ಸಾರಾಂಶ
- ಅಂಗಡಿ ಮುಚ್ಚಿ ಬೀದಿಗಿಳಿದು ಜನರ ಹೋರಾಟ- ಪಾಕ್ ಆತಂಕ । ಪ್ರತಿಭಟನೆ ಹತ್ತಿಕ್ಕಲು ಕಸರತ್ತು
---ಪಾಕ್ಗೆ ಡವಡವ
- ಪಾಕಿಸ್ತಾನ ಸರ್ಕಾರ 7 ದಶಕಗಳಿಂದ ಪಿಒಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬುದು ಪ್ರಮುಖ ಸಿಟ್ಟು- ಇದಲ್ಲದೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾಕ್ ಆಕ್ರಮಿತ ಕಾಶ್ಮೀರ ಜನರಿಂದ ಹೋರಾಟ
- ಇದು ಸ್ವಾತಂತ್ರ್ಯ ಹೋರಾಟಕ್ಕೆ ಎಡೆ ಮಾಡಿಕೊಡಬಹುದು ಎಂದು ಪಾಕಿಸ್ತಾನ ಸರ್ಕಾರಕ್ಕೆ ಆತಂಕ- ಪ್ರತಿಭಟನೆ ಹತ್ತಿಕ್ಕಲು ಭಾರಿ ಪ್ರಮಾಣದಲ್ಲಿ ಯೋಧರ ರವಾನೆ. ಇಂಟರ್ನೆಟ್ ಸಂಪರ್ಕ ಕಟ್
--ಇಸ್ಲಾಮಾಬಾದ್: ನೆರೆಯ ಬಾಂಗ್ಲಾದೇಶ, ನೇಪಾಳದ ಬಳಿಕ ಇದೀಗ ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಜನತೆ ದಂಗೆದಿದ್ದಾರೆ. ಪಾಕ್ ಸರ್ಕಾರವು ತಮ್ಮ ಪ್ರದೇಶದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದ ಸಾವಿರಾರು ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆ ಆರಂಭಿಸಿದ್ದು, ಇಬ್ಬರು ಬಲಿಯಾಗಿದ್ದಾರೆ. ಕಳೆದ 7 ದಶಕಗಳಿಂದ ದೇಶವನ್ನಾಳಿದ ಸರ್ಕಾರಗಳ ವಿರುದ್ಧ ಪಿಒಕೆಯಾದ್ಯಂತ ಜನತೆ ಅಂಗಡಿ ಮುಂಗಟ್ಟು ಮುಚ್ಚಿ, ವಾಹನ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಧುಮುಕಿದ್ದಾರೆ.ಈ ನಡುವೆ, ಜನತೆಯ ಈ ಪ್ರತಿಭಟನೆ ಸ್ವತಂತ್ರ ದೇಶದ ಹೋರಾಟಕ್ಕೆ ವೇದಿಕೆಯಾಗಬಹುದು ಎಂಬ ಆತಂಕದಲ್ಲಿರುವ ಪಾಕ್ ಸರ್ಕಾರ, ಪಿಒಕೆಗೆ ಭಾರೀ ಪ್ರಮಾಣದಲ್ಲಿ ಸೇನೆ, ಯೋಧರನ್ನು ರವಾನಿಸಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದೆ. ಸೋಮವಾರ ಪ್ರತಿಭಟನಾಕಾರರ ಮೇಲೆ ಯೋಧರು ಹಾರಿಸಿದ ಗುಂಡಿಗೆ ಇಬ್ಬರು ಬಲಿಯಾಗಿದ್ದು, ಹಲವಾರು ಜನ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಮೊಬೈಲ್, ಅಂತರ್ಜಾಲ ಸಂಪರ್ಕವನ್ನೂ ಪಾಕ್ ಸರ್ಕಾರ ಉದ್ದೇಶಪೂರ್ವಕವಾಗಿ ವ್ಯತ್ಯಯ ಮಾಡಿ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದೆ. ಬಲೂಚಿಸ್ತಾನ ಪ್ರಾಂತ್ಯದ ಬಳಿಕ ಪಿಒಕೆಯಲ್ಲಿ ಆರಂಭವಾಗಿರುವ ಈ ಪ್ರತಿಭಟನೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಭಾರೀ ಸಂಕಷ್ಟ ತಂದಿಟ್ಟಿದೆ.
ಬೃಹತ್ ಪ್ರತಿಭಟನೆ:ಪಾಕ್ ಆಕ್ರಮಿತ ಕಾಶ್ಮೀರದ ಅವಾಮಿ ಆ್ಯಕ್ಷನ್ ಕಮಿಟಿಯು (ಎಎಸಿ) ‘ಶಟರ್ ಡೌನ್ ಮತ್ತು ವೀಲ್ ಜಾಮ್’ ಹೆಸರಿನಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜಧಾನಿ ಮುಜಫ್ಫರಾಬಾದ್, ಮೀರ್ಪುರ, ಕೋಟ್ಲಿ, ನೀಲಂ ಕಣಿವೆ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಅದಕ್ಕೆ ಕೈಜೋಡಿಸಿದ್ದಾರೆ. ಪ್ರತಿಭಟನೆ ಭಾಗವಾಗಿ ವ್ಯಾಪಾರ, ವಹಿವಾಟು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆಯೂ ಬಂದ್ ಆಗಿದೆ.
ಪ್ರತಿಭಟನೆ ಏಕೆ?:ಪಾಕ್ ಸರ್ಕಾರ ಪಿಒಕೆ ಬಗೆಗಿನ ತಾರತಮ್ಯ ನೀಡಿ ಕೈಬಿಡಬೇಕು. ಅಭಿವೃದ್ಧಿಗೆ ಮುಂದಾಗಬೇಕು, ಪಿಒಕೆ ವಿಧಾನಸಭೆಯಲ್ಲಿ ಕಾಶ್ಮೀರಿ (ಭಾರತದ) ನಿರಾಶ್ರಿತರಿಗೆ ಮೀಸಲಾಗಿರುವ 12 ಶಾಸಕಾಂಗ ಸ್ಥಾನಗಳ ರದ್ದು ಸೇರಿದಂತೆ ಕೆಲ ರಚನಾತ್ಮಕ ಸುಧಾರಣೆಯ ಅಂಶಗಳನ್ನೂ ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟಿದೆ.