ಸಾರಾಂಶ
ಯುವ ಕುಸ್ತಿಪಟುಗಳ ಪ್ರತಿಭಟನೆಗೆ ಮಣಿದ ಕುಸ್ತಿ ಆಡಳಿತ ಸಮಿತಿ. 6 ವಾರದೊಳಗೆ ಅಂಡರ್-15, ಅಂಡರ್-20 ಟೂರ್ನಿ ನಡೆಸುವ ಭರವಸೆ.
ನವದೆಹಲಿ: ಕುಸ್ತಿಪಟುಗಳ ಪ್ರತಿಭಟನೆ ಬೆನ್ನಲ್ಲೇ ಭಾರತೀಯ ಒಲಿಂಪಿಕ್ಸ್ ಸಮಿತಿ (ಐಒಎ) ನೇಮಿತ ತಾತ್ಕಾಲಿಕ ಸ್ವತಂತ್ರ ಆಡಳಿತ ಸಮಿತಿಯು ರಾಷ್ಟ್ರೀಯ ಕೂಟಗಳ ಆಯೋಜನೆಗೆ ಮುಂದಾಗಿದೆ. 6 ವಾರದೊಳಗೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅಂಡರ್-15, ಅಂಡರ್-20 ರಾಷ್ಟ್ರೀಯ ಕುಸ್ತಿ ಕೂಟಗಳನ್ನು ನಡೆಸುವುದಾಗಿ ಘೋಷಿಸಿದೆ.
2023ರ ಜನವರಿಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ನ ಹಿಂದಿನ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ಆರಂಭಗೊಂಡ ಬಳಿಕ ರಾಷ್ಟ್ರೀಯ ಶಿಬಿರಗಳಾಗಲಿ, ಕಿರಿಯರ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಾಗಲಿ ನಡೆದಿಲ್ಲ. ಈ ಕಾರಣದಿಂದಾಗಿ ಅನೇಕ ಕಿರಿಯ ಕುಸ್ತಿಪಟುಗಳು, ಒಂದು ವರ್ಷವನ್ನೇ ಕಳೆದುಕೊಂಡಿದ್ದಾರೆ.ಸ್ವತಂತ್ರ ಆಡಳಿತ ಸಮಿತಿಯ ಮುಖ್ಯಸ್ಥ ಭೂಪೇಂದ್ರ ಸಿಂಗ್ ಬಾಜ್ವಾ ಯುವ ಕುಸ್ತಿಪಟುಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದು, ‘ಕುಸ್ತಿಪಟುಗಳು ಒತ್ತಾಯಿಸಿರುವಂತೆ ಕೂಟಗಳನ್ನು ಶೀಘ್ರ ಆಯೋಜಿಸಲು ನಾವು ಬದ್ಧರಾಗಿದ್ದೇವೆ. ಮುಂದಿನ 6 ವಾರಗಳಲ್ಲಿ ಅಂಡರ್-15, ಅಂಡರ್-20 ವಿಭಾಗದ ಕೂಟಗಳನ್ನು ಗ್ವಾಲಿಯರ್ನಲ್ಲಿ ನಡೆಸಲು ಉದ್ದೇಶಿಸಲಾಗಿದೆ’ ಎಂದರು.
ಚುನಾವಣೆಯಲ್ಲಿ ಸಂಜಯ್ ಸಿಂಗ್ ನೇತೃತ್ವದ ಪದಾಧಿಕಾರಿಗಳ ತಂಡ ಆಯ್ಕೆಯಾದ ಮರು ದಿನವೇ (ಡಿ.27) ಕ್ರೀಡಾ ಸಚಿವಾಲಯ ನೂತನ ಸಮಿತಿಯನ್ನು ಅಮಾನತುಗೊಳಿಸಿತು. ಬಳಿಕ ಐಒಎ, ಕುಸ್ತಿ ಚಟುವಟಿಕೆಗಳನ್ನು ನಡೆಸಲು ಸ್ವತಂತ್ರ ಆಡಳಿತ ಸಮಿತಿಯನ್ನು ನೇಮಿಸಿತು.