ಮುಷ್ತಾಕ್‌ ಅಲಿ ಟಿ20ಯಿಂದ ಕರ್ನಾಟಕ ಔಟ್‌!

| Published : Dec 04 2024, 12:34 AM IST

ಸಾರಾಂಶ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬರೋಡಾ ವಿರುದ್ಧ 4 ವಿಕೆಟ್‌ ಸೋಲು ಅನುಭವಿಸಿದ ಕರ್ನಾಟಕ. 6 ಪಂದ್ಯದಲ್ಲಿ 3ನೇ ಸೋಲು. ಕರ್ನಾಟಕ ಸಾಧಾರಣ ಬ್ಯಾಟಿಂಗ್‌ ಶೋ, 169/8. ಬರೋಡಾ 172/6. ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಉಳಿದ ಕರ್ನಾಟಕ.

ಇಂದೋರ್‌: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಿಂದ ಕರ್ನಾಟಕ ಹೊರಬಿದ್ದಿದೆ. ಬುಧವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕರ್ನಾಟಕಕ್ಕೆ ಬರೋಡಾ ವಿರುದ್ಧ 4 ವಿಕೆಟ್‌ ಸೋಲು ಎದುರಾಯಿತು. ಸಾಧಾರಣ ಬ್ಯಾಟಿಂಗ್‌ ಪ್ರದರ್ಶನ ತೋರಿ 20 ಓವರಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 169 ರನ್‌ ಕಲೆಹಾಕಿದ ರಾಜ್ಯ ತಂಡಕ್ಕೆ ಬರೋಡಾ ಸುಲಭವಾಗಿ ಗುರಿ ತಪ್ಪುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 18.5 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಬರೋಡಾ 172 ರನ್‌ ಗಳಿಸಿ, ಜಯಿಸಿತು.

‘ಸಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಬರೋಡಾ, ನಾಕೌಟ್‌ ಹಂತ ತಲುಪುವ ನೆಚ್ಚಿನ ತಂಡ ಎನಿಸಿದೆ. 6 ಪಂದ್ಯಗಳಲ್ಲಿ 3ರಲ್ಲಿ ಸೋಲುಂಡ ಕರ್ನಾಟಕ, ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ನಾಕೌಟ್‌ ರೇಸ್‌ನಿಂದ ಆಚೆ ಬಿದ್ದಿದೆ. ಸ್ಟಾರ್ಸ್‌ ಫ್ಲಾಪ್‌: ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ಕಳಪೆ ಆರಂಭ ಪಡೆಯಿತು. ನಾಯಕ ಮಯಾಂಕ್‌ ಅಗರ್‌ವಾಲ್‌ ಕೇವಲ 1 ರನ್‌ಗೆ ಔಟಾದರು. 3ನೇ ಓವರಲ್ಲಿ ಕೆ.ಎಲ್‌.ಶ್ರೀಜಿತ್‌ (22), ಮನೀಶ್‌ ಪಾಂಡೆ (10) ವಿಕೆಟ್‌ಗಳನ್ನು ಕಳೆದುಕೊಂಡ ರಾಜ್ಯ ತಂಡ, ಸಂಕಷ್ಟಕ್ಕೆ ಸಿಲುಕಿತು. ಆರ್‌.ಸ್ಮರಣ್‌ 38 ರನ್‌ ಗಳಿಸಿ ತಕ್ಕ ಮಟ್ಟಿಗಿನ ಹೋರಾಟ ಪ್ರದರ್ಶಿಸಿದರೆ, ಅಭಿನವ್‌ ಮನೋಹರ್‌ರ ಸ್ಫೋಟಕ ಆಟ ತಂಡದ ಮೊತ್ತವನ್ನು 150 ರನ್‌ ದಾಟಿಸಿತು. ಅಭಿನವ್‌ 34 ಎಸೆತದಲ್ಲಿ 6 ಸಿಕ್ಸರ್‌ಗಳ ನೆರವಿನಿಂದ 56 ರನ್‌ ಸಿಡಿಸಿ ಔಟಾಗದೆ ಉಳಿದರು. ಮನೋಜ್‌ ಭಾಂಡಗೆ 1, ಶುಭಾಂಗ್‌ ಹೆಗಡೆ 4 ರನ್‌ ಗಳಿಸಿ ಔಟಾಗಿದ್ದರಿಂದ ಬೃಹತ್‌ ಮೊತ್ತ ಕಲೆಹಾಕುವ ರಾಜ್ಯ ತಂಡದ ಆಸೆಗೆ ತಣ್ಣೀರೆರೆಚಿದಂತಾಯಿತು. ಬರೋಡಾ ಪರ ನಾಯಕ ಕೃನಾಲ್‌ ಪಾಂಡ್ಯ 19ಕ್ಕೆ 2 ವಿಕೆಟ್‌ ಕಿತ್ತರು. ಬರೋಡಾ ದಿಟ್ಟ ಹೋರಾಟ: ಅಭಿಮನ್ಯು ಸಿಂಗ್‌ ರಾಜ್‌ಪೂತ್‌ ಕೇವಲ 6 ರನ್‌ ಗಳಿಸಿ ಔಟಾಗಿದ್ದರಿಂದ ಆರಂಭಿಕ ಆಘಾತಕ್ಕೆ ಗುರಿಯಾಗಿದ್ದ ಬರೋಡಾಕ್ಕೆ ಶಾಶ್ವತ್‌ ರಾವತ್‌ ಹಾಗೂ ಭಾನು ಪನಿಯಾ ಆಸರೆಯಾದರು. ಇವರಿಬ್ಬರು 2ನೇ ವಿಕೆಟ್‌ಗೆ 8.3 ಓವರಲ್ಲಿ 89 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 11ನೇ ಓವರಲ್ಲಿ ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿ, ಬರೋಡಾಕ್ಕೆ ಭಾರಿ ಆಘಾತ ನೀಡಿದರು. ಶಾಶ್ವತ್‌ 37 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್‌ನೊಂದಿಗೆ 63 ರನ್‌ ಸಿಡಿಸಿ ಔಟಾದರೆ, ಹಾರ್ದಿಕ್‌ ಹಾಗೂ ಕೃನಾಲ್‌ ಪಾಂಡ್ಯ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದರು. ಬರೋಡಾ 102ಕ್ಕೆ 1 ವಿಕೆಟ್‌ನಿಂದ 102ಕ್ಕೆ 4 ವಿಕೆಟ್‌ಗೆ ದಿಢೀರ್‌ ಕುಸಿಯಿತು.

ಭಾನು 24 ಎಸೆತದಲ್ಲಿ 42, ಶಿವಾಲಿಕ್‌ ಶರ್ಮಾ 22, ವಿಷ್ಣು ಸೋಲಂಕಿ ಔಟಾಗದೆ 28 ರನ್‌ ಗಳಿಸಿ ಬರೋಡಾ 7 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಲು ನೆರವಾದರು.

ಕರ್ನಾಟಕಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಗುರುವಾರ (ಡಿ.5ಕ್ಕೆ) ಗುಜರಾತ್‌ ವಿರುದ್ಧ ಸೆಣಸಲಿದೆ. ಸ್ಕೋರ್‌: ಕರ್ನಾಟಕ 20 ಓವರಲ್ಲಿ 169/8 (ಅಭಿನವ್‌ 56, ಸ್ಮರಣ್‌ 38, ಕೃನಾಲ್‌ 2-19), ಬರೋಡಾ 18.5 ಓವರಲ್ಲಿ 172/6 (ಶಾಶ್ವತ್‌ 63, ಭಾನು 42, ಶ್ರೇಯಸ್‌ 4-19) ಶ್ರೇಯಸ್‌ ಗೋಪಾಲ್‌ಗೆ

ಹ್ಯಾಟ್ರಿಕ್‌ ವಿಕೆಟ್‌!

ಕರ್ನಾಟಕದ ತಾರಾ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ಬರೋಡಾ ಇನ್ನಿಂಗ್ಸ್‌ನ 11ನೇ ಓವರ್‌ನ ಮೊದಲ ಎಸೆತದಲ್ಲಿ ಶಾಶ್ವತ್‌, 2ನೇ ಎಸೆತದಲ್ಲಿ ಹಾರ್ದಿಕ್‌ ಹಾಗೂ 3ನೇ ಕೃನಾಲ್ ಪಾಂಡ್ಯರ ವಿಕೆಟ್‌ ಕಬಳಿಸಿದರು.