3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ : ಮೈಸೂರು ವಾರಿಯರ್ಸ್‌ ಸವಾಲು ಗೆದ್ದ ಗುಲ್ಬರ್ಗಾ

| Published : Aug 25 2024, 02:00 AM IST / Updated: Aug 25 2024, 04:08 AM IST

ಸಾರಾಂಶ

ಗುಲ್ಬರ್ಗಾಕ್ಕೆ 5 ವಿಕೆಟ್‌ ಜಯ. ಕೊನೆ 5 ಪಂದ್ಯದಲ್ಲಿ 4ನೇ ಗೆಲುವು ಕಂಡ ಗುಲ್ಬರ್ಗಾ. ಸತತ 6 ಸೋಲಿನ ಬಳಿಕ ಕೊನೆಗೂ ಗೆದ್ದ ಶಿವಮೊಗ್ಗ ಲಯನ್ಸ್‌ ತಂಡ.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮೈಸೂರು ವಾರಿಯರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಗುಲ್ಬರ್ಗಾ ತಾನಾಡಿದ 7 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದರೆ, ಮೈಸೂರು 7 ಪಂದ್ಯಗಳಲ್ಲಿ 3ನೇ ಸೋಲು ಅನುಭವಿಸಿತು. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮೈಸೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 154 ರನ್ ಗಳಿಸಿತು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 17ನೇ ಓವರ್‌ವರೆಗೂ ಚೇತರಿಸಿಕೊಳ್ಳಲಿಲ್ಲ. ತಂಡ 16.2 ಓವರ್‌ಗಳಲ್ಲಿ 92 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 9ನೇ ವಿಕೆಟ್‌ಗೆ ಜೆ.ಸುಚಿತ್‌ ಹಾಗೂ ಮನೋಜ್‌ ಭಾಂಡಗೆ ಕೇವಲ 21 ಎಸೆತಗಳಲ್ಲಿ 52 ರನ್‌ ಬಾರಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. 

ಮನೋಜ್‌ 14 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 38 ರನ್‌ ಸಿಡಿಸಿದರೆ, ಸುಚಿತ್‌ 25 ರನ್‌ ಗಳಿಸಿದರು. ಅಭಿಷೇಕ್‌ ಪ್ರಭಾಕರ್‌ 4 ಓವರ್‌ಗಳಲ್ಲಿ 21 ರನ್‌ಗೆ 5 ವಿಕೆಟ್‌ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಬ್ಬರ್ಗಾ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಲುವ್ನಿತ್ ಸಿಸೋಡಿಯಾ(23) ಉತ್ತಮ ಆರಂಭ ಒದಗಿಸಿದರು. ತಂಡ ಪವರ್ ಪ್ಲೇನಲ್ಲಿ 1 ವಿಕೆಟ್‌ಗೆ 50 ರನ್ ಗಳಿಸಿತು. 

ಆದರೆ ಬಳಿಕ ಕುಸಿಯಿತು. ದೇವದತ್‌ ಪಡಿಕ್ಕಲ್‌ 24, ಅನೀಶ್‌ 8 ರನ್‌ ಗಳಿಸಿ ಔಟಾದರು. ಆದರೆ ಸ್ಮರಣ್‌ ತಂಡಕ್ಕೆ ಆಸರೆಯಾದರು. ಅವರು ಕೇವಲ 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸ್ಕೋರ್‌: ಮೈಸೂರು 20 ಓವರ್‌ನಲ್ಲಿ 154/9 (ಮನೋಜ್‌ 38, ಸುಚಿತ್‌ ಔಟಾಗದೆ 25, ಅಭಿಷೇಕ್‌ 5/21), ಗುಲ್ಬರ್ಗಾ 18.5 ಓವರ್‌ಗಳಲ್ಲಿ 157/5 (ಸ್ಮರಣ್‌ 52, ಪಡಿಕ್ಕಲ್‌ 24, ಮನೋಜ್‌ 2/36)

ಪಂದ್ಯಶ್ರೇಷ್ಠ: ಅಭಿಷೇಕ್‌ ಪ್ರಭಾಕರ್‌

ಇಂದಿನ ಪಂದ್ಯಗಳು

ಬೆಂಗಳೂರು-ಮೈಸೂರು, ಮಧ್ಯಾಹ್ನ 3ಕ್ಕೆಮಂಗಳೂರು-ಶಿವಮೊಗ್ಗ, ಸಂಜೆ 7 ಗಂಟೆಗೆ