ಸಾರಾಂಶ
ಒಂದೆಡೆ ಖಲಿಸ್ತಾನಿ ಉಗ್ರರನ್ನು ಪ್ರಧಾನಿ ಜಸ್ಟಿನ್ ಟ್ರುಡೋ ಬೆಂಬಲಿಸುತ್ತಿದ್ದರೆ, ಮತ್ತೊಂದೆಡೆ ಕೆನಡಾದ ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ಇತ್ತೀಚೆಗೆ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ನನ್ನು ವಿದೇಶಿ ಉಗ್ರ ಎಂದು ಬಣ್ಣಿಸಿದ್ದಾರೆ
ಒಟ್ಟಾವಾ: ಒಂದೆಡೆ ಖಲಿಸ್ತಾನಿ ಉಗ್ರರನ್ನು ಪ್ರಧಾನಿ ಜಸ್ಟಿನ್ ಟ್ರುಡೋ ಬೆಂಬಲಿಸುತ್ತಿದ್ದರೆ, ಮತ್ತೊಂದೆಡೆ ಕೆನಡಾದ ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ಇತ್ತೀಚೆಗೆ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ನನ್ನು ವಿದೇಶಿ ಉಗ್ರ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಆತನ ಹತ್ಯೆಯಲ್ಲಿ ಭಾರತದ ಕೈವಾಡ ಯಾವುದೇ ಸಾಕ್ಷ್ಯವನ್ನೂ ನಾವು ಇದುವರೆಗೆ ಭಾರತಕ್ಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಖಲಿಸ್ತಾನಿಗಳ ಪರ ನಿಂತಿರುವ ಮತ್ತು ಭಾರತದ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡಿದ್ದ ಪ್ರಧಾನಿ ಟ್ರುಡೋ ಅವರಿಗೆ ತಪರಾಕಿ ಹಾಕಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕೆನಾಡ ವಿಪಕ್ಷ ನಾಯಕ ಮ್ಯಾಕ್ಸಿಮೆ ಬೆರ್ನಿಯರ್ ‘ಇಡೀ ಸಮಸ್ಯೆಯ ಮೂಲವಾಗಿರುವ ಹರ್ದೀಪ್ ಸಿಂಗ್ ನಿಜ್ಜರ್ ಒಬ್ಬ ವಿದೇಶಿ ಉಗ್ರ ಆತ 1997ರಿಂದಲೂ ನಕಲಿ ದಾಖಲೆ ಬಳಸಿ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದ. ಅಂತಿಮವಾಗಿ 2007ರಲ್ಲಿ ಅದು ಹೇಗೋ ಕೆನಡಾ ಪೌರತ್ವ ಪಡೆದುಕೊಂಡಿದ್ದಾನೆ. ಹೀಗೆ ನಕಲಿ ದಾಖಲೆ ಸಲ್ಲಿಸಿ ಪೌರತ್ವ ಪಡೆದ ಆತನಂಥ ಸಾವಿರಾರು ಜನರನ್ನು ಗಡಿಪಾರು ಮಾಡಬೇಕಿತ್ತು’ ಎಂದು ಬರೆದಿದ್ದಾರೆ.
ಜೊತೆಗೆ, ‘ನಿಜ್ಜರ್ ಕೆನಡಾ ಪ್ರಜೆ ಅಲ್ಲ. ಈ ಆಡಳಿತಾತ್ಮಕ ದೋಷ ಸರಿಪಡಿಸಬೇಕು. ದಾಖಲೆ ನೀಡಿದಾಗ ಗಡಿಪಾರು ಮಾಡಬೇಕಿತ್ತು. ಆಗಿಲ್ಲ. ಈತ ಆತ ಸತ್ತ ಬಳಿಕವಾದರೂ ಈ ಲೋಪ ಸರಿಪಡಿಸಬೇಕು. ಈ ಸಂಬಂಧ ಭಾರತದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ.
ಅಲ್ಲದೆ ‘ಸರ್ಕಾರದ ಇತರೆ ಸಮಸ್ಯೆಗಳನ್ನು ಮರೆಮಾಚಲು ಪ್ರಧಾನಿ ಜಸ್ಟಿನ್ ಟ್ರುಡೋ ನಿಜ್ಜರ್ ಹತ್ಯೆ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಇದೆ ಎಂದು ಕೆನಡಾ ಪೊಲೀಸರು ಹೇಳುತ್ತಿದ್ದಾರೆ. ಇದು ನಿಜವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನೂ ನಾವು ಭಾರತಕ್ಕೆ ನೀಡಿಲ್ಲ’ ಎಂದು ಮ್ಯಾಕ್ಸಿಮೆ ಬೆರ್ನಿಯರ್ ಹೇಳಿದ್ದಾರೆ