16 ವರ್ಷ ಬಳಿಕ ಸಿಕ್ಕಿ ಬಿದ್ದ ಆರೋಪಿ

| Published : May 18 2024, 12:36 AM IST / Updated: May 18 2024, 04:15 AM IST

arrest 3

ಸಾರಾಂಶ

ಕಳೆದ 16 ವರ್ಷಗಳ ಹಿಂದೆ ಹಸುಗಳನ್ನು ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಕೊಳ್ಳೇಗಾಲ :  ಕಳೆದ 16 ವರ್ಷಗಳ ಹಿಂದೆ ಹಸುಗಳನ್ನು ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕೆ.ಆರ್.ನಗರದ ಇಸ್ಮಾಯಿಲ್ ಷರೀಫ್ ಅಲಿಯಾಸ್ ಮುನ್ನ (56) ಬಂಧಿತ ಆರೋಪಿ. ಈತ 2008ರಲ್ಲಿ ಪಟ್ಟಣದ ಸುತ್ತಮುತ್ತಲಿನಲ್ಲಿ ಹಸುಗಳನ್ನು ಕಳವು ಮಾಡಿ ಮಾರಾಟಕ್ಕಾಗಿ ಟೆಂಪೋದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುವ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಿದ್ದ. ಬಳಿಕ ಹಲವು ವರ್ಷಗಳ ಕಾಲ ಆರೋಪಿಯನ್ನು ಹಲವು ಬಾರಿ ಬಂಧಿಸಲು ಪ್ರಯತ್ನಿಸಿದ್ದರೂ ಈತ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಳ್ಳುವ ಮೂಲಕ ಚಳ್ಳೆಹಣ್ಣು ತಿನ್ನಿಸಿದ್ದ.

ಈ ಪ್ರಕರಣವನ್ನು ಇತ್ತಿಚೆಗೆ ಕೈಗೆತ್ತಿಕೊಂಡ ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಕೊಳ್ಳೇಗಾಲದ ಎಎಸ್ಐ ತಖೀವುಲ್ಲಾ, ಮುಖ್ಯಪೇದೆಗಳಾದ ವೆಂಕಟೇಶ್, ಕಿಶೋರ್, ಬಿಳಿಗೌಡ, ಶಿವಕುಮಾರ್ ಇನ್ನಿತರರು ಕೆ. ಆರ್ ನಗರದ ಮನೆಯೊಂದರಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೂಲಕ ಮುಂದಿನ ಕ್ರಮಕೈಗೊಳ್ಳಲಾಗಿದೆ.

ಮತ್ತೆರಡು ಪ್ರಕರಣ ಬೇದಿಸುವಲ್ಲಿಯೂ ಯಶಸ್ವಿ: ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಪೊಲೀಸರು ಮತ್ತೆರಡು ಪ್ರಕರಣ ಪತ್ತೆ ಹಚ್ಚುವ ಮೂಲಕ ಹಳೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೂ ದಿಟ್ಟ ಕ್ರಮಕೈಗೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ. 2004ರಲ್ಲಿ ಹುತ್ತೂರು ಗ್ರಾಮದಲ್ಲಿ ಚುನಾವಣೆ ಗಲಾಟೆಯಲ್ಲಿ ಪಾಲ್ಗೊಂಡಿದ್ದ ಶಿವಣ್ಣ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದ . 

ಈತನನ್ನು 20 ವರ್ಷಗಳ ಬಳಿಕ ಪತ್ತೆ ಹಚ್ಚಿ ಹುತ್ತೂರು ಗ್ರಾಮ ಸಮೀಪದಲ್ಲೆ ಬಂಧಿಸಲಾಗಿದೆ. ಅದೇ ರೀತಿಯಲ್ಲಿ 2006ರಲ್ಲಿ ಬಜಾಜ್ ಬೈಕ್ ನಲ್ಲಿ ಅಕ್ರಮ ಶ್ರೀಗಂಧ ಸಾಗಣೆ ಪ್ರಕರಣದಲ್ಲಿ ಭಾಗಿ ತಲೆ ಮರೆಸಿಕೊಂಡಿದ್ದ ಮತ್ತೊರ್ವ ಆರೋಪಿ ಫೀರ್ ಬೇಗ್ ಪರಾರಿಯಾಗಿದ್ದ. ಜೂನ್ 6, 2006ರಲ್ಲಿ ನಡೆದಿದ್ದ ಕಾರ್ಯಾಚರಣೆ ವೇಳೆ ಶ್ರೀಗಂಧ ಸಾಗಿಸುತ್ತಿದ್ದ ಸೈಯದ್ ಅಮಾನ್ ಸಿಕ್ಕಿಬಿದ್ದಿದ್ದ, ಈ ವೇಳೆ ಫೀರ್ ಬೇಗ್ ಪರಾರಿಯಾಗಿದ್ದ. ಕಳೆದ 18 ವರ್ಷದಿಂದ ತಲೆಮರೆಸಿಕೊಂಡ ಮೈಸೂರಿನಲ್ಲಿದ್ದ ಈತನನ್ನು ಉಪವಿಭಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಒಟ್ಟಾರೆ ಆರೇಳು ದಿನಗಳಲ್ಲಿ ಕಳೆದ 18, 20 ಹಾಗೂ 16 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸುವ ಮೂಲಕ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಭಾಜನರಾಗಿದ್ದಾರೆ.