ಸಾರಾಂಶ
ನವದೆಹಲಿ: ಜೂ.1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ಗೆ ಈಗಾಗಲೇ ಬಿಸಿಸಿಐ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ಯಾವುದೇ ಹೊಸ ಮುಖಗಳಿಗೆ ಮಣೆ ಹಾಕದಿರಲು ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕಳೆದ ವಾರವೇ ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್, ಪ್ರಧಾನ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಸಭೆ ನಡೆಸಿದ್ದಾರೆ. ಭಾರತ ಪರ ಟಿ20 ಹಾಗೂ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರನ್ನೇ ತಂಡಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ರೋಹಿತ್, ವಿರಾಟ್, ಬೂಮ್ರಾ, ಜಡೇಜಾ, ರಿಷಭ್, ಸೂರ್ಯಕುಮಾರ್, ಅರ್ಶ್ದೀಪ್, ಸಿರಾಜ್, ಕುಲ್ದೀಪ್ ಹಾಗೂ ಹಾರ್ದಿಕ್ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು, ಆರಂಭಿಕ ಸ್ಥಾನಕ್ಕೆ ಗಿಲ್ ಹಾಗೂ ಜೈಸ್ವಾಲ್, ಫಿನಿಶರ್ ಸ್ಥಾನಕ್ಕೆ ರಿಂಕು ಸಿಂಗ್-ಶಿವಂ ದುಬೆ ನಡುವೆ ಪೈಪೋಟಿ ಇದೆ. 2ನೇ ವಿಕೆಟ್ ಕೀಪರ್ಗಾಗಿ ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಜಿತೇಶ್, ಇಶಾನ್ ಕಿಶನ್ ನಡುವೆ ಸ್ಪರ್ಧೆಯಿದೆ ಎಂದು ತಿಳಿದುಬಂದಿದೆ.
ಚಹಲ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಆವೇಶ್ ಖಾನ್ ಕೂಡಾ ಆಯ್ಕೆ ರೇಸ್ನಲ್ಲಿದ್ದಾರೆ. ಇನ್ನು, ವೇಗಿಗಳಾದ ಮಯಾಂಕ್ ಯಾದವ್, ಹರ್ಷಿತ್ ರಾಣಾ, ಆಕಾಶ್, ಮಧ್ವಾಲ್ ಮೀಸಲು ಆಟಗಾರರಾಗಿ ತಂಡದ ಜೊತೆ ಪ್ರಯಾಣಿಸುವ ನಿರೀಕ್ಷೆಯಿದೆ.
ಈ ಬಾರಿ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ವೇಗಿಗಳಾದ ಮಯಾಂಕ್ ಯಾದವ್, ಹರ್ಷಿತ್ ರಾಣಾ ಅವರನ್ನು ಬಿಸಿಸಿಐ ವಿಶ್ವಕಪ್ಗೆ ಪರಿಗಣಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಯುವ ಪ್ರತಿಭೆಗಳನ್ನು ನೇರವಾಗಿ ವಿಶ್ವಕಪ್ಗೆ ಆಯ್ಕೆ ಮಾಡದೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ.