ಹತ ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್ತಲ್ಲಿ ಶ್ರದ್ದಾಂಜಲಿ

| Published : Jun 20 2024, 01:04 AM IST / Updated: Jun 20 2024, 03:40 AM IST

ಹತ ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್ತಲ್ಲಿ ಶ್ರದ್ದಾಂಜಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಜ್ಜರ್‌ ಹತ್ಯೆಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಲಾಗಿದ್ದು, ಮತ್ತೊಮ್ಮೆ ಭಾರತ ವಿರೋಧಿ ನಿಲುವು ಪ್ರಕಟಿಸಿದ ಕೆನಡಾ ಸರ್ಕಾರ ಹರ್ದೀಪ್‌ ಸಿಂಗ್‌ ನಿಜ್ಜರ್‌ಗೆ ನಮನ ಸಲ್ಲಿಸಿದೆ.

ಟೊರಾಂಟೋ: ಕಳೆದ ವರ್ಷ ಹತನಾದ ಖಲಿಸ್ತಾನಿ ಉಗ್ರ ಹರದೀಪ್‌ ಸಿಂಗ್‌ ನಿಜ್ಜರ್‌ಗೆ ಕೆನಡಾ ಸಂಸತ್‌ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಮತ್ತೊಮ್ಮೆ ಉಗ್ರರನ್ನು ಬೆಂಬಲಿಸುವ ತನ್ನ ಭಾರತ ವಿರೋಧಿ ನೀತಿಯನ್ನು ಬಹಿರಂಗವಾಗಿಯೇ ಪ್ರದರ್ಶಿಸಿದೆ.

ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ7 ದೇಶಗಳ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೇಳಿಕೆಯೊಂದನ್ನು ನೀಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ, ಕೆಲವೊಂದು ಮಹತ್ವದ ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ಭಾರತದ ಜೊತೆಗೂಡಿ ಕಾರ್ಯನಿರ್ವಹಿಸಲು ನಾವು ಬದ್ಧ. 

ಆ ವಿಷಯ ಏನೆಂಬುದನ್ನು ಈಗಲೇ ಬಹಿರಂಗಪಡಿಸಲಾಗದು ಎಂದಿದ್ದರು. ಹೀಗಾಗಿ ಉಗ್ರರ ನಿಗ್ರಹ ವಿಷಯದಲ್ಲಿ ಕೆನಡಾ ಭಾರತಕ್ಕೆ ನೆರವಾಗಬಹುದು ಎಂದು ಊಹಿಸಲಾಗಿತ್ತು. ಆದರೆ ಅದರ ಬೆನ್ನಲ್ಲೇ ಕೆನಡಾ ಮತ್ತೆ ಖಲಿಸ್ತಾನಿಗಳಿಗೆ ತನ್ನ ಬೆಂಬಲ ಪ್ರಕಟಿಸಿದೆ.

ಕಳೆದ ವರ್ಷ ಜೂ.18ರಂದು ನಿಜ್ಜರ್‌ನನ್ನು ಅಪರಿಚಿತ ಬಂದೂಕುಧಾರಿಗಳು ಕೆನಡಾ ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದ ಗುರುದ್ವಾರವೊಂದರ ಬಳಿ ಹತ್ಯೆ ಮಾಡಿದ್ದರು. ಈ ಘಟನೆಯಲ್ಲಿ ಭಾರತದ ಗೂಢಾಚಾರಿಗಳ ಕೈವಾಡವಿದೆ ಎಂದು ಕೆನಡಾ ಬಹಿರಂಗವಾಗಿಯೇ ಆರೋಪ ಮಾಡಿತ್ತು. ಈ ಕುರಿತು ಸಾಕ್ಷ್ಯ ನೀಡುವಂತೆ ಹಲವು ಬಾರಿ ಭಾರತ ಸೂಚಿಸಿದರೂ, ಕೆನಡಾ ನೀಡಿರಲಿಲ್ಲ.

