ಕೇರಳ ವಿರುದ್ಧ ಕರುಣ್‌ ಮತ್ತೊಂದು ಭರ್ಜರಿ ಶತಕ : ರಣಜಿ ಟ್ರೋಫಿ ಗೆಲುವಿನತ್ತ ವಿದರ್ಭ

| N/A | Published : Mar 02 2025, 01:16 AM IST / Updated: Mar 02 2025, 04:09 AM IST

ಸಾರಾಂಶ

ರಣಜಿ ಫೈನಲ್‌. ಕೇರಳ ವಿರುದ್ಧ ವಿದರ್ಭ 4ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 249 ರನ್‌. ಒಟ್ಟು 286 ರನ್‌ ಲೀಡ್‌. ಇಂದು ಕೊನೆ ದಿನ. ಪಂದ್ಯ ಡ್ರಾಗೊಂಡರೆ ವಿದರ್ಭಕ್ಕೆ ಟ್ರೋಫಿ.

ನಾಗ್ಪುರ: 2024-25ರ ರಣಜಿ ಟ್ರೋಫಿಯಲ್ಲಿ ವಿದರ್ಭ ಚಾಂಪಿಯನ್‌ ಪಟ್ಟ ಅಲಂಕರಿಸಲು ಕಾಯುತ್ತಿದೆ. ಕೇರಳ ವಿರುದ್ಧ ನಡೆಯುತ್ತಿರುವ ಫೈನಲ್‌ನಲ್ಲಿ ವಿದರ್ಭ ಬಿಗಿ ಹಿಡಿತ ಸಾಧಿಸಿದ್ದು, ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚು.  

ಭಾನುವಾರ ಪಂದ್ಯದ ಕೊನೆ ದಿನ. ಒಂದು ವೇಳೆ ರದ್ದಾದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ವಿದರ್ಭ ಚಾಂಪಿಯನ್‌ ಎನಿಸಿಕೊಳ್ಳಲಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ವಿದರ್ಭ 379 ರನ್‌ ಗಳಿಸಿದ್ದರೆ, ಕೇರಳ 342ಕ್ಕೆ ಆಲೌಟಾಗಿ ಹಿನ್ನಡೆ ಅನುಭವಿಸಿತ್ತು. 

ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ವಿದರ್ಭ 4ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 249 ರನ್‌ ಗಳಿಸಿದ್ದು, ಒಟ್ಟು 286 ರನ್‌ ಮುನ್ನಡೆಯಲ್ಲಿದೆ. ಕರುಣ್‌ ನಾಯರ್‌ ಔಟಾಗದೆ 132 ರನ್‌ ಗಳಿಸಿದ್ದು, ವಿದರ್ಭಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವ ಪಣ ತೊಟ್ಟಿದ್ದಾರೆ. ದಾನಿಶ್ ಮಲೇವಾರ್‌ 73ಕ್ಕೆ ಔಟಾದರು.ಸ್ಕೋರ್‌: ವಿದರ್ಭ 379/10 ಮತ್ತು 249/4 (4ನೇ ದಿನದಂತ್ಯಕ್ಕೆ)(ಕರುಣ್‌ ಔಟಾಗದೆ 132, ದಾನಿಶ್‌ 73, ಅಕ್ಷಯ್‌ 1-29), ಕೇರಳ 342/10

ಈ ಋತುವಿನಲ್ಲಿ ಕರುಣ್‌ 9 ಶತಕ!

ಈ ಋತುವಿನ ದೇಸಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ಅಭೂತಪೂರ್ವ ಆಟ ಮುಂದುವರಿಸಿದ್ದಾರೆ. ಅವರು ಋತುವಿನ 9ನೇ ಶತಕ ಪೂರ್ಣಗೊಳಿಸಿದರು. ವಿಜಯ್‌ ಹಜಾರೆಯಲ್ಲಿ 5 ಸೆಂಚುರಿ ಬಾರಿಸಿದ್ದ ಕರ್ನಾಟಕದ ಮಾಜಿ ಆಟಗಾರ ಕರುಣ್‌, ರಣಜಿಯಲ್ಲಿ 4ನೇ ಶತಕ ಸಿಡಿಸಿದರು. ಅವರು ಈ ಋತುವಿನಲ್ಲಿ 6 ಅರ್ಧಶತಕ ಕೂಡಾ ಬಾರಿಸಿದ್ದಾರೆ.