ಸಾರಾಂಶ
ನವದೆಹಲಿ: ಭಾರತದ ತಾರಾ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ವದಂತಿ ಶುಕ್ರವಾರ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. ಇದಕ್ಕೆ ಕಾರಣವಾಗಿದ್ದು ಸ್ವತಃ ಕೆ.ಎಲ್.ರಾಹುಲ್ರ ನಿಗೂಢ ಪೋಸ್ಟ್.ಗುರುವಾರ ರಾಹುಲ್ ಇನ್ಸ್ಟಾಗ್ರಾಂನಲ್ಲಿ ‘ನಾನೊಂದು ಘೋಷಣೆ ಮಾಡಲಿದ್ದೇನೆ. ಕಾಯುತ್ತಿರಿ’ ಎಂದು ಬರೆದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಶುಕ್ರವಾರ ರಾಹುಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಸ್ಕ್ರೀನ್ಶಾಟ್ ವೈರಲ್ ಆಗಿದೆ. ‘ನಾನು ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ವೈರಲ್ ಸ್ಕ್ರೀನ್ಶಾಟ್ನಲ್ಲಿ ಬರೆಯಲಾಗಿತ್ತು. ಆದರೆ ಇದು ನಕಲಿ ಎಂದು ಗೊತ್ತಾಗಿದೆ. ಯಾರೋ ಕೆ.ಎಲ್.ರಾಹುಲ್ರ ಹೆಸರಲ್ಲಿ ಎಡಿಟ್ ಮಾಡಿದ ಸ್ಕ್ರೀನ್ಶಾಟ್ ಹರಿಯಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಐಸಿಸಿ ಅಧ್ಯಕ್ಷ ರೇಸ್ನಲ್ಲಿ ಶಾ: ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ಶುರು
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿರುವ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಜಯ್ ಶಾ ಅವರಿಂದ ತೆರವಾಗುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೇರಲು ಹಲವು ಪ್ರಭಾವಿಗಳಿಂದ ಈಗಾಗಲೇ ಪೈಪೋಟಿ ಶುರುವಾಗಿದೆ.
ಸದ್ಯ ಬಿಸಿಸಿಐ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಮಂಡಳಿಯ ಕಾರ್ಯದರ್ಶಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮಂಡಳಿಯ ಖಜಾಂಚಿಯಾಗಿರುವ ಮಹಾರಾಷ್ಟ್ರದ ಬಿಜೆಪಿ ನಾಯಕ ಆಶೀಶ್ ಶೇಲರ್, ಐಪಿಎಲ್ ಮುಖ್ಯಸ್ಥರಾಗಿರುವ ಅರುಣ್ ಧುಮಾಲ್ ಕೂಡಾ ಕಾರ್ಯದರ್ಶಿ ಹುದ್ದೆಯ ರೇಸ್ನಲ್ಲಿದ್ದಾರೆ.