 ಈ ವಿಷಯ ಉಭಯ ದೇಶಗಳ ಸಂಬಂಧ ಹದಗೆಡಲು ಕಾರಣವಾಗಿತ್ತು.ಈ ಘಟನೆಗೆ ಒಂದು ವರ್ಷ ತುಂಬಿದ ದಿನವಾದ ಮಂಗಳವಾರ ಕೆನಡಾ ಸಂಸತ್‌ ಆದ ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸುವ ಮೂಲಕ ನಿಜ್ಜರ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.ಮತ್ತೊಂದೆಡೆ ವ್ಯಾಂಕೋವರ್‌ನಲ್ಲಿನ ಭಾರತೀಯ ದೂತಾವಾಸ ಕಚೇರಿ ಬಳಿಕ ಖಲಿಸ್ತಾನಿ ಬೆಂಬಲಿಗಲು ಮೋದಿ ಕಿಲ್ಡ್‌ ನಿಜ್ಜರ್‌ ಎಂದು ಘೋಷಣೆ ಕೂಗಿ ಭಾರತ ವಿರೋಧಿ ಪ್ರತಿಭಟನೆ ನಡೆಸಿದ್ದಾರೆ.ನಿಜ್ಜರ್‌, ಮಾದಕ ವಸ್ತು ದಂಧೆಯಲ್ಲಿ ತೊಡಗಿಸಿಕೊಂಡಿದ್ದು ಅದರ ಮೂಲಕ ಸಂಗ್ರಹವಾಗುವ ಹಣವನ್ನು ಭಾರತದಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಬಳಸುತ್ತಿದ್ದ. ಹೀಗಾಗಿಯೇ ಭಾರತ ಸರ್ಕಾರ ಈತನನ್ನು ದೇಶ ವಿರೋಧಿ ಚಟುವಟಿಕೆ ತಡೆ ಕಾಯ್ದೆ ಅನ್ವಯ ಘೋಷಿತ ಅಪರಾಧಿಗಳ ಪಟ್ಟಿಗೆ ಸೇರಿಸಿದೆ.

‘ಕನಿಷ್ಕ’ ಸಂತ್ರಸ್ತರಿಗೆ ಕೆನಡಾದಲ್ಲಿ ಜೂ.23ಕ್ಕೆ ಭಾರತ ಶ್ರದ್ಧಾಂಜಲಿ1985ರ ಏರ್‌ ಇಂಡಿಯಾ ಕನಿಷ್ಕಾ ವಿಮಾನ ದುರಂತದಲ್ಲಿ ಮಡಿದ 329 ಪ್ರಯಾಣಿಕರಿಗೆ ಜೂ.23ರಂದು ಒಟ್ಟಾವಾದಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬುಧವಾರ ಮಾಹಿತಿ ನೀಡಿದೆ.ಖಲಿಸ್ತಾನಿ ಉಗ್ರ ನಿಜ್ಜರ್‌ಗೆ ಕೆನಡಾ ಸಂಸತ್‌ನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ ಬೆನ್ನಲ್ಲೇ, ಭಾರತೀಯ ದೂತಾವಾಸ ಕಚೇರಿ ಈ ಹೇಳಿಕೆ ಬಿಡುಗಡೆ ಮಾಡಿದೆ. ಕೆನಡಾದ ಮಾಂಟ್ರಿಯಲ್‌ನಿಂದ ನವದೆಹಲಿಗೆ ಹೊರಟಿದ್ದ ಏರಿಂಡಿಯಾದ ಕನಿಷ್ಕಾ ವಿಮಾನವನ್ನು ಖಲಿಸ್ತಾನಿ ಉಗ್ರರು ಬಾಂಬ್‌ ಇಟ್ಟು ಸ್ಫೋಟಿಸಿದ್ದರು. ಜೂ.23ಕ್ಕೆ ದುರಂತ ಸಂಭವಿಸಿ 39 ವರ್ಷಗಳಾಗಲಿವೆ.