ಸಾರಾಂಶ
ಲಂಡನ್: ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಕೈವಾಡದ ಆರೋಪದ ಕುರಿತಾದ ತನಿಖೆಯನ್ನು ಭಾರತ ತಳ್ಳಿಹಾಕುವುದಿಲ್ಲ. ಆದರೆ ಈ ಕುರಿತು ಕೆನಡಾ ಸಾಕ್ಷ್ಯಾಧಾರ ಒದಗಿಸಬೇಕು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಗ್ರಹಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಪ್ರತಿಕ್ರಿಯೆ ನೀಡಿರುವ ಜೈಶಂಕರ್, ‘ನೀವು ಬಹಿರಂಗ ಆರೋಪ ಮಾಡಿದ್ದೀರಿ ಎಂದಾದಲ್ಲಿ ಅದಕ್ಕೆ ಸಾಕ್ಷ್ಯಗಳನ್ನು ನಮಗೆ ಒದಗಿಸಿ. ಆದರೆ ನೀವು ಇದುವರೆಗೂ ನಮಗೆ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು, ಭಾರತದ ಮೇಲೆ ಹತ್ಯೆಯ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ಸವಾಲು ಹಾಕಿದರು.==ಇದೇ ವೇಳೆ ಕೆನಡಾದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ನಡೆದ ಬಾಂಬ್ ದಾಳಿಯ ಘಟನೆಗಳನ್ನು ಉದಾಹರಿಸಿ, ಹಿಂಸಾತ್ಮಕ ಮಾರ್ಗವನ್ನು ಬಯಸಿ, ಭಾರತದಿಂದ ಪ್ರತ್ಯೇಕತೆ ಪ್ರತಿಪಾದಿಸುವ ಜನರಿಗೆ ಕೆನಡಾ ಸರ್ಕಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಿದೆ. ಆದರೆ ಭಾರತೀಯ ರಾಜತಾಂತ್ರಿಕರನ್ನು ಸಾರ್ವಜನಿಕವಾಗಿ ಬೆದರಿಸಲಾದವರ ವಿರುದ್ಧ ಕೆನಡಾ ಸರ್ಕಾರವು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ನಡುವೆ ನಿಜ್ಜರ್ ಭಯೋತ್ಪಾದಕನೇ ಎಂಬ ಪ್ರಶ್ನೆಗೆ, ‘1988 ರ ಲಾಕರ್ಬಿ ಬಾಂಬ್ ಸ್ಫೋಟದ ಬಗ್ಗೆ ಜನರಿಗೆ ತಿಳಿದಿದೆ. ಮೂರು ಏರ್ ಇಂಡಿಯಾ ವಿಮಾನಗಳಿಗೆ ಬೆದರಿಕೆ ಹಾಕಿದ ಖಲಿಸ್ತಾನಿ ಭಯೋತ್ಪಾದಕರನ್ನು ಒಳಗೊಂಡ ದೊಡ್ಡ ಘಟನೆಯನ್ನು ಭಾರತ ಎದುರಿಸಿದೆ. ಭಾರತವು 2020ರಲ್ಲಿ ನಿಜ್ಜರನ್ನು ಭಯೋತ್ಪಾದಕ ಎಂದು ಘೋಷಿಸಿತ್ತು.ಸೆಪ್ಟೆಂಬರ್ನಲ್ಲಿ ಟ್ರುಡೋ ಅವರ ಆರೋಪಗಳ ನಂತರ, ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಕಳೆದ ತಿಂಗಳು ಕೆನಡಾದಲ್ಲಿ ಕೆಲವು ವೀಸಾ ಸೇವೆಗಳನ್ನು ಪುನರಾರಂಭಿಸಿತು ಎಂದು ಹೇಳಿದರು.ಚೀನಾ ಗಡಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ‘2020ರ ಸೆಪ್ಟೆಂಬರ್ನಿಂದಲೂ ಹಲವಾರು ಭಾರತ-ಚೀನಾ ಗಡಿ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಇನ್ನೂ ಕೆಲವು ಸಮಸ್ಯೆಗಳು ಚರ್ಚೆಯಲ್ಲಿವೆ’ ಎಂದು ಉತ್ತರಿಸಿದರು. ರಷ್ಯಾದಿಂದ ತೈಲ ಖರೀದಿ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ‘ಉಕ್ರೇನ್ ವಿರುದ್ಧದ ಯುದ್ಧದ ನಂತರ ರಷ್ಯಾ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಆದ್ದರಿಂದ ನಾವು ವಾಸ್ತವವಾಗಿ ನಮ್ಮ ಖರೀದಿ ನೀತಿಗಳ ಮೂಲಕ ತೈಲ ಮಾರುಕಟ್ಟೆಗಳು ಮತ್ತು ಅನಿಲ ಮಾರುಕಟ್ಟೆಗಳನ್ನು ಅನುಕೂಲಕರವಾಗಿಸಿಕೊಂಡಿದೆ. ಇದರ ಪರಿಣಾಮವಾಗಿ ನಾವು ಜಾಗತಿಕ ಹಣದುಬ್ಬರವನ್ನು ನಿಜವಾಗಿ ನಿರ್ವಹಿಸಿದ್ದೇವೆ ಎಂದು ಉತ್ತರಿಸಿದರು.