ಸಾರಾಂಶ
ಬೆಂಗಳೂರು: ಶೇಷಾದ್ರಿಪುರಂ ಕಾನೂನು ಕಾಲೇಜು ಹಾಗೂ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಜಂಟಿಯಾಗಿ ಆಯೋಜಿಸಿದ ಅಂತರ್ ಕಾಲೇಜು ಟೇಬಲ್ ಟೆನಿಸ್ ಟೂರ್ನಿಯಲ್ಲಿ ಹುಬ್ಬಳ್ಳಿ ಕಾನೂನು ವಿವಿ ಹಾಗೂ ಮಂಗಳೂರಿನ ಎಸ್ಡಿಎಂ ಕಾಲೇಜು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಗುರುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಿತು. ಪುರುಷರ ವಿಭಾಗದಲ್ಲಿ 15, ಮಹಿಳಾ ವಿಭಾಗದಲ್ಲಿ 14 ತಂಡಗಳು ಪಾಲ್ಗೊಂಡವು. ಪುರುಷರ ವಿಭಾಗದಲ್ಲಿ ಬೆಂಗಳೂರಿನ ಕೆಎಲ್ಇ ಕಾಲೇಜು ದ್ವಿತೀಯ, ಶೇಷಾದ್ರಿಪುರಂ ಕಾಲೇಜು 3ನೇ ಸ್ಥಾನ ಪಡೆದುಕೊಂಡವು. ಮಹಿಳಾ ವಿಭಾಗದಲ್ಲಿ ಬೆಳಗಾವಿ ಆರ್ಎಲ್ ಕಾಲೇಜು ಹಾಗೂ ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕ್ರಮವಾಗಿ 2, 3ನೇ ಸ್ಥಾನ ಗಿಟ್ಟಿಸಿಕೊಂಡವು.
ಆಸ್ಟ್ರೇಲಿಯನ್ ಓಪನ್ನಲ್ಲಿ ಭಾರತದ ಸವಾಲು ಅಂತ್ಯ
ಸಿಡ್ನಿ: ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಶುಕ್ರವಾರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವ ನಂ.10 ಎಚ್.ಎಸ್.ಪ್ರಣಯ್, ಜಪಾನ್ನ ಕೊಡಾಯಿ ನರವೊಕಾ ವಿರುದ್ಧ 19-21, 13-21 ಗೇಮ್ಗಳಲ್ಲಿ ಸೋತರೆ, ಸಮೀರ್ ವರ್ಮಾ ಚೈನೀಸ್ ತೈಪೆಯ ಲಿನ್ ಚುನ್ ಯಿ ವಿರುದ್ಧ 12-21, 13-21 ಗೇಮ್ಗಳಲ್ಲಿ ಪರಾಭವಗೊಂಡರು. ಮಹಿಳಾ ಸಿಂಗಲ್ಸ್ನಲ್ಲಿ ಆಕರ್ಷಿ ಕಶ್ಯಪ್ ಚೈನೀಸ್ ತೈಪೆಯ ಯು ಪೊ ಪೈ ವಿರುದ್ಧ 17-21, 12-21 ಗೇಮ್ಗಳಲ್ಲಿ ಸೋತರು. ಮಿಶ್ರ ಡಬಲ್ಸ್ನಲ್ಲಿ ಸುಮೀತ್-ಸಿಕ್ಕಿ ರೆಡ್ಡಿ ದಂಪತಿಗೆ ಚೀನಾದ ಝೆನ್ ಬಾಂಗ್-ವೆಯ್ ಯಾಕ್ಸಿನ್ ವಿರುದ್ಧ 12-21, 14-21 ಅಂತರದಲ್ಲಿ ಸೋತು ಹೊರಬಿದ್ದರು.