ಸಾರಾಂಶ
ಕೆ.ಎಲ್.ರಾಹುಲ್ ಜೊತೆ ಲಖನೌ ಸೂಪರ್ಜೈಂಟ್ಸ್ ಮಾಲಿಕ ಸಂಧಾನ. ರಾಹುಲ್ರನ್ನು ಮನೆಗೆ ಕರೆದು ಔತಣ ನೀಡಿದ ಸಂಜೀವ್ ಗೋಯೆಂಕಾ. ಮುಂದಿನ ಐಪಿಎಲ್ಗೂ ಲಖನೌ ತಂಡದಲ್ಲೇ ಇರಲಿದ್ದಾರಾ ರಾಹುಲ್?
ನವದೆಹಲಿ: ಇತ್ತೀಚೆಗೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಹೀನಾಯ ಸೋಲು ಕಂಡಿದ್ದಕ್ಕೆ ತಂಡದ ನಾಯಕ ಕೆ.ಎಲ್.ರಾಹುಲ್ರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದ ತಂಡದ ಮಾಲಿಕ ಸಂಜೀವ್ ಗೋಯೆಂಕಾ, ಇದೀಗ ರಾಹುಲ್ರನ್ನು ತಮ್ಮ ನಿವಾಸಕ್ಕೆ ಕರೆದು ಔತಣ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವಾಡಲು ರಾಜಧಾನಿಗೆ ತೆರಳಿದ್ದಾಗ ರಾಹುಲ್, ಗೋಯೆಂಕಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಅವರನ್ನು ಸ್ವಾಗತಿಸುವ, ತಬ್ಬಿಕೊಂಡಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಮೈದಾನದಲ್ಲಿ ನಡೆದ ಕಹಿ ಘಟನೆ ಬಳಿಕ ರಾಹುಲ್ ಕೊನೆಯ 2 ಪಂದ್ಯಗಳನ್ನು ಆಡುವುದಿಲ್ಲ ಎನ್ನುವ ಸುದ್ದಿ ಹಬ್ಬಿತ್ತು. ಅದೀಗ ಸುಳ್ಳಾಗಿದೆ. ಇನ್ನು ಈ ಆವೃತ್ತಿ ಬಳಿಕ ತಂಡ ತೊರೆಯಲಿದ್ದಾರೆ ಎನ್ನುವ ವದಂತಿಗೆ ಸದ್ಯಕ್ಕೆ ತೆರೆಬಿದ್ದಂತೆ ಕಾಣುತ್ತಿದೆ.