ಭಾರತ ಕ್ರಿಕೆಟ್‌ ತಂಡದಲ್ಲಿ ಗಂಭೀರ ಭಿನ್ನಮತ?: ಹದಗೆಟ್ಟ ಡ್ರೆಸ್ಸಿಂಗ್ ರೂಂ ವಾತಾವರಣ

| Published : Jan 02 2025, 12:34 AM IST / Updated: Jan 02 2025, 04:06 AM IST

ಸಾರಾಂಶ

ಆಟಗಾರರ ಜೊತೆ ಸಮನ್ವಯ ಸಾಧಿಸಲು ಕೋಚ್‌ ಗೌತಮ್‌ ಗಂಭೀರ್‌ ವಿಫಲ: ವರದಿ. ಹಿರಿಯ ಆಟಗಾರರ ಜೊತೆಗೂ ಮನಸ್ತಾಪ, ಗೇಮ್‌ ಪ್ಲ್ಯಾನ್‌ ಬಗ್ಗೆ ಇಲ್ಲ ಸಹಮತ?. ಆಯ್ಕೆ ಸಮಿತಿ ನಿರ್ಧಾರದ ಬಗ್ಗೆಯೂ ಬೇಸರ

ಸಿಡ್ನಿ: ನ್ಯೂಜಿಲೆಂಡ್‌ ವಿರುದ್ಧ ಕ್ಲೀನ್‌ಸ್ವೀಪ್‌ ಮುಖಭಂಗ, ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್‌ ಸರಣಿಯ ಕಳಪೆ ಪ್ರದರ್ಶನದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಭಿನ್ನಮತ ತಲೆದೋರಿದೆ ಎಂದು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿದೆ. ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ವಾತಾವರಣ ಹದಗೆಟ್ಟಿದ್ದು, ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಕೋಚ್‌ ಗೌತಮ್‌ ಗಂಭೀರ್‌ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ರವಿ ಶಾಸ್ತ್ರಿ, ರಾಹುಲ್‌ ದ್ರಾವಿಡ್‌ ಕೋಚ್‌ ಆಗಿದ್ದಾಗ ತಂಡದಲ್ಲಿ ಉತ್ತಮ ವಾತಾವರಣ ಇತ್ತು. ಆದರೆ ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಆಟಗಾರರ ನಡುವೆ ಸಮನ್ವಯತೆ ಕಂಡುಬರುತ್ತಿಲ್ಲ. ಈ ಬಗ್ಗೆ ಪ್ರಮುಖ ಮಾಧ್ಯಮಗಳ ವರದಿಗಳು ತಿಳಿಸುವಂತೆ, ರೋಹಿತ್‌ ಶರ್ಮಾ ಈ ಹಿಂದಿನಂತೆ ಆಟಗಾರರ ಜೊತೆ ಸರಿಯಾಗಿ ಚರ್ಚೆ ನಡೆಸುತ್ತಿಲ್ಲ. 

ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ರೋಹಿತ್‌ ತಮ್ಮ ನಾಯಕತ್ವದಲ್ಲಿ ನಿರ್ಲಕ್ಷ್ಯ ಹೊಂದಿದ್ದಾರೆ. ಯಾರನ್ನಾದರೂ ತಂಡದಿಂದ ಕೈ ಬಿಡಬೇಕಿದ್ದರೆ, ಅದರ ಹಿಂದಿರುವ ಕಾರಣವನ್ನೂ ಆಟಗಾರರಿಗೆ ಸರಿಯಾಗಿ ತಿಳಿಸುತ್ತಿಲ್ಲ ಎನ್ನಲಾಗುತ್ತಿದೆ. ಆಟಗಾರರ ಆಯ್ಕೆ ವಿಚಾರದಲ್ಲೂ ರೋಹಿತ್‌ ಶರ್ಮಾ ಹಾಗೂ ಕೋಚ್‌ ಗಂಭೀರ್‌ ನಡುವೆ ಸಹಮತ ಮೂಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.ಇದೇ ಕಾರಣಕ್ಕೆ ಆಟಗಾರರಲ್ಲಿ ಅಭದ್ರತೆ ಉಂಟಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ನಿತೀಶ್‌ ರೆಡ್ಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿ ಆಡಿದರೂ, ಶುಭ್‌ಮನ್‌ ಗಿಲ್‌ರನ್ನು ಸರಿಯಾಗಿ ಬಳಸಿಕೊಳ್ಳಲು ತಂಡ ವಿಫಲವಾಗಿದೆ. ಹರ್ಷಿತ್‌ ರಾಣಾ, ವಾಷಿಂಗ್ಟನ್‌ ಸುಂದರ್‌ ಆಯ್ಕೆಯಲ್ಲೂ ಗೊಂದಲ ಉಂಟಾಗಿದೆ. ಹೀಗಾಗಿಯೇ ತಂಡ ಎಲ್ಲಾ ಪಂದ್ಯಗಳಲ್ಲೂ ಬದಲಾವಣೆಯೊಂದಿಗೆ ಆಡಿದೆ ಎಂದು ವರದಿಯಾಗಿದೆ.

