ್ನು ಸಾರಿವೆ. 2006ರಲ್ಲಿ ವಿಶ್ವ ಬ್ಯಾಂಕ್ ನಡೆಸಿದ ಅಧ್ಯಯನದ ಪ್ರಕಾರ ಸೂಕ್ತ ಪೋಷಣೆ ಇಲ್ಲದೆಕುಪೋಷಣೆಗೆ ಒಳಗಾದ ಮಕ್ಕಳು ಶಾಲೆಯಲ್ಲಿ ಕಲಿಯುವ ಸಾಮರ್ಥ್ಯದಲ್ಲಿ ಹಿನ್ನೆಡೆ ಅನುಭವಿಸುತ್ಕಾರೆ. 2009ರ ಯೂನಿಸೆಫ್ ವರದಿಯ ಪ್ರಕಾರ ಕುಪೋಷಣೆಯಿಂದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಮಕ್ಕಳ ಬೌದ್ಧಿಕ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಈ ಅಧ್ಯಯನಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೌಷ್ಟಿಕತೆ ವಹಿಸುವ ಪಾತ್ರವನ್ನು ತಿಳಿಸಿದ್ದು, ಇದರಿಂದ ಶಾಲಾಊಟದಯೋಜನೆಗಳು ಅಥವಾ ಶಾಲಾ ಪೌಷ್ಟಿಕ ಯೋಜನೆಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಶಾಲಾ ಮಧ್ಯಾಹ್ನದ ಊಟ ಯೋಜನೆಯಿಂದ ಮಕ್ಕಲಿಗೆ ಶಾಲೆಯಲ್ಲಿ ಪೌಷ್ಟಿಕ ಆಹಾರ ದೊರೆಯುತ್ತದೆ. ಈ ಯೋಜನೆಯು ಜಗತ್ತಿನ ಲಕ್ಷಾಂತರ ಮಕ್ಕಳಿಗೆ ವರದಾನವಾಗಿದೆ. ಉತ್ತಮ ಪೌಷ್ಟಿಕ ಆಹಾರ ಸೇವಿಸುವ ಮಗು ಆರೋಗ್ಯವಾಗಿರುತ್ತದೆ, ಅದರ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಶೈಕ್ಷಣಿಕ ಯಶಸ್ಸನ್ನು ಸಾಧಿಸಲು ಬೇಕಾಗುವ ಸಾಮರ್ಥ್ಯ ಗಳಿಸುತ್ತದೆ. ಇದರಿಂದ ಮುಂದಿನ ದಿನಗಳ ಬೆಳವಣಿಗೆಗೆ ಸಹಾಯವಾಗುತ್ತದೆ.ವಿಶ್ವದಾದ್ಯಂತ ಹಲವಾರುದೇಶಗಳು ಮಕ್ಕಳ ಕುಪೋಷಣೆ ಮತ್ತು ಹಸಿವಿನ ಸಮಸ್ಯೆಯನ್ನು ತೊಡೆಯಲು ಶಾಲಾ ಊಟದ ಯೋಜನೆಗಳನ್ನು ರೂಪಿಸಿಅನುಷ್ಠಾನಗೊಳಿಸಿವೆ. ಆದರೆ ಬಹುತೇಕ ಕಡೆಗಳಲ್ಲಿ ಈ ಯೋಜನೆಗಳು ಆರ್ಥಿಕ, ಸಾಗಾಣಿಕೆ, ಮೂಲಸೌಕರ್ಯ ಮಿತಿಗಳು ಮತ್ತು ಮೇಲ್ವಿಚಾರಣೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಾಗಿ ಈ ನೆಲೆಯಲ್ಲಿ ಜಾಗತಿಕ ಮಟ್ಟದ ಪಾಲುದಾರಿಕೆಗಳು ರೂಪುಗೊಂಡರೆ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಯೋಜನೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಬಹುದಾಗಿದೆ ಮತ್ತು ಹೆಚ್ಚಿನ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಬಹುದಾಗಿದೆ.
