ಬೆಂಗಳೂರು: ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲಬೇಕಿದ್ದರೆ ಸಂಘಟಿತ ಪ್ರದರ್ಶನ ಅಗತ್ಯ. ಎಲ್ಲಕ್ಕಿಂತ ಹೆಚ್ಚಾಗಿ ಭುವನೇಶ್ವರ್‌ ಕುಮಾರ್‌ ಅವರ ಪ್ರದರ್ಶನವೇ ತಂಡಕ್ಕೆ ನಿರ್ಣಾಯಕ ಎಂದು ಭಾರತದ ಮಾಜಿ ಆಟಗಾರ, ಆರ್‌ಸಿಬಿ ಮಾಜಿ ವೇಗಿ ವಿನಯ್‌ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುರುವಾರ ಜಿಯೋಸ್ಟಾರ್‌ ವಿಶೇಷ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭುವನೇಶ್ವರ್‌ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಅವರ ಅನುಭವದ ಆಟ ಮಹತ್ವದ್ದು. ಆರ್‌ಸಿಬಿಗೆ ಈ ಬಾರಿ ಟೆಸ್ಟ್‌ ಮಾದರಿ ಬೌಲಿಂಗ್‌ ವಿಭಾಗ ಸಿಕ್ಕಿದೆ. ಭುವನೇಶ್ವರ್‌ಗೆ ಹೇಜಲ್‌ವುಡ್‌, ರಸಿಕ್‌ ಸಲಾಂ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಆದರೂ ಪ್ಲೇ-ಆಫ್‌ನಲ್ಲಿ ಭುವನೇಶ್ವರ್‌ ಪಾತ್ರ ನಿರ್ಣಾಯಕ. ಅವರು ಬೌಲರ್‌ಗಳ ನಾಯಕ’ ಎಂದಿದ್ದಾರೆ.

ಇನ್ನು, ರೊಮಾರಿಯೊ ಶೆಫರ್ಡ್‌ ಹಾಗೂ ಜಿತೇಶ್‌ ಶರ್ಮಾ ಪ್ರದರ್ಶನದ ಬಗ್ಗೆಯೂ ಮಾತನಾಡಿದ ವಿನಯ್‌, ಪ್ಲೇ-ಆಫ್‌ ಪಂದ್ಯಗಳಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ನೀಡುವ ಅಗತ್ಯವಿದೆ ಎಂದರು. ‘ಶೆಫರ್ಡ್‌ ಹಾಗೂ ಜಿತೇಶ್‌ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅವರಿಂದ ಉತ್ತಮ ಆಟ ಬರಬೇಕಿದೆ. ಆದರೆ ಪ್ಲೇ-ಆಫ್‌ನಲ್ಲಿ ತಂಡ ವೈಯಕ್ತಿಕ ಪ್ರದರ್ಶನದ ಮೇಲೆ ಅವಲಂಬಿತವಾಗದೆ ತಂಡವಾಗಿ ಆಡಬೇಕು. ಎಲ್ಲರೂ ಸಂಘಟಿತ ಪ್ರದರ್ಶನ ನೀಡಿದರೆ ಮಾತ್ರ ತಂಡಕ್ಕೆ ಗೆಲುವು ಸುಲಭವಾಗಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.