ಗೇಮ್‌ ಪ್ಲ್ಯಾನ್‌ ಪ್ರಕಾರ ಆಡುತ್ತಿಲ್ಲ!

ಆಟಗಾರರ ನಡುವೆ ಭಿನ್ನಮತ ತಲೆದೋರಲು ಪ್ರಮುಖ ಕಾರಣ ಗೇಮ್‌ ಪ್ಲ್ಯಾನ್‌. ತಂಡದ ಆಡಳಿತ ಹೆಚ್ಚಾಗಿ ಆಟಗಾರರಿಗೆ ಅವರದೇ ಆಯ್ಕೆಯ ಶೈಲಿಯಲ್ಲಿ, ಮುಕ್ತವಾಗಿ ಆಟವಾಡುವ ಸ್ವಾತಂತ್ರ್ಯ ನೀಡುತ್ತದೆ. ಕೆಲ ಸಂದರ್ಭಗಳಲ್ಲಿ ತಂಡ ಹಾಕಿಕೊಂಡ ಗೇಮ್‌ ಪ್ಲ್ಯಾನ್‌ ಪ್ರಕಾರ ಆಡಬೇಕಾಗುತ್ತದೆ. ಆದರೆ ಬಹುತೇಕ ಆಟಗಾರರು ಇದನ್ನು ಕಡೆಗಣಿಸುತ್ತಿದ್ದು, ತಮ್ಮಿಚ್ಛೆಯಂತೆ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಮೆಲ್ಬರ್ನ್‌ ಟೆಸ್ಟ್‌ ಬಳಿಕ ಆಟಗಾರರ ವಿರುದ್ಧ ಕಿಡಿಕಾರಿರುವ ಗಂಭೀರ್‌, ‘ಸಾಕು, ಇದನ್ನು ಇಲ್ಲಿಗೆ ನಿಲ್ಲಿಸಿ. ಮುಕ್ತವಾಗಿ ಆಡಲು ನಿಮಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಸಮಯ ಮುಗಿದಿದೆ. ಇನ್ನು ತಂಡದ ಯೋಜನೆ ಪ್ರಕಾರ ಆಡಬೇಕು. ಅಲ್ಲದಿದ್ದರೆ ತಂಡದಿಂದ ಹೊರಹೋಗುವ ದಾರಿ ತೋರಿಸಲಾಗುತ್ತದೆ’ ಎಂದಿದ್ದಾರೆ ಎಂದು ವರದಿಯಾಗಿದೆ.

ಹಿರಿಯರ ಜೊತೆ ಹೊಂದಾಣಿಕೆಯಿಲ್ಲ

ಭಾರತ ತಂಡದಲ್ಲಿ ರೋಹಿತ್‌, ವಿರಾಟ್‌ ಹಿರಿಯ ಆಟಗಾರರು. ಇಬ್ಬರೂ ಗಂಭೀರ್‌ ಜೊತೆಗೂ ಆಡಿದವರು. ಹೀಗಾಗಿಯೇ ರೋಹಿತ್‌, ವಿರಾಟ್‌ಗೆ ಕೋಚ್‌ ಆಗಿರುವ ಗಂಭೀರ್‌ ಸಲಹೆ, ಸೂಚನೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಕೊಹ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಹೆಚ್ಚಾಗಿ ಔಟ್‌ಸೈಡ್‌ ಆಫ್‌ ಸ್ಟಂಪ್‌ ಎಸೆತಗಳನ್ನು ಎದುರಿಸಲು ಹೋಗಿ ಔಟಾಗುತ್ತಿದ್ದಾರೆ. ಈ ಸಮಸ್ಯೆಗೆ ಅವರು 4 ಪಂದ್ಯಗಳ ಬಳಿಕವೂ ಪರಿಹಾರ ಕಂಡುಕೊಂಡಿಲ್ಲ. ಕೋಚ್‌ ಆಗಿರುವ ಗಂಭೀರ್‌ ಕೂಡಾ ಇದರ ಬಗ್ಗೆ ಸಲಹೆಗಳನ್ನು ನೀಡುತ್ತಿಲ್ಲ ಎನ್ನಲಾಗುತ್ತಿದೆ. 

ಆಸೀಸ್‌ ಸರಣಿಗೆ ಪೂಜಾರ ಬೇಕು ಎಂದಿದ್ದ ಗಂಭೀರ್‌!

ಆಸ್ಟ್ರೇಲಿಯ ಸರಣಿಗೆ ಅನುಭವತಿ ಚೇತೇಶ್ವರ ಪೂಜಾರ ಅವರನ್ನು ಆಯ್ಕೆ ಮಾಡುವಂತೆ ಗಂಭೀರ್ ಹಲವು ಬಾರಿ ಮನವಿ ಮಾಡಿದ್ದರು ಆದರೆ ಈ ಮನವಿಯನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಿರ್ಲಕ್ಷಿಸಿತ್ತು ಎಂದು ವರದಿಯಾಗಿದೆ. ಭಾರತ ಪರ್ತ್ ಟೆಸ್ಟ್ ಗೆದ್ದ ನಂತರವೂ ಪೂಜಾರರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಗಂಭೀರ್‌ ಕೇಳುತ್ತಿದ್ದರು ಎನ್ನಲಾಗಿದೆ. ಪೂಜಾರ ಆಸ್ಟ್ರೇಲಿಯಾದಲ್ಲಿ ಭಾರತದ ಈ ಹಿಂದಿನ ಎರಡು ಸರಣಿ ವಿಜಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸೋತ್ರೆ ಗಂಭೀರ್‌ ತಲೆದಂಡ?

ಟಿ20 ವಿಶ್ವಕಪ್‌ ಬಳಿಕ ಗಂಭೀರ್‌ ಭಾರತಕ್ಕೆ ಕೋಚ್‌ ಆಗಿ ನೇಮಕಗೊಂಡಿದ್ದರು. ಆದರೆ ಅವರ ಅವಧಿಯಲ್ಲಿ ತಂಡ ಯಶಸ್ಸಿಗಿಂದ ವೈಫಲ್ಯ ಅನುಭವಿಸಿದ್ದೇ ಹೆಚ್ಚು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿದ್ದ ತಂಡ, ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕ್ಲೀನ್‌ಸ್ವೀಪ್‌ ಮುಖಭಂಗಕ್ಕೆ ಒಳಗಾಗಿತ್ತು. ಈಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ಭೀತಿಯಲ್ಲಿದೆ. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಸಾಧ್ಯತೆಯೂ ಕ್ಷೀಣಿಸಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಅದರಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದರೆ ಗಂಭೀರ್‌ ತಲೆದಂಡ ಆಗಲಿದೆ ಎಂಬುದು ಬಿಸಿಸಿಐ ಮೂಲಗಳಿಂದ ತಿಳಿದುಬಂದ ಮಾಹಿತಿ. ‘ಗಂಭೀರ್‌ ಭಾರತಕ್ಕೆ ಮೊದಲ ಆಯ್ಕೆಯ ಕೋಚ್‌ ಆಗಿರಲಿಲ್ಲ. ವಿವಿಎಸ್‌ ಲಕ್ಷ್ಮಣ್‌ ರೇಸ್‌ನಲ್ಲಿದ್ದರು. ಆದರೆ ಅನಿವಾರ್ಯವಾಗಿ ಗಂಭೀರ್‌ಗೆ ಹುದ್ದೆ ನೀಡಲಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲೂ ಸೋತರೆ ಅವರ ಹುದ್ದೆ ಬಗ್ಗೆ ಬಿಸಿಸಿಐ ಗಂಭೀರವಾಗಿ ಚರ್ಚೆ ನಡೆಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಮನಸ್ತಾಪದಿಂದಲೇ ನಿವೃತ್ತಿ ಘೋಷಿಸಿದ್ರಾ ಆರ್‌.ಅಶ್ವಿನ್‌?

ಭಾರತ ತಂಡದಲ್ಲಿ ಮನಸ್ತಾಪ ಉಂಟಾಗಿರುವ ಸುದ್ದಿ ಹರಿದಾಡುತ್ತಿರುವಾಗಲೇ, ಹಿರಿಯ ಆಟಗಾರ ಆರ್‌.ಅಶ್ವಿನ್‌ ನಿವೃತ್ತಿ ವಿಚಾರವೂ ಮುನ್ನೆಲೆಗೆ ಬಂದಿದೆ. ಅಶ್ವಿನ್‌ ಆಸ್ಟ್ರೇಲಿಯಾ ಸರಣಿ ನಡುವೆಯೇ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು. ಅವರ ನಿವೃತ್ತಿಗೆ ತಂಡದಲ್ಲಿ ಉಂಟಾಗಿರುವ ಮನಸ್ತಾಪವೇ ಪ್ರಮುಖ ಕಾರಣ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ತಂಡದ ಆಯ್ಕೆ, ನಾಯಕತ್ವ ವಿಚಾರದಲ್ಲಿ ಭಿನ್ನಮತ ತಲೆದೋರಿದ್ದರಿಂದ ಅಶ್ವಿನ್‌ ನಿವೃತ್ತಿ ನಿರ್ಧಾರ ಕೈಗೊಂಡರು ಎಂದು ಹೇಳಲಾಗುತ್ತಿದೆ. ‘ಭಾರತ ತಂಡದಲ್ಲಿ ಆಗುತ್ತಿದ್ದ ಅವಮಾನ ಸಹಿಸಲಾರದೆ ಅಶ್ವಿನ್‌ ನಿವೃತ್ತಿ ಘೋಷಿಸಿದರು’ ಎಂಬ ಅಶ್ವಿನ್‌ ತಂದೆಯ ಇತ್ತೀಚಿಗಿನ ಹೇಳಿಕೆ ಇಲ್ಲಿ ಗಮನಾರ್ಹ.