ಸಾರಾಂಶ
ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ , ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದೆ
ಕ್ಯಾಲಿಫೋರ್ನಿಯಾ: ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗಿದೆ. ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ.
ಸಮಸ್ಯೆಗಳು ಏನು?:
ಗಗನಯಾನದಿಂದ ಬಂದ ನಂತರ ಯಾತ್ರಿಕರು ತಲೆ ಸುತ್ತುವಿಕೆ, ವಾಕರಿಕೆ, ಅಸ್ಥಿರ ನಡಿಗೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುವ ಅಪಾಯವಿರುತ್ತದೆ.
ಮೂಳೆ ಸಾಂದ್ರತೆ ಇಳಿಕೆ:
ಗಗನಯಾನಿಗಳ ಸ್ನಾಯುಗಳಲ್ಲಿ ಜೀವಕೋಶಗಳ ನಷ್ಟವಾಗುತ್ತದೆ. ಅಂತೆಯೇ, ಬೆನ್ನು, ಸೊಂಟ, ತೊಡೆ ಎಲುಬುಗಳ ಶೇ.1ರಷ್ಟು ಸಾಂದ್ರತೆ ಕಡಿಮೆಯಾಗುತ್ತದೆ. ಗುರುತ್ವಾಕರ್ಷಣೆ ಕೊರತೆಯಿಂದ ದೇಹದ ದ್ರವಗಳು ಗಗನಯಾತ್ರಿಗಳ ತಲೆ ಭಾಗದಲ್ಲಿ ಶೇಖರಣೆಯಾಗಿ ಅದು ಊದಿಕೊಂಡಿರುವ ಸಾಧ್ಯತೆ ಇರುತ್ತದೆ. ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆಯಿಂದಾಗಿ ಕಾಲುಗಳು ಕೃಶ ಮತ್ತು ಬಲಹೀನವಾಗಿರುತ್ತವೆ. ಜೊತೆಗೆ, ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದುವಾಗುತ್ತದೆ. ಪರಿಣಾಮವಾಗಿ ಭೂಮಿಗೆ ಮರಳುತ್ತಿ ದ್ದಂತೆ ಗಗನಯಾತ್ರಿಗಳು ನಡೆಯಲು ಕಷ್ಟಪಡುವಂತಾಗುತ್ತದೆ.
ಎತ್ತರದಲ್ಲಿ ಹೆಚ್ಚಳ:
ಬಾಹ್ಯಾಕಾಶದಲ್ಲಿ ಯಾನಿಗಳ ಬೆನ್ನುಮೂಳೆ ಕೆಲ ಇಂಚು ಬೆಳವಣಿಗೆ ಕಾಣುವ ಕಾರಣ ದೇಹದ ಎತ್ತರ ದಲ್ಲೂ ಹೆಚ್ಚಳವಾಗಿರುತ್ತದೆ. ಆದರೆ ಭೂ ಮಿಗೆ ಮರಳುತ್ತಿದ್ದಂತೆ ಅದು ಮೊದಲಿನಷ್ಟಾಗುವುದು. ಆಗ ತೀವ್ರ ಬೆನ್ನು ನೋವಿನಂತಹ ಸಮಸ್ಯೆ ಎದುರಾಗುವುದು.
ಹೃದಯದ ಮೇಲೂ ಪರಿಣಾಮ:
ಆಗಸದಲ್ಲಿ ಗುರುತ್ವಾಕರ್ಷಣೆ ಬಲ ಇರದ ಕಾರಣ ರಕ್ತ ಪರಿಚಲನೆಯಲ್ಲೂ ಸಮಸ್ಯೆ ಆಗಿರುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಕ್ಷೀಣಿಸಿ, ರಕ್ತನಾಳದ ಸಮಸ್ಯೆಯೂ ಕಂಡುಬರುತ್ತದೆ.
ದೀರ್ಘಾವಧಿ ಸವಾಲುಗಳೇನು?:
ಬಾಹ್ಯಾಕಾಶದ ವಿಕಿರಣಗಳಿಗೆ ಕೆಲಕಾಲ ಒಡ್ಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಕುಂಠಿತ ಆಗಿರುವ ಆತಂಕ ಇರುತ್ತದೆ. ಇದರಿಂದ ಕ್ಯಾನ್ಸರ್ನಂತಹ ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಅಂಗಾಂಶಗಳಿಗೂ ಹಾನಿಯಾಗಿ, ದೈಹಿಕ ನಿಯಂತ್ರಣ ಕುಂದುವುದು. ಅಂಗಾಂಗಗಳ ಸಮನ್ವಯ ಕೊರತೆ ಉಂಟಾಗುತ್ತದೆ.
ಮಾನಸಿಕ ಸವಾಲುಗಳೇನು?:
ಹಲವು ದಿನ ಕಾಲ ಒಂದೇ ಸಣ್ಣ ಜಾಗದಲ್ಲೇ ಇರುವ ಕಾರಣ ಗಗನಯಾತ್ರಿಗಳಿಗೆ ಸಮಾಜದೊಂದಿಗಿನ ಸಂಪರ್ಕ ಕಡಿದು ಕೊಂಡಂತೆ ಭಾಸವಾಗುತ್ತಿರುತ್ತದೆ. ಇದರಿಂದಾಗಿ ಅವರನ್ನು ಖಿನ್ನತೆ, ಆತಂಕ, ಅರಿವಿನ ಕೊರತೆಯಂತಹ ಸಮಸ್ಯೆಕಾಡತೊಡಗುತ್ತವೆ. ಪರಿಣಾಮವಾಗಿ ಅವರ ಸಹನಾಶಕ್ತಿ, ಚುರುಕುತನ ಇಳಿಕೆಯಾಗಿ, ನಿರ್ಯಣಯಿಸುವ ಶಕ್ತಿ,ಪ್ರತಿಕ್ರಿಯಿಸುವ ಸಮಯ ಕುಂದುತ್ತದೆ.