ಇತ್ತೀಚೆಗಷ್ಟೇ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಕಾರಣಗಳನ್ನು ತಿಳಿಸಿ ಎಂದು ಐಒಎಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ನಿಯಂತ್ರಣಕ್ಕೆ ಮತ್ತೆ ಸ್ವತಂತ್ರ ಸಮಿತಿಯನ್ನು ನೇಮಿಸಿದರೆ ಡಬ್ಲ್ಯುಎಫ್‌ಐ ಮೇಲೆ ಮತ್ತೆ ನಿಷೇಧ ಹೇರುತ್ತೇವೆ ಮತ್ತು ಭಾರತದ ಕುಸ್ತಿಪಟುಗಳನ್ನು ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ ಎಂದು ಕುಸ್ತಿಯ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ. 

ಕಳೆದ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಯನ್ನು ಭಾರತ ಒಲಿಂಪಿಕ್ ಸಂಸ್ಥೆ(ಐಒಎ) ಅಮಾನತುಗೊಳಿಸಿದ ಬಳಿಕ ಡಬ್ಲ್ಯುಎಫ್‌ಐ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ ನೇಮಿಸಲಾಗಿತ್ತು. ಇತ್ತೀಚೆಗಷ್ಟೇ ಅದನ್ನು ತೆರವುಗೊಳಿಸಲಾಗಿತ್ತು. ಬಳಿಕ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಕಾರಣಗಳನ್ನು ತಿಳಿಸಿ ಎಂದು ಐಒಎಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಶ್ವ ಆರ್ಚರಿ: ಭಾರತಕ್ಕೆ ನಾಲ್ಕು ಪದಕಗಳು ಖಚಿತ

ಶಾಂಘೈ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 4 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಶುಕ್ರವಾರ ಜ್ಯೋತಿ ಸುರೇಖಾ ಹಾಗೂ ಅಭಿಷೇಕ್‌ ವರ್ಮಾ ಕಾಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ಫೈನಲ್‌ಗೇರಿದರು. 

ಈಗಾಗಲೇ ಕಾಂಪೌಂಡ್‌ ಪುರುಷ, ಮಹಿಳಾ ಹಾಗೂ ಪುರುಷರ ರೀಕರ್ವ್‌ ತಂಡಗಳು ಪದಕ ಸುತ್ತಿಗೇರಿದ್ದು, ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿಕೊಂಡಿವೆ. ಇನ್ನು ಮಹಿಳೆಯರ ರೀಕರ್ವ್‌ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಸೆಮಿಫೈನಲ್‌ ಪ್ರವೇಶಿಸಿದರು. ಕಾಂಪೌಂಡ್‌ ವೈಯಕ್ತಿಕ ವಿಭಾಗಗಳಲ್ಲಿ ಜ್ಯೋತಿ, ಪ್ರಿಯಾನ್ಶ್‌ ಕೂಡಾ ಸೆಮೀಸ್‌ಗೇರಿದ್ದಾರೆ.