ಸಾರಾಂಶ
ದುಬೈ: ಕೇವಲ ಎರಡೇ ದಿನದಲ್ಲಿ ಕೊನೆಗೊಂಡಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಕೇಪ್ಟೌನ್ ಕ್ರೀಡಾಂಗಣದ ಪಿಚ್ ಬಗ್ಗೆ ಐಸಿಸಿ ಅತೃಪ್ತಿ ವ್ಯಕ್ತಪಡಿಸಿದೆ.
ಇತ್ತೀಚೆಗೆ ನಡೆದಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿತ್ತು. ಪಂದ್ಯದಲ್ಲಿ ಕೇವಲ 642 ಎಸೆತಗಳು ದಾಖಲಾಗಿದ್ದು, ಇತಿಹಾಸದಲ್ಲೇ ಕಡಿಮೆ ಎಸೆತ ದಾಖಲಾದ ಟೆಸ್ಟ್ ಎನಿಸಿಕೊಂಡಿತ್ತು.
ಸದ್ಯ ಪಿಚ್ ಬಗ್ಗೆ ರೆಫ್ರಿ ಕ್ರಿಸ್ ಬ್ರಾಡ್ ಐಸಿಸಿಗೆ ವರದಿ ನೀಡಿದ್ದು, ಕೇಪ್ಟೌನ್ ಪಿಚ್ನಲ್ಲಿ ಹೆಚ್ಚಿನ ಬೌನ್ಸರ್ ಇದ್ದಿದ್ದರಿಂದ ಬ್ಯಾಟಿಂಗ್ ಕಠಿಣವಾಗಿತ್ತು. ಹಲವು ಬ್ಯಾಟರ್ಗಳ ಕೈ, ಹೆಲ್ಮೆಟ್ಗೂ ಬಾಲ್ ಬಡಿದಿತ್ತು ಎಂದಿದ್ದಾರೆ.
ಅತೃಪ್ತಿ ರೇಟಿಂಗ್ ಜೊತೆಗೆ ಪಿಚ್ಗೆ ಐಸಿಸಿ ಒಂದು ಡಿಮೆರಿಟ್ ಅಂಕ ನೀಡಿದೆ. ಯಾವುದೇ ಕ್ರೀಡಾಂಗಣಕ್ಕೆ 5 ವರ್ಷದಲ್ಲಿ 6 ಡಿಮೆರಿಟ್ ಅಂಕ ಲಭಿಸಿದರೆ ಆ ಕ್ರೀಡಾಂಗಣ 12 ತಿಂಗಳು ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯ ಅರ್ಹತೆ ಕಳೆದುಕೊಳ್ಳಲಿದೆ.
ಆಫ್ರಿಕಾ ಟೆಸ್ಟ್ನಲ್ಲಿ ಕಳಪೆ ಆಟ: ರಣಜಿಗೆ ಮರಳಿದ ಶ್ರೇಯಸ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತದ ತಾರಾ ಬ್ಯಾಟರ್ ಶ್ರೇಯಸ್ ಅಯ್ಯರ್ ರಣಜಿ ಕ್ರಿಕೆಟ್ಗೆ ಮರಳಲಿದ್ದಾರೆ. ಅವರು ಜ.12ರಿಂದ ಆರಂಭಗೊಳ್ಳಲಿರುವ ಆಂಧ್ರ ವಿರುದ್ಧದ ಪಂದ್ಯಕ್ಕೆ ಮುಂಬೈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗದ ಕಾರಣ ರಣಜಿಯಲ್ಲಿ ಆಡಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅವರು ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.