ಸಾರಾಂಶ
ಗೌತಮ್ ಗಂಭೀರ್ರನ್ನು ಟೀಂ ಇಂಡಿಯಾದ ಹೊಸ ಕೋಚ್ ಎಂದು ಇಂದು ಪ್ರಕಟಿಸುತ್ತಾ ಬಿಸಿಸಿಐ? ಸಂಜೆ ಜಯ್ ಶಾ ನಡೆಸಲಿರುವ ಸಭೆ ಬಳಿಕ ಘೋಷಣೆ ಸಾಧ್ಯತೆ.
ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್ಗಳಾದ ಗೌತಮ್ ಗಂಭೀರ್ ಹಾಗೂ ಡಬ್ಲ್ಯು ವಿ ರಾಮನ್ ಮಂಗಳವಾರ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ, ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಮುಂದೆ ಸಂದರ್ಶನಕ್ಕೆ ಹಾಜರಾದರು.
ಝೂಮ್ ಕಾಲ್ ಮೂಲಕ ನಡೆದ ಸಂದರ್ಶನದಲ್ಲಿ ಸಿಎಸಿ ಮುಖ್ಯಸ್ಥ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜಪೆ ಹಾಗೂ ಸುಲಕ್ಷಣಾ ನಾಯ್ಕ್ ಇದ್ದರು. ಮೊದಲು ಗಂಭೀರ್, ಆನಂತರ ರಾಮನ್ ಭಾರತ ತಂಡಕ್ಕಾಗಿ ಮುಂದಿನ 3 ವರ್ಷಗಳಿಗೆ ತಾವು ಹಾಕಿಕೊಂಡಿರುವ ಯೋಜನೆಗಳ ಕುರಿತು ಸುಮಾರು 40 ನಿಮಿಷಗಳ ಕಾಲ ವಿವರಿಸಿದರು. ಬುಧವಾರ ಮತ್ತೊಂದು ಸುತ್ತಿನ ಸಂದರ್ಶನವಿದ್ದು, ಸಿಎಸಿ ಸದಸ್ಯರು ಇನ್ನಷ್ಟು ಪ್ರಶ್ನೆಗಳನ್ನು ಕೇಳಬಹುದು ಎನ್ನಲಾಗಿದೆ.ಇಬ್ಬರು ಅಭ್ಯರ್ಥಿಗಳ ಸಂದರ್ಶನವನ್ನು ಸಿಎಸಿ ನಡೆಸಿದರೂ, ಈಗಾಗಲೇ ಗಂಭೀರ್ರನ್ನೇ ಹೊಸ ಕೋಚ್ ಆಗಿ ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.ಬುಧವಾರ ಬಿಸಿಸಿಐ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು, ಕಾರ್ಯದರ್ಶಿ ಜಯ್ ಶಾ ಟೀಂ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ರ ಹೆಸರನ್ನು ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.