ಜಾಗತಿಕ ಮಟ್ಟದ ಪಾಲುದಾರಿಕೆಗಳಿಂದ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳನ್ನು ಒಗ್ಗೂಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಸರ್ಕಾರದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಸಹಭಾಗಿತ್ವಗಳು ತಂತ್ರಜ್ಞಾನವನ್ನು ಬಳಸಿಕೊಂಡು ಸಾಮೂಹಿಕ ಪ್ರಯತ್ನಗಳ ಮೂಲಕ ಯೋಜನೆಯನ್ನು ಸುಧಾರಿಸಲು ಯತ್ನಿಸುತ್ತದೆ. ಉದಾಹರಣೆಗೆತಯಾರಿಕೆ ಮತ್ತು ವಿತರಣಾ ವ್ಯವಸ್ಥೆಯನ್ನು ಸುಧಾರಿಸುವುದು ಅಥವಾ ಮೊಬೈಲ್ ಆಪ್ಗಳನ್ನು ಬಳಸಿಕೊಂಡು ಮೇಲ್ವಿಚಾರಣೆ ಮಾಡುವುದು ಇತ್ಯಾದಿ ಮಾಡುವ ಮೂಲಕ ಯೋಜನೆಯನ್ನು ಉನ್ನತಿಗೆ ತೆಗೆದುಕೊಂಡು ಹೋಗುತ್ತವೆ.ವಿಶೇಷವಾಗಿ ಉತ್ತಮ ಕಾರ್ಯಾಚರಣಾ ಪದ್ಧತಿಗಳು, ಸಂಶೋಧನಾ ಮಾಹಿತಿ ಮತ್ತು ಹೊಸ ಆವಿಷ್ಕಾರ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ದೇಶಗಳು ರಾಷ್ಟ್ರೀಯ ಶಾಲಾ ಊಟದ ಯೋಜನೆಗಳನ್ನು ಉತ್ತಮಗೊಳಿಸಬಹುದು. ಜೊತೆಗೆ ಈ ಮಾದರಿಗಳನ್ನು ಇತರ ದೇಶಗಳಿಗೆ ಹಂಚಿಕೊಳ್ಳಬಹುದು ಮತ್ತು ವಿಸ್ತರಿಸಬಹುದು.ಇದರಿಂದ ವಿಶ್ವದಾದ್ಯಂತದ ಮಕ್ಕಳಿಗೆ ಲಾಭವಾಗುತ್ತದೆ.
ವಿಶ್ವ ಆಹಾರ ಯೋಜನೆ ಮತ್ತು ಯೂನಿಸೆಫ್ನಂತಹ ಸಂಸ್ಥೆಗಳು ಈಗಾಗಲೇ ಸರ್ಕಾರಗಳಿಗೆ ಮತ್ತು ಎನ್ಜಿಓಗಳಿಗೆ ತಾಂತ್ರಿಕ ಸಹಾಯ, ಆರ್ಥಿಕ ನೆರವು ಮತ್ತು ಕಾರ್ಯತಂತ್ರದ ಮಾರ್ಗದರ್ಶನ ಒದಗಿಸುತ್ತಿವೆ. ಇದರ ಜೊತೆಗೆ ಗಡಿಯಾಚೆಗಿನ ಪಾಲುದಾರಿಕೆಗಳ ಮೂಲಕ ಶಾಲಾ ಮಕ್ಕಳ ಊಟದ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸುವುದರಿಂದ ಇದರ ಪರಿಣಾಮ ಹೆಚ್ಚಿಸಬಹುದಾಗಿದೆ.ಈ ನಿಟ್ಟಿನಲ್ಲಿ ಭಾರತದ ಪ್ರಧಾನ ಮಂತ್ರಿ ಪೋಷಣಾ ಯೋಜನೆ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದು, ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಪೋಷಣಾ ಯೋಜನೆ (ಮಧ್ಯಾಹ್ನದ ಊಟ ಯೋಜನೆ) ಭಾರತದ ಪ್ರಮುಖ ಯೋಜನೆಯಾಗಿದ್ದು, ಇದು ಮಕ್ಕಳಿಗೆ ಶಾಲೆಗೆ ಬರಲು ಪ್ರೋತ್ಸಾಹಕರವಾಗಿ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ. ಇದರಿಂದ ಆ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ ಮತ್ತು ಶೈಕ್ಷಣಿಕ ಸಾಧನೆ ಮಾಡಲು ನೆರವಾಗುತ್ತದೆ. ಇದು ವಿಶ್ವದ ಅತಿದೊಡ್ಡ ಶಾಲಾ ಮಕ್ಕಳ ಊಟದ ಕಾರ್ಯಕ್ರಮವಾಗಿದ್ದು, 118 ಮಿಲಿಯನ್ಗಿಂತಲೂ ಹೆಚ್ಚು ಮಕ್ಕಳಿಗೆ ಲಾಭವನ್ನು ಒದಗಿಸುತ್ತದೆ. ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದರ ಫಲಿತಾಂಶವಾಗಿಸರ್ಕಾರ, ಎನ್ಜಿಓಗಳು/ಸಿವಿಲ್ ಸೊಸೈಟಿ ಸಂಸ್ಥೆಗಳು, ಕಾರ್ಪೊರೇಟ್ಗಳು ಮತ್ತು ದಾನಿಗಳು ಒಟ್ಟಾಗಿ ಸೇರಿ ಪ್ರತಿ ದಿನವೂ ಲಕ್ಷಾಂತರ ಶಾಲಾ ಮಕ್ಕಳಿಗೆ ಆಹಾರವನ್ನು ಒದಗಿಸುವಂತೆ ಆಗಿದೆ.ಹೀಗಾಗಿ ಶಾಲಾ ಮಕ್ಕಳ ಊಟದ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹೆಚ್ಚು ಹೆಚ್ಚು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಮತ್ತು ಆ ಮೂಲಕ ಅವರ ಜೀವನದಲ್ಲಿ ಬದಲಾವಣೆ ಉಂಟು ಮಾಡಲು ಜಾಗತಿಕ ಮಟ್ಟದಲ್ಲಿ ಸಹಭಾಗಿತ್ವಗಳು ರೂಪುಗೊಳ್ಳುವುದು ಅವಶ್ಯವಾಗಿದೆ.