ಉದ್ದೀಪನ ಪರೀಕ್ಷೆಗೆ ರಕ್ತದ ಮಾದರಿ ನೀಡಲು ನಿರಾಕರಿಸಿದ್ದಕ್ಕೆ ತಾತ್ಕಾಲಿಕ ಅಮಾನತು. ಹೀಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕೈ ತಪ್ಪುವ ಸಾಧ್ಯತೆ.

ನವದೆಹಲಿ: ಆಯ್ಕೆ ಟ್ರಯಲ್ಸ್‌ ವೇಳೆ ಉದ್ದೀಪನ ಪರೀಕ್ಷೆಗೆ ರಕ್ತದ ಮಾದರಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕುಸ್ತಿಪಟು ಬಜರಂಗ್‌ ಪೂನಿಯಾರನ್ನು ರಾಷ್ಟ್ರೀಯ ಡೋಪಿಂಗ್‌ ನಿಗ್ರಹ ಘಟಕ(ನಾಡಾ) ತಾತ್ಕಾಲಿಕ ಅಮಾನತುಗೊಳಿಸಿದೆ. 

ಹೀಗಾಗಿ ಭಾರತದ ಅಗ್ರ ಕುಸ್ತಿಪಟು ಬಜರಂಗ್‌ರ ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಭಗ್ನಗೊಳ್ಳುವ ಸಾಧ್ಯತೆಯಿದೆ.ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ಮಾ.10ರಂದು ನಡೆದಿದ್ದ ಆಯ್ಕೆ ಟ್ರಯಲ್ಸ್‌ ಬಳಿಕ ಬಜರಂಗ್‌ ರಕ್ತದ ಮಾದರಿ ನೀಡಿರಲಿಲ್ಲ. ಹೀಗಾಗಿ ಅವರನ್ನು ಅಮಾನತಿನಲ್ಲಿಡಲಾಗಿದೆ. ಆದರೆ ರಕ್ತದ ಮಾದರಿ ನೀಡಿಲ್ಲ ಎಂಬುದನ್ನು ಬಜರಂಗ್‌ ನಿರಾಕರಿಸಿದ್ದಾರೆ.

 ‘ಅವಧಿ ಮುಗಿದ ಪರೀಕ್ಷೆ ಕಿಟ್‌ ನೀಡಿದ್ದಕ್ಕೆ ಪ್ರಶ್ನಿಸಿದ್ದೆ. ಅದಕ್ಕೆ ಉತ್ತರ ಸಿಕ್ಕ ಬಳಿಕ ರಕ್ತದ ಮಾದರಿ ನೀಡುತ್ತೇನೆ ಎಂದಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಏ.23ರಂದೇ ಅವರನ್ನು ಅಮಾನತುಗೊಳಿಸಲಾಗಿದ್ದು, ಮೇ 7ರೊಳಗೆ ಉತ್ತರಿಸಲು ನಾಡಾ ಕಾಲಾವಕಾಶ ನೀಡಿದೆ. ಉತ್ತರಿಸದಿದ್ದರೆ ಅವರ ಅಮಾನತು ಮುಂದುವರಿಯುವ ಸಾಧ್ಯತೆಯಿದೆ. ಆದರೆ ಮೇ 9ರಿಂದ ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಟೂರ್ನಿ ನಡೆಯಲಿದೆ. ಬಜರಂಗ್‌ ಈ ಟೂರ್ನಿಯಲ್ಲಿ ಸ್ಪರ್ಧಿಸಬೇಕಿದ್ದರೆ ಅಮಾನತಿನಿಂದ ಹೊರಬರಬೇಕಿದೆ. ಅಮಾನತು ಮುಂದುವರಿದರೆ ಬಜರಂಗ್‌ರ ಪ್ಯಾರಿಸ್‌ ಒಲಿಂಪಿಕ್ಸ್‌ ಕನಸು ಭಗ್ನಗೊಳ್ಳುವುದು ಖಚಿತ.

ಡಬ್ಲ್ಯುಎಫ್‌ಐ ಆಕ್ರೋಶ: ಇನ್ನು, ಬಜರಂಗ್‌ ಅಮಾನತು ವಿಷಯವನ್ನು ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ಗೆ ತಿಳಿಸದ್ದಕ್ಕೆ ನಾಡಾ ವಿರುದ್ಧ ಅಧ್ಯಕ್ಷ ಸಂಜಯ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರವಾಗಿ ನಾಡಾ ಜೊತೆ ಸಂಪರ್ಕದಲ್ಲಿದ್ದರೂ ಬಜರಂಗ್‌ರ ವಿಷಯ ತಿಳಿಸಿರಲಿಲ್ಲ. ಈ ಬಗ್ಗೆ ವಿಶ್ವ ಡೋಪಿಂಗ್‌ ನಿಗ್ರಹ ಘಟಕ(ವಾಡಾ)ಕ್ಕೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.