ಸಾರಾಂಶ
ಕುಸ್ತಿ ಫೆಡರೇಷನ್ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ ಬಳಿಕ, ಭಾರತೀಯ ಒಲಿಂಪಿಕ್ ಸಂಸ್ಥೆಯು ಕುಸ್ತಿ ಸಂಸ್ಥೆಗೆ ಸ್ವತಂತ್ರ ಸಮಿತಿಯನ್ನು ನೇಮಿಸಿತ್ತು. ಆದರೆ ಅಮಾನತು, ಸ್ವತಂತ್ರ ಸಮಿತಿಯನ್ನೇ ಪರಿಗಣಿಸಿಲ್ಲ ಎಂದು ಸಂಜಯ್ ಸಿಂಗ್ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ನವದೆಹಲಿ: ಚುನಾವಣೆಯಲ್ಲಿ ಆಯ್ಕೆಯಾಗಿ ಅಧಿಕಾರಕ್ಕೇರಿದ ಕೆಲ ದಿನಗಳಲ್ಲೇ ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿದ್ದ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ) ಈಗ ಸಚಿವಾಲಯದ ಸಸ್ಪೆಂಡ್ ಆದೇಶಕ್ಕೇ ಸಡ್ಡು ಹೊಡೆದಿದೆ. ಅಮಾನತನ್ನು ನಾವು ಪರಿಗಣಿಸಿಲ್ಲ, ಕುಸ್ತಿ ಸಂಸ್ಥೆಯನ್ನು ನಾವೇ ಮುನ್ನಡೆಸುತ್ತೇವೆ ಎಂದು ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಾವು ಸಂವಿಧಾನ ಬದ್ಧವಾಗಿ ಚುನಾವಣೆ ನಡೆದು ಆಯ್ಕೆಯಾಗಿದ್ದೇವೆ. ಅದನ್ನು ಕ್ರೀಡಾ ಸಚಿವಾಲಯ ಕಡೆಗಣಿಸಲು ಹೇಗೆ ಸಾಧ್ಯ? ಅಮಾನತು ಮತ್ತು ಸ್ವತಂತ್ರ ಸಮಿತಿಯನ್ನು ನಾವು ಪರಿಗಣಿಸಲ್ಲ. ನಮ್ಮ ಸಮಿತಿಯೇ ಈಗಲೂ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಸಮಿತಿಯ ಸಭೆ ಕರೆದು, ರಾಷ್ಟ್ರೀಯ ಚಾಂಪಿಯನ್ಶಿಪ್ ಆಯೋಜಿಸುತ್ತೇವೆ. ನಮ್ಮ ರಾಜ್ಯ ಸಮಿತಿಗಳು ಆಟಗಾರರನ್ನು ಕಳುಹಿಸದಿದ್ದರೆ ಸ್ವತಂತ್ರ ಸಮಿತಿ ಹೇಗೆ ರಾಷ್ಟ್ರೀಯ ಚಾಂಪಿಯನ್ಶಿಪ್ ಆಯೋಜಿಸುತ್ತದೆ’ ಎಂದು ಸಂಜಯ್ ಸವಾಲು ಹಾಕಿದ್ದಾರೆ.ನಿಯಮ ಪಾಲಿಸಿಲ್ಲ ಎಂದು ಕ್ರೀಡಾ ಸಚಿವಾಲಯಕ್ಕೆ ಈಗಾಗಲೇ ವಿವರಣೆ ನೀಡಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಒಂದೆರಡು ದಿನ ಕಾಯುತ್ತೇವೆ. ಅವರು ನಮ್ಮನ್ನು ಸಂಪರ್ಕಿಸದಿದ್ದರೆ ನಾವೂ ಅವರನ್ನು ಕಡೆಗಣಿಸುತ್ತೇವೆ. ಅಮಾನತನ್ನು ಕೂಡಾ ನಾವು ಪರಿಗಣಿಸಲ್ಲ ಎಂದು ಸಂಜಯ್ ತಿಳಿಸಿದ್ದಾರೆ.ಡಿ.21ಕ್ಕೆ ನಡೆದಿದ್ದ ಚುನಾವಣೆಯಲ್ಲಿ ಸಂಜಯ್ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಆದರೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ಬಳಿಕ ಭಾರತೀಯ ಒಲಿಂಪಿಕ್ ಸಂಸ್ಥೆ, ಡಬ್ಲ್ಯುಎಫ್ಐ ಮೇಲುಸ್ತುವಾರಿಗೆ ಮೂವರು ಸದಸ್ಯರ ಹೊಸ ಸ್ವತಂತ್ರ ಸಮಿತಿ ನೇಮಿಸಿತ್ತು.
ಫೆ.9ರಿಂದ ರಾಷ್ಟ್ರೀಯ ಶಿಬಿರ: ಸ್ವತಂತ್ರ ಸಮಿತಿಪುರುಷ ಹಾಗೂ ಮಹಿಳೆಯರ ರಾಷ್ಟ್ರೀಯ ಕುಸ್ತಿ ಶಿಬಿರ ಕ್ರಮವಾಗಿ ಸೋನೆಪತ್ ಹಾಗೂ ಪಟಿಯಾಲಾದಲ್ಲಿ ಫೆ.9ರಿಂದ ಆರಂಭಗೊಳ್ಳಲಿದೆ ಎಂದು ಕುಸ್ತಿ ಸಂಸ್ಥೆಗೆ ನೇಮಿಸಲಾಗಿರುವ ಸ್ವತಂತ್ರ ಸಮಿತಿ ಭಾನುವಾರ ತಿಳಿಸಿದೆ. ಸದ್ಯ ಫೆ.2ರಿಂದ 5ರ ವರೆಗೆ ಜೈಪುರದಲ್ಲಿ ಹಿರಿಯರ ರಾಷ್ಟ್ರೀಯ ಚಾಂಪಿಯನ್ಶಿಪ್ ನಿಗದಿಯಾಗಿದೆ.