ಭಾರತದ ಸರಣಿಗೂ ತಟ್ಟಿದ ಬಾಂಗ್ಲಾ ಹಿಂಸಾಚಾರ ಬಿಸಿ: ಕಾನ್ಪುರದಲ್ಲಿ ರಸ್ತೆ ತಡೆ, ಗ್ವಾಲಿಯರ್‌ ಬಂದ್‌ ಕರೆ!

| Published : Sep 25 2024, 12:59 AM IST

ಸಾರಾಂಶ

ಕಾನ್ಪುರ ಸ್ಟೇಡಿಯಂ ಬಳಿ ರಸ್ತೆ ತಡೆ, ಹವನ. 20 ಮಂದಿ ವಿರುದ್ಧ ಎಫ್‌ಐಆರ್‌. ಕ್ರೀಡಾಂಗಣದ ಬಳಿ ಪೊಲೀಸ್‌ ಬಿಗಿ ಭದ್ರತೆ. ಬಸ್‌ ಸಂಚರಿಸುವ ದಾರಿ, ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕಾನ್ಪುರ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ಬಿಸಿ ಸದ್ಯ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸರಣಿಗೂ ತಟ್ಟಿದೆ. ಬಾಂಗ್ಲಾ ತಂಡ ಭಾರತದಲ್ಲಿ ಕ್ರಿಕೆಟ್‌ ಆಡುವುದಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಪಂದ್ಯಕ್ಕೆ ಭಾರಿ ಭದ್ರತೆ ಒದಗಿಸಲಾಗುತ್ತಿದೆ.ಉಭಯ ತಂಡಗಳ ನಡುವೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆಯಬೇಕಿರುವ 2ನೇ ಟೆಸ್ಟ್‌ಗೂ ಮುನ್ನ ಸೋಮವಾರ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತರು ಕ್ರೀಡಾಂಗಣ ಸಮೀಪದ ರಸ್ತೆ ತಡೆದು ಹವನ ನಡೆಸಿದ್ದಾರೆ. ಬಳಿಕ ಅವರನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು, 20 ಮಂದಿ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಾಗಿದೆ.ಪಂದ್ಯಕ್ಕೆ ಅಡ್ಡಿಪಡಿಸುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ ಮುತ್ತ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಆಟಗಾರರು ಉಳಿದುಕೊಳ್ಳುವ ಹೋಟೆಲ್‌, ಬಸ್‌ ಸಂಚರಿಸುವ ದಾರಿ, ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಇರಾನಿ ಕಪ್‌: ಶೇಷ ಭಾರತ ತಂಡದಲ್ಲಿ ದೇವದತ್‌, ಪ್ರಸಿದ್ಧ್‌

ನವದೆಹಲಿ: ಹಾಲಿ ರಣಜಿ ಟ್ರೋಫಿ ಚಾಂಪಿಯನ್‌ ಮುಂಬೈ ವಿರುದ್ಧ ಅ.1ರಿಂದ ಲಖನೌದಲ್ಲಿ ನಡೆಯಲಿರುವ ಇರಾನಿ ಕಪ್‌ ಪಂದ್ಯಕ್ಕೆ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ತಂಡಕ್ಕೆ ಕರ್ನಾಟಕದ ದೇವದತ್‌ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಿದ್ದಾರೆ. ಮಂಗಳವಾರ ಬಿಸಿಸಿಐ ತಂಡ ಪ್ರಕಟಿಸಿತು. ಋತುರಾಜ್‌ ಗಾಯಕ್ವಾಡ್‌ ನಾಯಕನಾಗಿ ನೇಮಕಗೊಂಡಿದ್ದಾರೆ. ಧ್ರುವ್‌ ಜುರೆಲ್‌ ಹಾಗೂ ಯಶ್‌ ದಯಾಳ್‌ ಬಾಂಗ್ಲಾದೇಶ ವಿರುದ್ಧ ಸರಣಿಗೆ ಭಾರತ ತಂಡದಲ್ಲಿದ್ದರೂ, 2ನೇ ಟೆಸ್ಟ್‌ಗೆ ಆಯ್ಕೆಯಾಗದಿದ್ದರೆ ಅವರು ಇರಾನಿ ಕಪ್‌ನಲ್ಲಿ ಆಡುವ ಸಾಧ್ಯತೆಯಿದೆ.ಇದೇ ವೇಳೆ ಮುಂಬೈ ತಂಡಕ್ಕೆ ಅಜಿಂಕ್ಯಾ ರಹಾನೆ ನಾಯಕತ್ವ ವಹಿಸಲಿದ್ದಾರೆ. ಭಾರತ ತಂಡದಲ್ಲಿರುವ ಸರ್ಫರಾಜ್‌ ಖಾನ್‌ ಕೂಡಾ 2ನೇ ಟೆಸ್ಟ್‌ಗೆ ಆಯ್ಕೆಯಾಗದಿದ್ದರೆ ಮುಂಬೈ ತಂಡದ ಪರ ಆಡಲು ಬಿಸಿಸಿಐ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಶ್ರೇಯಸ್‌ ಅಯ್ಯರ್‌, ಮುಶೀರ್ ಖಾನ್‌, ಶಮ್ಸ್‌ ಮುಲಾನಿ, ತನುಶ್‌ ಕೋಟ್ಯನ್‌ ಮುಂಬೈ ಪರ ಆಡುವ ನಿರೀಕ್ಷೆಯಿದೆ.