ಸಾರಾಂಶ
ದುಬೈ: ಫೆ.19ರಿಂದ ಪಾಕಿಸ್ತಾನ ಹಾಗೂ ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಂಪೈರ್ ನಿತಿನ್ ಮೆನನ್, ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಬುಧವಾರ ಐಸಿಸಿ 12 ಅಂಪೈರ್ಗಳು ಹಾಗೂ 3 ಮ್ಯಾಚ್ ರೆಫ್ರಿಗಳ ಹೆಸರು ಪ್ರಕಟಿಸಿತು.
ಇದರಲ್ಲಿ ನಿತಿನ್, ಜಾವಗಲ್ ಶ್ರೀನಾಥ್ ಹೆಸರಿಲ್ಲ. ಟೂರ್ನಿಗೆ ಗೈರಾಗುವುದಕ್ಕೆ ನಿತಿನ್ ‘ವೈಯಕ್ತಿಕ ಕಾರಣ’ ನೀಡಿದರೆ, ಜಾವಗಲ್ ಶ್ರೀನಾಥ್ ಅವರು ‘ನಿರಂತರ ಕ್ರಿಕೆಟ್ನಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಬಿಡುವು’ ಪಡೆದಿದ್ದಾಗಿ ತಿಳಿಸಿದ್ದಾರೆ.
ಆದರೆ ಇವರಿಬ್ಬರೂ ಪಾಕ್ಗೆ ತೆರಳಲು ನಿರಾಕರಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಭಾರತದ ಮತ್ತೋರ್ವ ಅಂಪೈರ್ ಮದನಗೋಪಾಲ್ ಕೂಡಾ ಪಾಕ್ಗೆ ತೆರಳಲು ನಿರಾಕರಿಸಿ ಟೂರ್ನಿಗೆ ಗೈರಾಗಲು ನಿರ್ಧರಿಸಿದ್ದಾಗಿ ವರದಿಯಾಗಿದೆ. ಟೂರ್ನಿಯಲ್ಲಿ ಅಂಪೈರ್ಗಳಾಗಿ ಕುಮಾರ್ ಧರ್ಮಸೇನ, ಕ್ರಿಸ್ ಗ್ಯಾಫನಿ, ರಿಚರ್ಡ್ ಇಲ್ಲಿಂಗ್ವರ್ಥ್ ಸೇರಿ 12 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಡೇವಿಡ್ ಬೂನ್, ರಂಜನ್, ಆ್ಯಂಡ್ರ್ಯೂ ಪಿಕ್ರಾಫ್ಟ್ ರೆಫ್ರಿಗಳಾಗಿರಲಿದ್ದಾರೆ.