ಭಾರತಕ್ಕೆ ಕೀರ್ತಿ ತಂದ ಶಹಾನ್ ಖಾನ್: ನಮೀಬಿಯಾ ಸಾಹಸಿಕ ರೇಸ್‌ನಲ್ಲಿ ಪಾಲ್ಗೊಂಡ ಅತಿ ಕಿರಿಯ ಬೈಕರ್‌

| Published : Sep 25 2024, 01:07 AM IST

ಸಾರಾಂಶ

22 ರಾಷ್ಟ್ರಗಳು ಪಾಲ್ಗೊಂಡಿದ್ದ, ಆರು ದಿನಗಳ ಕಾಲ ನಡೆದ 1300 ಕಿ.ಮೀ. ದೂರದ ಸಾಹಸಿಕ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಗತ್ತಿನ ಟಾಪ್ ಬೈಕ್ ರೇಸ್ ಪಟುಗಳ ಮೆಚ್ಚುಗೆ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಮೀಬಿಯಾದಲ್ಲಿ ನಡೆದ ವಿಶ್ವ ಜಿಎಸ್ ಮೋಟಾರ್ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಬೆಂಗಳೂರಿನ ಸರ್ದಾರ್ ಶಹಾನ್ ಖಾನ್ ಹಾಗೂ ದೇವ್‌, ಕೇರಳದ ಆನಂದ್‌ ಅವರನ್ನೊಳಗೊಂಡ ತಂಡ ಅಗ್ರ-10ರಲ್ಲಿ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. 22 ರಾಷ್ಟ್ರಗಳು ಪಾಲ್ಗೊಂಡಿದ್ದ, ಆರು ದಿನಗಳ ಕಾಲ ನಡೆದ 1300 ಕಿ.ಮೀ. ದೂರದ ಸಾಹಸಿಕ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಗತ್ತಿನ ಟಾಪ್ ಬೈಕ್ ರೇಸ್ ಪಟುಗಳ ಮೆಚ್ಚುಗೆ ಗಳಿಸಿದ್ದಾರೆ.ಮಂಗಳವಾರ ಪತ್ರಕರ್ತರ ಜೊತೆ ತಮ್ಮ ರೇಸ್‌ನ ಅನುಭವ ಹಂಚಿಕೊಂಡ ಶಹಾನ್‌, ಬೆಟ್ಟ, ಗುಡ್ಡ, ನದಿ, ಮರುಭೂಮಿಯಲ್ಲಿ ನಡೆದ ಸ್ಪರ್ಧೆ ವಿಶೇಷ ಅನುಭವ ನೀಡಿದೆ. ವಿಶ್ವದ ಶ್ರೇಷ್ಠ ರೇಸರ್‌ಗಳೊಂದಿಗೆ ಸ್ಪರ್ಧಿಸಿ 10ನೇ ಸ್ಥಾನ ಪಡೆದಿದ್ದು ದೊಡ್ಡ ಸಾಧನೆ. ಭಾರತ ತಂಡ ಈ ಹಂತ ತಲುಪಿದ್ದು ಇದೇ ಮೊದಲು ಎಂದು ಹೇಳಿದರು.ತಂದೆ ಸರ್ಫ್ರಾಜ್ ಖಾನ್ ನನಗೆ ಬೈಕ್ ರೇಸ್‌ನ ಮೊದಲ ಗುರು. ಅವರೂ ಸಹ ಬೈಕ್ ರೇಸ್ ಪ್ರಿಯರು. ರೇಸ್‌ನಲ್ಲಿ ಗಾಯಗೊಂಡರೂ ವಿಶ್ರಾಂತಿ ಪಡೆಯದೆ ರೇಸ್ ಮುಂದುವರಿಸಲು ನನ್ನ ತಾಯಿ ಹುಸ್ನಾ ಖಾನ್ ಸ್ಫೂರ್ತಿ ಎಂದರು. 21ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಬೈಕ್ ರೇಸ್‌ನಲ್ಲಿ ಪಾಲ್ಗೊಂಡ ಶಹಾನ್, ರೇಸ್‌ ವೇಳೆ ಗಾಯಗೊಂಡು ನಿತ್ರಾಣ ಗೊಂಡರೂ ವಿಚಲಿತಾರಾಗದೆ 18ನೇ ಸ್ಥಾನದಲ್ಲಿದ್ದ ಭಾರತ ತಂಡವನ್ನು ಅಗ್ರ-10 ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಸಹ ಸ್ಪರ್ಧಿ ದೇವ್ ತಿಳಿಸಿದರು.ಶಹಾನ್ ಖಾನ್ ಅವರ ತಾಯಿ, ಹುಸ್ನಾ ಸರ್ಫ್ರಾ ರಾಜ್ ಖಾನ್ ಮಾತನಾಡಿ, ಶಹಾನ್ ಗೆ ಮೊದಲಿನಿಂದಲೂ ಬೈಕ್ ರೇಸ್ ಬಗ್ಗೆ ಆಸಕ್ತಿಯಿದ್ದ ಕಾರಣ ಮನೆಯಲ್ಲೂ ಸಂಪೂರ್ಣ ಬೆಂಬಲ ನೀಡಿದೆವು. ಪುತ್ರನ ಸಾಧನೆ ಖುಷಿ ತಂದಿದೆ ಎಂದರು.

ಜಿಎಸ್ ಬೈಕ್‌ ರೇಸ್‌ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಅರ್ಹತಾ ಸುತ್ತಿನಲ್ಲಿ 150ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಶಹಾನ್‌, ದೇವ್‌, ಆನಂದ್‌ ಆಯ್ಕೆಯಾಗಿದ್ದರು.