ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ: ಭಾರತಕ್ಕೆ ಸರಣಿ ಮುನ್ನಡೆ ಗುರಿ

| Published : Aug 04 2024, 01:22 AM IST / Updated: Aug 04 2024, 04:10 AM IST

ಸಾರಾಂಶ

ನಾಟಕೀಯ ರೀತಿಯಲ್ಲಿ ಟೈ ಆಗಿದ್ದ ಮೊದಲ ಪಂದ್ಯ. ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಾದ ಅಗತ್ಯವಿದೆ.

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಟಕೀಯ ರೀತಿಯಲ್ಲಿ ಟೈ ಆಗಿದ್ದರಿಂದ ಈ ಬಾರಿ ಉಭಯ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.ಆರಂಭಿಕ ಪಂದ್ಯದಲ್ಲಿ ಲಂಕಾ ನೀಡಿದ್ದ 231 ರನ್‌ ಗುರಿಯನ್ನು ಬೆನ್ನತ್ತಲು ಭಾರತ ವಿಫಲವಾಗಿತ್ತು. ಒಂದು ಹಂತದಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡ ಆಘಾತಕಾರಿ ಸೋಲನುಭವಿಸಿತ್ತು. ಲಂಕಾ ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು ಈ ಪಂದ್ಯದಲ್ಲಾದರೂ ಅಬ್ಬರಿಸಬೇಕಾದ ಅಗತ್ಯವಿದೆ.

ರೋಹಿತ್‌ ಲಯ ಮುಂದುವರಿಸುವ ಕಾತರದಲ್ಲಿದ್ದು, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌ ಮೇಲೆ ದೊಡ್ಡ ನಿರೀಕ್ಷೆ ಇದೆ. ತಂಡಕ್ಕೆ ಕಮ್‌ಬ್ಯಾಕ್‌ ಮಾಡಿರುವ ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಈ ಸರಣಿಯಲ್ಲಿ ಅಬ್ಬರಿಬೇಕಾದ ಅಗತ್ಯವಿದೆ. ಇನ್ನು, ಬೌಲರ್‌ಗಳು ಕಳೆದ ಪಂದ್ಯದಲ್ಲಿ ಮಿಂಚಿದ್ದು, ಮತ್ತೊಮ್ಮೆ ಆತಿಥೇಯರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದೆಡೆ ಲಂಕಾ ತಂಡ ಟಿ20 ಸರಣಿ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೊಳಗಾದ ಬಳಿಕ ಏಕದಿನ ಸರಣಿಯಲ್ಲಿ ಸೋಲುವ ಪಂದ್ಯವನ್ನು ಟೈ ಮಾಡಿಕೊಂಡಿದೆ. ಸುಧಾರಿತ ಪ್ರದರ್ಶನ ನೀಡುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸುವ ಕಾತರದಲ್ಲಿದೆ. ಪಥುಂ ನಿಸ್ಸಾಂ ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿಕೊಂಡಿದ್ದು, ದುನಿತ್‌ ವೆಲ್ಲಲಗೆ, ಹಸರಂಗ ಆಲ್ರೌಂಡ್‌ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ.ಪಂದ್ಯ: ಮಧ್ಯಾಹ್ನ 2.30ಕ್ಕೆನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