ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಎನ್‌. ಪ್ರಭುದೇವ ಅವರು ಆಂಗ್ಲ ಭಾಷೆಯಲ್ಲಿ ಬರೆದಿರುವ 31 ಲೇಖನಗಳ ಸಂಕಲನವನ್ನು ‘ಬದುಕು ಒಮ್ಮೆ ಮಾತ್ರ’ ಶೀರ್ಷಿಕೆಯಲ್ಲಿ ಭ್ರಮರ ಬಹದ್ದೂರ್‌ ಹಾಗೂ ಶ್ರೀನಿವಾಸ ಬಹದ್ದೂರ್‌ ಕನ್ನಡದಲ್ಲಿ ಹೊರತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಎನ್‌. ಪ್ರಭುದೇವ ಅವರು ಆಂಗ್ಲ ಭಾಷೆಯಲ್ಲಿ ಬರೆದಿರುವ 31 ಲೇಖನಗಳ ಸಂಕಲನವನ್ನು ‘ಬದುಕು ಒಮ್ಮೆ ಮಾತ್ರ’ ಶೀರ್ಷಿಕೆಯಲ್ಲಿ ಭ್ರಮರ ಬಹದ್ದೂರ್‌ ಹಾಗೂ ಶ್ರೀನಿವಾಸ ಬಹದ್ದೂರ್‌ ಕನ್ನಡದಲ್ಲಿ ಹೊರತಂದಿದ್ದಾರೆ.

ದೇಹವೇ ಜೀವನ ಸಂಗಾತಿ, ದೀರ್ಘಾಯುಷ್ಯ ಎಲ್ಲರ ಗುರಿ- ಈಗ ಅನೇಕರಿಗೆ ಅದು ಸತ್ಯ ಸ್ಥಿತಿಯಾಗಿದೆ. ತರುಣದಲ್ಲಿ ಹೃದಯಾಘಾತ ತಡೆಗಟ್ಟುವುದು ಹೇಗೆ?, ವಯಸ್ಸಾಗುವುದು ಅನಿವಾರ್ಯವೇ?, ಹೃದಯ ಸ್ತಂಭನ- ನೀವೇನು ತಿಳಿದಿರಬೇಕು?, ವೃದ್ಧರಲ್ಲಿ ಚಲನೆಯ ಸಮಸ್ಯೆ, ಮಲಬದ್ಧತೆ- ಶಾಶ್ವತ ಶತ್ರು, ವಯಸ್ಸಿಗನುಗುಣವಾಗಿ ನಾಡಿಮಿಡಿತ, ಮುಪ್ಪಿನ ಮಜಲುಗಳು, ಹೃದಯದ ಆಯಸ್ಸು, ಹೇಗಿರಬೇಕು- ಹೇಗಿರಬಾರದು ಎಂದು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಲೇಖನಗಳಿವೆ,

ವೈದ್ಯಕೀಯ ವಿಜ್ಞಾನದಲ್ಲಿ ಪೌಷ್ಟಿಕಾಂಶ/ ಆಹಾರ ವಿಜ್ಞಾನ ಕಡೆಗಣನೆ, ಪ್ರಪಂಚದಲ್ಲಿ ಈಗ ಆಹಾರವೇ ಪ್ರಥಮ ಕೊಲೆಗಾರ ಎಂದು ಎಚ್ಚರಿಸಲಾಗಿದೆ,

ಮಕ್ಕಳ ಜೀವನದಲ್ಲಿ ತಂದೆಯ ಪಾತ್ರ, ಕಷ್ಟಕಾಲದಲ್ಲಿ ನಿಜವಾದ ಸ್ನೇಹಿತರು ಪ್ರಕಟವಾಗುತ್ತಾರೆ, ಸಂತೋಷ ಒಂದು ಬಿಸಿಲು ಕುದುರೆ, ಅಪರೂಪಕ್ಕೆ ನಾವು ಇತರರನ್ನು ಪ್ರೀತಿಸುತ್ತೇವೆ, ಜೀವನದ ಸೂಕ್ಷ್ಮ ಭಾವನೆಗಳು, ಸೋಲುಗಳು ನಮ್ಮನ್ನು ಸೋಲಿಸುತ್ತವೆ, ಜಯಗಳಿಸುವುದು ದೈಹಿಕ ಶಕ್ತಿಯಿಂದಲ್ಲ, ಯೋಚನಾ ಶಕ್ತಿಯಿಂದ,

ನಮಗೆ ಬೇಕಿರುವುದು ಸಂತೃಪ್ತಿ, ಪರಿಪೂರ್ಣತೆಯ ಪ್ರಯತ್ನ ನಿಲ್ಲಿಸಿ, ಉತ್ತಮ ವ್ಯಕ್ತಿಯಾಗುವುದಕ್ಕೆ ಪ್ರಯತ್ನಿಸಿ, ಹಣಕೊಟ್ಟು ಕೊಂಡುಕೊಳ್ಳಲಾಗದ ವಿಷಯಗಳಲ್ಲಿ ನಿಮ್ಮ ಸಮಯವನ್ನು ತೊಡಗಿಸಿ ಎಂದು ಸಲಹೆ ಮಾಡಲಾಗಿದೆ.

ವಿಜ್ಞಾನ ಯುಗದಲ್ಲಿ ನಂಬಿಕೆ, ಸಹಜ ಮೌಢ್ಯ ಮತ್ತು ಕೃತಕ ಬುದ್ಧಿಮತ್ತೆ, ಯೋಗ ಮತ್ತು ಧ್ಯಾನ, ಪ್ರತಿಫಲಾಪೇಕ್ಷೆ ಇಲ್ಲದೆ ದಯೆ ತೋರಿ, ನಿಶ್ಯಬ್ಧ ವಿಷಯ ಸ್ಥಿತಿ ಕುರಿತು ಮಾಹಿತಿ ಇದೆ. ವೈದ್ಯರು ಯುವಾವಸ್ಥೆಯಲ್ಲಿ ಸಾಯುತ್ತಿದ್ದಾರೆ, ಮೊದಲು ಅವರು ಗುಣಮುಖರಾಗಬೇಕು ಎಂದು ವೈದ್ಯರಿಗೂ ಕಿವಿಮಾತು ಹೇಳುವ ಲೇಖನ ಕೂಡ ಇದೆ.

ಆರೋಗ್ಯಕರ ಜೀವನ ನಡೆಸುವವರಿಗೆ ಇದೊಂದು ರೀತಿಯಲ್ಲಿ ಕೈಪಿಡಿಯಂತಿದೆ. ಆಯಾ ವಿಷಯಗಳಿಗೆ ಅನುಗುಣವಾಗಿ ಆಕರ್ಷಕ ಕಲರ್‌ ಫೋಟೋಗಳಿವೆ.

ಈ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿದ್ದು, ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಮುನ್ನುಡಿ, ಲೇಖಕಿ ವಿ. ಸೀತಾಲಕ್ಷ್ಮಿ ವರ್ಮ, ಮೈಸೂರು ಜಯದೇವ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ಶುಭನುಡಿ ಬರೆದಿದ್ದಾರೆ. ಆಸಕ್ತರು ಪ್ರಕಾಶಕರಾದ ಡಾ.ಎಂಜಿಆರ್‌ ಅರಸ್, ಮೊ. 94484 02092 ಸಂಪರ್ಕಿಸಬಹುದು.