ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಬೌಲರ್ಗಳ ಅಬ್ಬರದ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ಮೈಸೂರು ಕ್ರೀಡಾಂಗಣದಲ್ಲಿ ಆರಂಭಗೊಂಡ ಗೋವಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನವೇ ಮೇಲುಗೈ ಸಾಧಿಸಿದೆ.
ದಿನದಂತ್ಯಕ್ಕೆ ಗೋವಾ 8 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗೋವಾ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು.
ಇಶಾನ್ ಕಾಡೇಕರ್(06), ಸಿದ್ಧಾರ್ಥ್ ಕೆ.ವಿ.(02), ಹಾಗೂ ಸುಯಾಶ್ ಪ್ರಭುದೇಸಾಯಿ(24) ವಿಕೆಟನ್ನು ತಂಡದ ಸ್ಕೊರ್ 45 ಆಗುವಷ್ಟರಲ್ಲೇ ಕಳೆದಿಕೊಂಡಿತು. ಆದರೆ 4ನೇ ವಿಕೆಟ್ಗೆ ನಾಯಕ ದರ್ಶನ್ ಮಿಶಾಲ್ ಹಾಗೂ ಸ್ನೇಹಲ್ 82 ರನ್ ಜೊತೆಯಾಟವಾಡಿದರು.
39 ರನ್ ಗಳಿಸಿದ್ದ ದರ್ಶನ್ಗೆ ಸ್ಪಿನ್ನರ್ ರೋಹಿತ್ ಪೆವಿಲಿಯನ್ ಹಾದಿ ತೋರಿಸಿದರೆ, ಸ್ನೇಹಲ್ ಹೋರಾಟದ 83 ರನ್ ಸಿಡಿಸಿ ವೇಗಿ ವೆಂಕಟೇಶ್ ಎಸೆತದಲ್ಲಿ ಔಟಾದರು.
ಸದ್ಯ 10 ರನ್ ಗಳಿಸಿರುವ ಅರ್ಜುನ್ ತೆಂಡುಲ್ಕರ್ ಹಾಗೂ 6 ರನ್ ಗಳಿಸಿರುವ ಹೇರಂಬ್ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದು, ದೊಡ್ಡ ಮೊತ್ತಕ್ಕಾಗಿ ಹೋರಾಡುತ್ತಿದ್ದಾರೆ.
ವಿಜಯ್ಕುಮಾರ್ ವೈಶಾಕ್ 45 ರನ್ಗೆ 3 ವಿಕೆಟ್ ಕಿತ್ತರೆ, ಯುವ ಸ್ಪಿನ್ನರ್ ರೋಹಿತ್ ಕುಮಾರ್ 66 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ವೇಗಿಗಳಾದ ವಾಸುಕಿ ಕೌಶಿಕ್, ವೆಂಕಟೇಶ್ ತಲಾ 1 ವಿಕೆಟ್ ಪಡೆದರು.
ಸ್ಕೋರ್: ಗೋವಾ 228/8(ಮೊದಲ ದಿನದಂತ್ಯಕ್ಕೆ) (ಸ್ನೇಹಲ್ 83, ದರ್ಶನ್ 39, ವೈಶಾಕ್ 3-45, ರೋಹಿತ್ 3-66)
ಮನೀಶ್ ಸೇರಿ ಇಬ್ಬರಿಗೆ ಗಾಯಪಂದ್ಯದ ಮೊದಲ ದಿನವೇ ಕರ್ನಾಟಕದ ಇಬ್ಬರು ಗಾಯಗೊಂಡರು. ಮನೀಶ್ ಪಾಂಡೆ ಸ್ಲಿಪ್ನಲ್ಲಿ ಕ್ಯಾಚ್ ಪಡೆಯುವ ವೇಳೆ ಗಾಯಗೊಂಡಿದ್ದಾರೆ.
ಇನ್ನು 4 ವರ್ಷಗಳ ಬಳಿಕ ಕರ್ನಾಟಕ ರಣಜಿ ತಂಡಕ್ಕೆ ಮರಳಿರುವ ಡಿ.ನಿಶ್ಚಲ್ ಕೂಡಾ ಫೀಲ್ಡಿಂಗ್ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದರು.