ಹರ್ಯಾಣ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡದ ಪ್ರಕಟ. ಕೆ.ಎಲ್‌.ರಾಹುಲ್‌ಗೆ ಸ್ಥಾನ. 5 ವರ್ಷ ಬಳಿಕ ರಣಜಿ ಪಂದ್ಯವನ್ನಾಡಲಿರುವ ರಾಹುಲ್‌.

ಬೆಂಗಳೂರು: ತಾರಾ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಜ.30ರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಸೋಮವಾರ 17 ಸದಸ್ಯರ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದ್ದು, ಪಟ್ಟಿಯಲ್ಲಿ ರಾಹುಲ್‌ ಹೆಸರಿದೆ.

ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬಂದ ಬಳಿಕ ರಾಹುಲ್‌ಗೆ ಮೊಣಕೈ ನೋವು ಕಾಣಿಸಿಕೊಂಡಿತ್ತು. ಬಿಸಿಸಿಐ ವೈದ್ಯಕೀಯ ತಂಡದಿಂದ ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ರಾಹುಲ್‌, ಪಂದ್ಯದಲ್ಲಿ ಆಡಲು ಫಿಟ್‌ ಇದ್ದಾರೆ.

ಕಳೆದ ಬಾರಿ ಅವರು ರಣಜಿ ಪಂದ್ಯದಲ್ಲಿ ಆಡಿದ್ದು 2020ರಲ್ಲಿ. ಕೋಲ್ಕತಾದಲ್ಲಿ ಬಂಗಾಳ ವಿರುದ್ಧ ಆಡಿದ್ದರು. ಇನ್ನು, ಪಂಜಾಬ್‌ ವಿರುದ್ಧ ಆಡಿದ ತಂಡವನ್ನು ಹರ್ಯಾಣ ವಿರುದ್ಧದ ಪಂದ್ಯಕ್ಕೂ ಉಳಿಸಿಕೊಂಡಿರುವುದಾಗಿ ಕೆಎಸ್‌ಸಿಎ ತಿಳಿಸಿದೆ. ---

ಇಂದು ದೆಹಲಿ ತಂಡ ಸೇರಿಕೊಳ್ಳಲಿರುವ ಕೊಹ್ಲಿ

12 ವರ್ಷ ಬಳಿಕ ರಣಜಿ ಪಂದ್ಯವನ್ನು ಆಡಲು ಸಜ್ಜಾಗುತ್ತಿರುವ ವಿರಾಟ್‌ ಕೊಹ್ಲಿ, ಮಂಗಳವಾರ ದೆಹಲಿ ತಂಡ ಕೂಡಿಕೊಂಡು ಅಭ್ಯಾಸ ಮುಂದುವರಿಸಲಿದ್ದಾರೆ. ಕಳೆದೆರಡು ಮೂರು ದಿನಗಳಿಂದ ವಿರಾಟ್, ಮುಂಬೈನಲ್ಲಿ ಭಾರತ ತಂಡದ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಜೊತೆ ಅಭ್ಯಾಸ ನಡೆಸುತ್ತಿದ್ದರು.