ಸಾರಾಂಶ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ) ಮೇಲೆ ಹೇರಲಾಗಿದ್ದ ನಿಷೇಧವನ್ನು ಬರೋಬ್ಬರಿ 15 ತಿಂಗಳ ಬಳಿಕ ಕೇಂದ್ರ ಕ್ರೀಡಾ ಸಚಿವಾಲಯ ಹಿಂಪಡೆದಿದೆ. ಈ ಮೂಲಕ ಮುಂಬರುವ ಏಷ್ಯನ್ ಚಾಂಪಿಯನ್ಗೆ ಆಯ್ಕೆ ಟ್ರಯಲ್ಸ್ ಸೇರಿದಂತೆ ಎಲ್ಲಾ ಕುಸ್ತಿ ಚಟುವಟಿಕೆಗೂ ಗ್ರೀನ್ ಸಿಗ್ನಲ್ ನೀಡಿದೆ.2023ರ ಡಿ.21ರಂದು ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಬ್ಲ್ಯುಎಫ್ಐ ಚುಕ್ಕಾಣಿ ಹಿಡಿದಿತ್ತು. ಆದರೆ ಕ್ರೀಡಾ ನಿಯಮ ಉಲ್ಲಂಘನೆ ಕಾರಣಕ್ಕೆ ಕೇವಲ ಮೂರೇ ದಿನಗಳಲ್ಲಿ ಅಂದರೆ ಡಿ.24ರಂದು ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್ಐ ಸಮಿತಿಯನ್ನೇ ಅಮಾನತುಗೊಳಿಸಿತ್ತು. ಅಲ್ಲದೆ, ಡಬ್ಲ್ಯುಎಫ್ಐ ಚಟುವಟಿಕೆ ನೋಡಿಕೊಳ್ಳಲು ಸ್ವತಂತ್ರ ಸಮಿತಿ ರಚಿಸುವಂತೆ ಭಾರತ ಒಲಿಂಪಿಕ್ ಸಂಸ್ಥೆ(ಐಒಎ)ಗೆ ಸೂಚಿಸಿತ್ತು. ಈ ನಡುವೆ ಜಾಗತಿಕ ಕುಸ್ತಿ ಫೆಡರೇಷನ್ ಕೂಡಾ ಡಬ್ಲ್ಯುಎಫ್ಐ ಮೇಲೆ ನಿಷೇಧ ಹೇರಿತ್ತು. ಆದರೆ ಕಳೆದ ಜ.13ರಂದು ನಿಷೇಧ ಹಿಂಪಡೆದಿತ್ತು.
ಪ್ರತಿಭಾವಂತ ರೆಸ್ಲರ್ಸ್ ನಿರಾಳಡಬ್ಲ್ಯುಎಫ್ಐ ಮೇಲಿನ ನಿಷೇಧ ತೆರವುಗೊಳಿಸಿದ್ದರಿಂದ ದೇಶದ ಪ್ರತಿಭಾವಂತ ಕುಸ್ತಿಪಟುಗಳು ನಿರಾಳರಾಗಿದ್ದಾರೆ. ಕುಸ್ತಿ ಸಂಸ್ಥೆ ಹಾಗೂ ಕ್ರೀಡಾ ಸಚಿವಾಲಯದ ಕಿತ್ತಾಟದಿಂದಾಗಿ ಜಾಗ್ರೆಬ್ ಹಾಗೂ ಅಲ್ಬಾನಿಯಾದಲ್ಲಿ ನಡೆದ ರ್ಯಾಂಕಿಂಗ್ ಟೂರ್ನಿಯನ್ನು ಭಾರತೀಯ ಕುಸ್ತಿಪಟುಗಳು ತಪ್ಪಿಸಿಕೊಳ್ಳುವಂತಾಗಿತ್ತು. ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಿಂದಲೂ ಭಾರತೀಯರು ಹೊರಗುಳಿಯುವ ಆತಂಕಕ್ಕೆ ಗುರಿಯಾಗಿದ್ದರೂ, ಕುಸ್ತಿಪಟುಗಳು ಪ್ರತಿಭಟನೆಯಿಂದಾಗಿ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು. ಇನ್ನು, ಮಾ.25ರಿಂದ ಜೋರ್ಡನ್ನಲ್ಲಿ ಏಷ್ಯನ್ ಚಾಂಪಿಯನ್ಶಿಪ್ ನಡೆಯಲಿದ್ದು, ಅದಕ್ಕೆ ಶೀಘ್ರದಲ್ಲೇ ಆಯ್ಕೆ ಟ್ರಯಲ್ಸ್ ನಡೆಯಲಿದೆ.