ಸಾರಾಂಶ
ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ತಾರಾ ಶಟ್ಲರ್ ಪಿ.ವಿ.ಸಿಂಧು, ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ ಕೂಡಾ ವರ್ಚುವಲ್ ಆಗಿ ಸಂವಾದದಲ್ಲಿ ಪಾಲ್ಗೊಂಡರು.
ನವದೆಹಲಿ: ಒಲಿಂಪಿಕ್ಸ್ನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಶಾಂತ ಚಿತ್ತದಿಂದ ಇರಿ, ಸರಿಯಾಗಿ ನಿದ್ದೆ ಮಾಡಿ ಎಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.ಗುರುವಾರ ಹಾಕಿ, ಶೂಟಿಂಗ್ ಸೇರಿದಂತೆ ಕೆಲ ಕ್ರೀಡೆಗಳ ಸ್ಪರ್ಧಿಗಳ ಜೊತೆ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು. ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ, ತಾರಾ ಶಟ್ಲರ್ ಪಿ.ವಿ.ಸಿಂಧು, ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖಾತ್ ಝರೀನ್ ಕೂಡಾ ವರ್ಚುವಲ್ ಆಗಿ ಸಂವಾದದಲ್ಲಿ ಪಾಲ್ಗೊಂಡರು.
‘ಒಲಿಂಪಿಕ್ಸ್ಗೆ ಆಯ್ಕೆಯಾದ ಸಂಭ್ರಮದಲ್ಲಿ ಕಳೆದುಹೋಗಬೇಡಿ. ಅದು ನಿಮ್ಮ ಗಮನ ಬೇರೆಡೆ ಸೆಳೆಯುತ್ತದೆ. ನಿಮ್ಮ ಪ್ರತಿಭೆ ಮೇಲೆ ನಂಬಿಕೆ ಇಡಿ. ನೀವು ಪದಕ ಗೆಲ್ಲುತ್ತೀರೋ ಇಲ್ಲವೋ ಎಂಬುದು ಸಮಸ್ಯೆ ಅಲ್ಲ. ಶೇಕಡಾ 100ರಷ್ಟು ಪ್ರಯತ್ನಿಸಿ’ ಎಂದು ಸಲಹೆ ನೀಡಿದರು. ‘ಕ್ರೀಡೆಯಲ್ಲಿ ಅಭ್ಯಾಸ ಮತ್ತು ಸ್ಥಿರತೆ ಮುಖ್ಯ. ಆದರೆ ನಿದ್ದೆಗೂ ಪ್ರಾಮುಖ್ಯತೆ ನೀಡಬೇಕು. ಅದು ಬಹಳ ಅಗತ್ಯ. ನಿದ್ದೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ’ ಎಂದರು. ಅಲ್ಲದೆ ಪ್ಯಾರಿಸ್ನಿಂದ ಮರಳಿದ ಬಳಿಕ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನ ನೀಡುವುದಾಗಿ ಒಲಿಂಪಿಯನ್ಗಳಿಗೆ ಭರವಸೆ ನೀಡಿದರು.
ತಾಯಿ ಮಾಡಿದ ಚುರ್ಮಾ ತನ್ನಿ: ನೀರಜ್ಗೆ ಮೋದಿ
ಟೋಕಿಯೊ ಒಲಿಂಪಿಕ್ಸ್ನಿಂದ ಹಿಂದಿರುಗಿದ ಬಳಿಕ ಚುರ್ಮಾ(ಹರ್ಯಾಣದ ಜನಪ್ರಿಯ ತಿನಿಸು) ನೀಡುವುದಾಗಿ ಮೋದಿ ಅವರಲ್ಲಿ ನೀರಜ್ ಚೋಪ್ರಾ ಭರವಸೆ ನೀಡಿದ್ದರು. ಇದನ್ನು ಸಂವಾದದ ವೇಳೆ ಮೋದಿ ನೆನಪಿಸಿದರು. ಈ ವೇಳೆ ಚೋಪ್ರಾ ಮಾತನಾಡಿ, ‘ಈ ಬಾರಿ ಖಂಡೀತಾ ಚುರ್ಮಾ ತರುತ್ತೇನೆ. ಕಳೆದ ಬಾರಿ ಸಕ್ಕರೆಯಲ್ಲಿ ಮಾಡಿದ ಚುರ್ಮಾ ತಂದಿದ್ದೆ. ಈ ಬಾರಿ ದೇಸಿ ತುಪ್ಪ ಹಾಗೂ ಬೆಲ್ಲದಿಂದ ತಯಾರಿಸಿದ ಚುರ್ಮಾ ಕೊಡುತ್ತೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ನಿಮ್ಮ ತಾಯಿ ಮನೆಯಲ್ಲೇ ಮಾಡಿದ ಚುರ್ಮಾ ತಂದುಕೊಡಿ ಎಂದು ಮನವಿ ಮಾಡಿದರು.