ಸಾರಾಂಶ
ಬೆಂಗಳೂರು: ಪ್ರಾಣ್ ಹೆಲ್ತ್ ಸಂಸ್ಥೆಯ ವತಿಯಿಂದ ನಗರದ ಬಸವನಗುಡಿಯ ಕೃಷ್ಣರಾವ್ ಪಾರ್ಕ್ನಲ್ಲಿ ಭಾರತದ ಮೊದಲ ವಯೋವೃದ್ಧರ ಫಿಟ್ನೆಸ್ ಡ್ರೈವ್ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂಸದ, ಹೃದಯ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್.ಮಂಜುನಾಥ್ ಪಾಲ್ಗೊಂಡರು.
ಬಳಿಕ ಮಾತನಾಡಿದ ಅವರು, ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗಬೇಕಾದ್ರೆ ಆರೋಗ್ಯ ಉತ್ತಮವಾಗಿರಬೇಕು. ಆರೋಗ್ಯವೇ ಭಾಗ್ಯ. ಅದಕ್ಕಾಗಿ ಯೋಗ ಮಾಡಿ ವ್ಯಾಯಾಮ ಮಾಡಿ. ನಿಮ್ಮ ಮನಸ್ಸು ಮತ್ತು ಹೃದಯವನ್ನು ಯಾವಾಗಲೂ ಚೆನ್ನಾಗಿ ಕಾಪಾಡಿಕೊಳ್ಳಿ. ಆರೋಗ್ಯದ ಜೊತೆ ಜೊತೆಗೆ ಮನುಷ್ಯನಲ್ಲಿರುವ ಅಹಂಗಳನ್ನು, ಕೋಪವನ್ನು ನಿಯಂತ್ರಿಸಿ. ನಿಮ್ಮ ಆರೋಗ್ಯವೇ ನಿಮ್ಮ ನಿಜವಾದ ಜೀವನ ಸಂಗಾತಿ ಎಂದು ಹೇಳಿ, ಪ್ರಾಣ್ ಹೆಲ್ತ್ ಸಂಸ್ಥೆ ನಾಗರಿಕರಿಗಾಗಿ ನೀಡುತ್ತಿರುವ ಫಿಟ್ನೆಸ್ ತರಬೇತಿಯ ಆಯಾಮಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿ ಸಮಾಜಮುಖಿ ಕೆಲಸ ಮಾಡುತ್ತಿರುವ ಪ್ರಾಣ್ ಹೆಲ್ತ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಚಾರ್ ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು, ಆರೋಗ್ಯ ಕಾಪಾಡಿಕೊಳಬೇಕಾದರೆ ಮೊದಲು ನಾವೆಲ್ಲರೂ ನಮ್ಮ ಪರಿಸರ ಸಂರಕ್ಷಣೆ ಮಾಡೋಣ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ ಪರಿಸರವಾದಿಗಳಾದ ರೇವತಿ ಕಾಮತ್ ಅವರು, ಆರೋಗ್ಯ ಮತ್ತು ಪರಿಸರ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಸಂಪತ್ತುಗಳು ಎಂದು ಹೇಳಿ, ಪ್ರಾಣ್ ಹೆಲ್ತ್ ಸಂಸ್ಥೆ ಮಾಡುತ್ತಿರುವ ನಾಗರಿಕರಿಗೆ ಫಿಟ್ನೆಸ್ ಅತಿಮುಖ್ಯ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು
ಪ್ರಾಣ್ ಹೆಲ್ತ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ನವನೀತ್ ರಾಮಪ್ರಸಾದ್, ಸಂಸ್ಥೆಯ ನಿರ್ದೇಶಕ ಮತ್ತು ನಿವೃತ್ತ ಪ್ರಾಂಶುಪಾಲ ಡಾ.ಎ.ರಾಮಪ್ರಸಾದ್, ಪ್ರಾಣ್ ಹೆಲ್ತ್ ಸಂಸ್ಥೆಯ ಸದಸ್ಯೆ ಮಾಲಿನಿ ರಾಮಪ್ರಸಾದ್ ಕೂಡಾ ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.