ಹಿರಿಯ ಬ್ಯಾಟರ್‌, ಕರ್ನಾಟಕದ ಕೆ.ಎಲ್‌.ರಾಹುಲ್‌ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಭಾನುವಾರ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಗೊಳಿಸಿತು.

- ಗಾಯಾಳು ಗಿಲ್‌ ಔಟ್‌ । ರಾಹುಲ್‌ ನಾಯಕ

- 8 ತಿಂಗಳ ಬಳಿಕ ಏಕದಿನ ತಂಡಕ್ಕೆ ಜಡೇಜಾ

ನವದೆಹಲಿ: ಹಿರಿಯ ಬ್ಯಾಟರ್‌, ಕರ್ನಾಟಕದ ಕೆ.ಎಲ್‌.ರಾಹುಲ್‌ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಭಾನುವಾರ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಗೊಳಿಸಿತು. ಕುತ್ತಿಗೆ ನೋವಿನ ಕಾರಣ ದ.ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದ ನಾಯಕ ಶುಭ್‌ಮನ್‌ ಗಿಲ್‌ಗೆ ಇನ್ನಷ್ಟು ದಿನ ವಿಶ್ರಾಂತಿ ಅಗತ್ಯವಿದ್ದು, ಅವರು ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.

ಹಿರಿಯ ಆಲ್ರೌಂಡರ್‌ ರವೀಂದ್ರ ಜಡೇಜಾ 8 ತಿಂಗಳ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಅವರು ಕೊನೆ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದರು.

ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌, ಆಲ್ರೌಂಡರ್‌ ಅಕ್ಷರ್‌ ಪಟೇಲ್‌ಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ತಂಡದಲ್ಲಿ ಮುಂದುವರಿದಿದ್ದಾರೆ. ಇದೇ ವೇಳೆ ಭಾರತ ‘ಎ’ ಪರ ಉತ್ತಮ ಪ್ರದರ್ಶನ ತೋರಿದ ಋತುರಾಜ್‌ ಗಾಯಕ್ವಾಡ್‌ಗೂ ಅವಕಾಶ ಸಿಕ್ಕಿದೆ. ಭಾರತ ತಂಡ: ರೋಹಿತ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ತಿಲಕ್‌ ವರ್ಮಾ, ಕೆ.ಎಲ್‌.ರಾಹುಲ್‌ (ನಾಯಕ), ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ನಿತೀಶ್‌ ರೆಡ್ಡಿ, ಹರ್ಷಿತ್‌ ರಾಣಾ, ಋತುರಾಜ್‌ ಗಾಯಕ್ವಾಡ್‌, ಪ್ರಸಿದ್ಧ್‌ ಕೃಷ್ಣ, ಅರ್ಶ್‌ದೀಪ್‌ ಸಿಂಗ್‌, ಧೃವ್‌ ಜುರೆಲ್‌.