ಸಾರಾಂಶ
2018ರಿಂದ ಟೆಸ್ಟ್ ಕ್ರಿಕೆಟ್ ಆಡದ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ‘ಎ’ ದರ್ಜೆ ಗುತ್ತಿಗೆ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ: 2018ರಿಂದ ಟೆಸ್ಟ್ ಕ್ರಿಕೆಟ್ ಆಡದ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ‘ಎ’ ದರ್ಜೆ ಗುತ್ತಿಗೆ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಸೇರಿದಂತೆ ಪ್ರಥಮ ದರ್ಜೆ, ದೇಸಿ ಕ್ರಿಕೆಟ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿದೆ. ಆದರೆ ಹಾರ್ದಿಕ್ ಟೆಸ್ಟ್ ಹಾಗೂ ದೇಸಿ ಪಂದ್ಯಗಳಲ್ಲಿ ಆಡದೆ ಬಹಳ ಸಮಯ ಆಗಿದೆ. ಆದರೂ ಅವರಿಗೆ ಮನ್ನಣೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಎಲ್ಲರಿಗೂ ಒಂದೇ ನಿಯಮ ಅಳವಡಿಕೆಯಾಗದಿದ್ದರೆ ಬಿಸಿಸಿಐಗೆ ತನ್ನ ಉದ್ದೇಶಿತ ಫಲಿತಾಂಶ ಸಿಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಸಹ ಬಿಸಿಸಿಐ ಗುತ್ತಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ರೋಹಿತ್, ಕೊಹ್ಲಿ ಕೂಡ ಬಿಡುವಿನ ಸಮಯದಲ್ಲಿ ದೇಸಿ ಕ್ರಿಕೆಟ್ ಆಡಬೇಕು’ ಎಂದು ಒತ್ತಾಯಿಸಿದ್ದಾರೆ. ಬೀಜಿಂಗ್ನಲ್ಲಿ 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್
ಬೀಜಿಂಗ್: 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಚೀನಾದ ಬೀಜಿಂಗ್ನಲ್ಲಿ ಆಯೋಜನೆಗೊಳ್ಳಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ ಗುರುವಾರ ತಿಳಿಸಿದೆ. ಇಟಲಿ ಸರ್ಕಾರ ರೋಮ್ನಲ್ಲಿ ಈ ಕೂಟದ ಆಯೋಜನೆಗೆ 92 ಮಿಲಿಯನ್ ಡಾಲರ್ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಇಟಾಲಿಯನ್ ಟ್ರ್ಯಾಕ್ ಫೆಡರೇಶನ್ ಸಲ್ಲಿಸಿದ್ದ ಬಿಡ್ ಅನ್ನು ಹಿಂಪಡೆದಿತ್ತು. ಈ ಕೂಟವನ್ನು 2015ರಲ್ಲಿ ಕೂಡಾ ಚೀನಾವೇ ಆಯೋಜಿಸಿತ್ತು. ಮುಂದಿನ ವರ್ಷ ನಡೆಯಲಿರುವ ವಿಶ್ವ ಒಳಾಂಗಣ ಚಾಂಪಿಯನ್ಶಿಪ್ ಕೂಡಾ ಚೀನಾದ ನಾನ್ಜಿಂಗ್ನಲ್ಲಿ ಆಯೋಜನೆಗೊಳ್ಳಲಿದೆ.