ಪ್ಯಾರಿಸ್‌ ಒಲಿಂಪಿಕ್ಸ್‌: ರಾಜ್ಯದ ಅಥ್ಲೀಟ್‌ಗಳಿಗೆ ತಲಾ ₹ 5 ಲಕ್ಷ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ

| Published : Jul 21 2024, 01:30 AM IST / Updated: Jul 21 2024, 04:00 AM IST

ಸಾರಾಂಶ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ರುಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು.

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ. 

ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ಅಧ್ಯಕ್ಷ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವಾಗಿ ತಲಾ 5 ಲಕ್ಷ ರುಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿದ್ದಾರೆ. 

ಕ್ರೀಡಾಕೂಟದ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯದ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್‌ನಲ್ಲಿ ಅದಿತಿ ಅಶೋಕ್, ಈಜು ಸ್ಪರ್ಧೆಯಲ್ಲಿ ಧಿನಿಧಿ ದೇಸಿಂಘು, ಶ್ರೀಹರಿ ನಟರಾಜ್‌, ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೋ ಚಾಕೋ, ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್, ಪುರುಷರ ಟೆನಿಸ್ ಡಬಲ್ಸ್‌ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್‌ನಲ್ಲಿ ನಿಶಾಂತ್ ದೇವ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ 9 ಮಂದಿಗೆ ಕೆಒಎ ವತಿಯಿಂದ ಪ್ರತ್ಯೇಕ ನೆರವು ದೊರೆಯಲಿದೆ ಎಂದು ಗೋವಿಂದರಾಜು ಅವರು ತಿಳಿಸಿದ್ದಾರೆ. ಒಲಿಂಪಿಕ್ಸ್‌ ಜು.26 ರಿಂದ ಆಗಸ್ಟ್ 11ರ ವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿದೆ.

ಪ್ಯಾರಿಸ್‌ ತಲುಪಿದ ಭಾರತ ಹಾಕಿ, ಆರ್ಚರಿ ತಂಡ

ಪ್ಯಾರಿಸ್‌: ಭಾರತದ ಆರ್ಚರಿ, ಹಾಕಿ ಹಾಗೂ ರೋಯಿಂಗ್‌ ತಂಡಗಳು ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮ ತಲುಪಿದೆ. ಈ ಬಗ್ಗೆ ಭಾರತ ತಂಡದ ಮುಖ್ಯಸ್ಥ ಗಗನ್‌ ನಾರಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. ‘ಆರ್ಚರಿ ಹಾಗೂ ರೋಯಿಂಗ್ ತಂಡಗಳು ಪ್ಯಾರಿಸ್‌ ತಲುಪಿದ್ದು, ಕ್ರೀಡಾಗ್ರಾಮ ಪ್ರವೇಶಿಸಿದ ಭಾರತದ ಮೊದಲ ತಂಡ’ ಎಂದು 2012ರ ಲಂಡನ್‌ ಒಲಿಂಪಿಕ್ಸ್‌ ಕಂಚು ವಿಜೇತ ಶೂಟರ್‌ ನಾರಂಗ್‌ ತಿಳಿಸಿದ್ದಾರೆ. ಭಾರತದಿಂದ ಈ ಬಾರಿ 117 ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದು, ಇತರ ಅಥ್ಲೀಟ್‌ಗಳು ಶೀಘ್ರವೇ ಪ್ಯಾರಿಸ್‌ಗೆ ತೆರಳಲಿದ್ದಾರೆ. ಜು.26ಕ್ಕೆ ಒಲಿಂಪಿಕ್ಸ್‌ ಆರಂಭಗೊಳ್ಳಲಿದೆ.