ಸಾರಾಂಶ
ಫೆ.21ರಿಂದ ಮಾರ್ಚ್ 9ರ ವರೆಗೆ ಅರುಣಾಚಲ ಪ್ರದೇಶದಲ್ಲಿ ಆಯೋಜನೆಗೊಳ್ಳಲಿರುವ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಹಂತಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಮನೋಜ್ ಕುಮಾರ್ ಸ್ವಾಮಿ ಕಣ್ಣನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಫೆ.21ರಿಂದ ಮಾರ್ಚ್ 9ರ ವರೆಗೆ ಅರುಣಾಚಲ ಪ್ರದೇಶದಲ್ಲಿ ಆಯೋಜನೆಗೊಳ್ಳಲಿರುವ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಫೈನಲ್ ಹಂತಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಮನೋಜ್ ಕುಮಾರ್ ಸ್ವಾಮಿ ಕಣ್ಣನ್ ನಾಯಕರಾಗಿ ಆಯ್ಕೆಯಾಗಿದ್ದಾರೆ.ಹಾಲಿ ಚಾಂಪಿಯನ್ ಕರ್ನಾಟಕ ತಂಡ ಈ ಬಾರಿ ‘ಬಿ’ ಗುಂಪಿನಲ್ಲಿದ್ದು, ಫೆ.22ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಬಳಿಕ ಫೆ.24ರಂದು ಮಿಜೋರಾಂ, ಫೆ.26ರಂದು ಮಣಿಪುರ, ಫೆ.ರಂದು ರೈಲ್ವೇಸ್ ವಿರುದ್ಧ ಸೆಣಸಲಿರುವ ಕರ್ನಾಟಕ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಮಾ.2ರಂದು ಮಹಾರಾಷ್ಟ್ರ ಸವಾಲು ಎದುರಿಸಲಿದೆ.
ಕಳೆದ ಬಾರಿ ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ಮೇಘಾಲಯ ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ 54 ವರ್ಷಗಳ ನಂತರ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.46 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ, ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿತ್ತು. ಫೈನಲ್ನಲ್ಲೂ ಅಭತಪೂರ್ವ ಪ್ರದರ್ಶನ ತೋರಿದ್ದ ತಂಡ 3-2 ಗೋಲುಗಳ ರೋಚಕ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿತು.
6ನೇ ಪ್ರಶಸ್ತಿ ನಿರೀಕ್ಷೆಕರ್ನಾಟಕ ತಂಡ ಈ ಬಾರಿ 6ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಹಿಂದೆ ಮೈಸೂರು ಸಂಸ್ಥಾನವಿದ್ದಾಗ ರಾಜ್ಯ ತಂಡ 4 ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. 1946-47ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಮೈಸೂರು ತಂಡ, 1952-53, 1967-68 ಹಾಗೂ 1968-69ರಲ್ಲಿ ಪ್ರಶಸ್ತಿ ಜಯಿಸಿತ್ತು. ಬಳೀಕ 1975-76ರಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ, ಬಂಗಾಳ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಕಳೆದ ವರ್ಷ ಪ್ರಶಸ್ತಿ ಗೆಲ್ಲುವ ಮೂಲಕ 54 ವರ್ಷಗಳ ಟ್ರೋಫಿ ಬರವನ್ನು ನೀಗಿಸಿತ್ತು.