ಸಾರಾಂಶ
ನವದೆಹಲಿ: ಬೆಂಗಳೂರಿನಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆಯೂ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ)ಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ಜಿಟಿ) ಸೂಚಿಸಿದೆ.ಚಿನ್ನಸ್ವಾಮಿಯಲ್ಲಿ ನಡೆದ ಈ ಐಪಿಎಲ್ನ 4 ಪಂದ್ಯಗಳಿಗೆ ಒಟ್ಟು 80 ಸಾವಿರ ಲೀಟರ್ನಟ್ಟು ನೀರು ಬಳಕೆಯಾಗಿದೆ.
ನಗರದಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆಯೂ ಭಾರಿ ಪ್ರಮಾಣದ ನೀರಿನ ಬಳಕೆಯಾಗಿದ್ದರ ಬಗ್ಗೆ ವಿಚಾರಣೆ ನಡೆಸುತ್ತಿರುವ ಎನ್ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್ವೆಲ್, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಆ.13ಕ್ಕೆ ನಿಗದಿಪಡಿಸಿದೆ.
ಇಂದು ವಿಶ್ವ ರಿಲೇ ಕೂಟ: ರಾಜ್ಯದ ನಾಲ್ವರು ಸ್ಪರ್ಧೆ
ನಾಸೌ(ಬಹಾಮಾಸ್): ಪ್ಯಾರಿಸ್ ಒಲಿಂಪಿಕ್ಸ್ನ ಅರ್ಹತಾ ಕೂಟವಾಗಿರುವ ವಿಶ್ವ ಅಥ್ಲೆಟಿಕ್ಸ್ ರಿಲೇ ಚಾಂಪಿಯನ್ಶಿಪ್ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಕರ್ನಾಟಕದ ನಾಲ್ವರು ಸೇರಿ ಭಾರತದ 15 ಮಂದಿ ಕೂಟದ 3 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಕೂಟದಲ್ಲಿ 4*400 ಮೀಟರ್ನ ಪುರುಷ, ಮಹಿಳಾ, ಮಿಶ್ರ ತಂಡ ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಕರ್ನಾಟಕದ ಎಂ.ಆರ್.ಪೂವಮ್ಮ, ಯಶಸ್, ನಿಹಾಲ್ ಹಾಗೂ ಮಿಜೊ ಕಣಕ್ಕಿಳಿಯಲಿದ್ದಾರೆ.