ಸಾರಾಂಶ
ಮುಂಬೈ: ಬಿಸಿಸಿಐ ಷರತ್ತಿಗೆ ಮಣಿದು 12 ವರ್ಷ ಬಳಿಕ ರಣಜಿ ಟ್ರೋಫಿಯಲ್ಲಿ ಆಡಲು ಒಪ್ಪಿರುವ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ, ಜ.30ರಿಂದ ದೆಹಲಿಯಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ದೆಹಲಿ ತಂಡವನ್ನು ಪ್ರತಿನಿಧಿಸಲಿರುವ ಕೊಹ್ಲಿ, ಪಂದ್ಯಕ್ಕಾಗಿ ಮುಂಬೈನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
2014ರಿಂದ 2019ರ ವರೆಗೂ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ, ಕೊಹ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸಂಜಯ್ ಬಾಂಗರ್, ದಿಗ್ಗಜ ಬ್ಯಾಟರ್ನ ಅಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಅಲ್ಲದೇ, 8 ಇನ್ನಿಂಗ್ಸ್ಗಳಲ್ಲಿ ಆಫ್ ಸ್ಟಂಪ್ನಿಂದ ಹೊರ ಹೋಗುವ ಚೆಂಡನ್ನು ಕೆಣಕಿ ವಿಕೆಟ್ ಕಳೆದುಕೊಂಡಿದ್ದರು. ಈ ನಿಟ್ಟಿನಲ್ಲಿ ಸುಧಾರಣೆ ಕಾಣಲು ತಮ್ಮ ಬ್ಯಾಕ್ಫೂಟ್ ಹೊಡೆತಗಳ ಮೇಲೆ ಹೆಚ್ಚು ಗಮನ ಹರಿಸುತ್ತಿರುವುದಾಗಿ ತಿಳಿದುಬಂದಿದೆ.
ಕೊಹ್ಲಿ ಆಡುವುದನ್ನು ವೀಕ್ಷಿಸಲು 10000ಕ್ಕೂ ಹೆಚ್ಚು ಪ್ರೇಕ್ಷಕರು ಕೋಟ್ಲಾ ಕ್ರೀಡಾಂಗಣಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ದೆಹಲಿ ಕ್ರಿಕೆಟ್ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ.