ಸಾರಾಂಶ
ಐಪಿಎಲ್ ಟೂರ್ನಿ ಯಶಸ್ಸಿಗೆ ಶ್ರಮಿಸಿದ ಪಿಚ್ ಕ್ಯುರೇಟರ್, ಮೈದಾನ ಸಿಬ್ಬಂದಿಗೆ ಬಿಸಿಸಿಐನಿಂದ ಬಹುಮಾನ. ಸಿಬ್ಬಂದಿಯ ಶ್ರಮಕ್ಕೆ ಗೌರವ ಸೂಚಿಸುತ್ತೇನೆ. ಅವರಿಲ್ಲದೆ ಟೂರ್ನಿ ನಡೆಸಲು ಅಸಾಧ್ಯ ಎಂದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ.
ನವದೆಹಲಿ: ಐಪಿಎಲ್ 17ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ತೆರೆಮರೆಯಲ್ಲಿ ಶ್ರಮಿಸಿದ ಕ್ಯುರೇಟರ್ಗಳು ಹಾಗೂ ಮೈದಾನ ಸಿಬ್ಬಂದಿಗೆ ಬಿಸಿಸಿಐ ಬಹುಮಾನ ಘೋಷಿಸಿದೆ.
ಪ್ರತಿ ಬಾರಿ ಆತಿಥ್ಯ ವಹಿಸುವ 10 ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 25 ಲಕ್ಷ ರು., ಈ ಬಾರಿ ಕೆಲ ಪಂದ್ಯಗಳಿಗೆ ಹೆಚ್ಚುವರಿಯಾಗಿ ಆತಿಥ್ಯ ನೀಡಿದ್ದ 3 ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 10 ಲಕ್ಷ ರು. ಬಹುಮಾನ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ತಾಣ ‘ಎಕ್ಸ್’ ಖಾತೆಯ ಮೂಲಕ ತಿಳಿಸಿದ್ದಾರೆ.
ಬೆಂಗಳೂರು, ಮುಂಬೈ, ಡೆಲ್ಲಿ, ಚೆನ್ನೈ, ಕೋಲ್ಕತಾ, ಮೊಹಲಿ, ಹೈದರಾಬಾದ್, ಲಖನೌ, ಅಹಮದಾಬಾದ್ ಹಾಗೂ ಜೈಪುರ ಕ್ರೀಡಾಂಗಣಗಳ ಸಿಬ್ಬಂದಿಗೆ ತಲಾ 25 ಲಕ್ಷ ರು., ವಿಶಾಖಪಟ್ಟಣಂ, ಗುವಾಹಟಿ ಹಾಗೂ ಧರ್ಮಶಾಲಾ ಕ್ರೀಡಾಂಗಣದ ಸಿಬ್ಬಂದಿಗೆ ತಲಾ 10 ಲಕ್ಷ ರು. ಬಹುಮಾನ ದೊರೆಯಲಿದೆ. ಉದಾಹರಣೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಿಬ್ಬಂದಿ ಇದ್ದರೆ, 25 ಲಕ್ಷ ರು. ಆ 30 ಜನರಿಗೆ ಹಂಚಿಕೆಯಾಗಲಿದೆ.