ಸಾರಾಂಶ
ಬೆಂಗಳೂರು : ಹೊಸ ವರ್ಷದಲ್ಲಿ ರಾಜಧಾನಿ ನಾಗರಿಕರಿಗೆ ಶುಭ ಸುದ್ದಿ ಸಿಕ್ಕಿದ್ದು, ಕಳೆದ ವರ್ಷ ರಸ್ತೆ ಅಪಘಾತಗಳು ಹಾಗೂ ಅವುಗಳಿಂದ ಸಾವಿನ ಪ್ರಮಾಣವು ಇಳಿಕೆ ಮುಖವಾಗಿದೆ ಎಂದು ನಗರ ಸಂಚಾರ ಪೊಲೀಸರ ವಾರ್ಷಿಕ ವರದಿ ಬಹಿರಂಗಪಡಿಸಿದೆ.
ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ ಶೇ.1.26 ಹಾಗೂ ಸಾವಿನ ಪ್ರಮಾಣವು ಶೇ.1.90 ರಷ್ಟು ಹಾಗೂ ಮರಣಾಂತಿಕವಲ್ಲದ ಅಪಘಾತಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.4.57ರಷ್ಟು ಇಳಿಕೆಯಾಗಿದೆ. 2023ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಅಪಘಾತಗಳ ಸಂಖ್ಯೆಯಲ್ಲಿ ಒಟ್ಟಾರೆ ಶೇ.3.97 ರಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಸ್ವಯಂ ಅಪಘಾತಗಳ ಸಂಖ್ಯೆ ಶೇ.3.34 ರಷ್ಟು ಆಗಿದ್ದು, 2023ಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗೆ ಪಾದಚಾರಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಅಪಘಾತ ಕಪ್ಪು ಚುಕ್ಕೆಗಳನ್ನು ಗುರುತಿಸಲು ಮತ್ತು ಸರಿಪಡಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಪ್ರಯತ್ನದಿಂದ ಕಳೆದ ವರ್ಷ ಪಾದಚಾರಿಗಳ ಸಾವಿನ ಪ್ರಮಾಣದಲ್ಲಿ ಹಿಂದಿನ ವರ್ಷಕ್ಕಿಂತ ಶೇ.23.17 ರಷ್ಟು ಇಳಿಕೆಯಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಅಂಗಾಂಗಳ ಸಾಗಾಣಿಕೆಗೆ 54 ಗ್ರೀನ್ ಕಾರಿಡಾರ್: ತುರ್ತು ವೈದ್ಯಕೀಯ ಸೌಲಭ್ಯಕ್ಕೆ ಸ್ಪಂದಿಸಿರುವ ಸಂಚಾರ ವಿಭಾಗದ ಪೊಲೀಸರು, ಕಳೆದ ವರ್ಷ ಅಂಗಾಂಗ ಸಾಗಾಣಿಕೆಗೆ 54 ಬಾರಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸುವ ಮೂಲಕ ಜನರ ಪ್ರಾಣ ಉಳಿಸಲು ನೆರವಾಗಿದ್ದಾರೆ. ಹಿಂದಿನ ಎರಡು ವರ್ಷಗಳಲ್ಲಿ ಕೂಡ 52 ಬಾರಿ ಗ್ರೀನ್ ಕಾರಿಡಾರ್ ಕಲ್ಪಿಸಲಾಗಿದ್ದು, ಇದರಲ್ಲಿ ಕಳೆದ ವರ್ಷ ಎರಡು ಪಟ್ಟು ಹೆಚ್ಚಾಗಿದೆ.
ವಿಶೇಷ ಕಾರ್ಯಾಚರಣೆಗಳ ವಿವರ: ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ 1254418 ವಾಹನಗಳ ತಪಾಸಣೆ ನಡೆಸಿ ಕಾನೂನು ಉಲ್ಲಂಘಿಸಿದ 23574 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪಾನಮತ್ತರಾಗಿದ್ದ ಶಾಲಾ ಬಸ್ಗಳ ಚಾಲಕರ ಮೇಲೆ 201, ಖಾಸಗಿ ಬಸ್ಗಳ ಚಾಲಕ ಮೇಲೆ 83 ಹಾಗೂ ವಾಟರ್ ಟ್ಯಾಂಕರ್ಗಳ ಚಾಲಕ ಮೇಲೆ 67 ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ವೀಲ್ಹಿಂಗ್ ವಿರುದ್ಧ ಕೇಸ್-456 ಜನರ ಬಂಧನ: ರಸ್ತೆಗಳಲ್ಲಿ ವೀಲ್ಹಿಂಗ್ ಮೂಲಕ ಬೈಕ್ಗಳಲ್ಲಿ ಕಸರತ್ತು ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಈ ಸಂಬಂಧ 532 ಪ್ರಕರಣಗಳು ದಾಖಲಾಗಿದ್ದು, 520 ವಾಹನಗಳು ಜಪ್ತಿಯಾಗಿವೆ. ಅಲ್ಲದೆ 456 ಮಂದಿಯನ್ನು ಬಂಧಿಸಲಾಗಿದ್ದು, 121 ಅಪಾಪ್ತರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ತಮ್ಮ ಮಕ್ಕಳಿಗೆ ಬೈಕ್ ನೀಡಿದ ತಪ್ಪಿಗೆ 79 ಪೋಷಕರ ಮೇಲೆ ಪ್ರಕರಣ ದಾಖಲಾಗಿವೆ. ಅಲ್ಲದೆ 146 ವಾಹನ ಪರವಾನಿಗೆ ಹಾಗೂ 246 ಆರ್ಸಿಗಳು ರದ್ದಾಗಿವೆ. ಹಾಗೆಯೇ ಮದ್ಯ ಸೇವಿಸಿದ 23574 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
5.2 ಲಕ್ಷ ರು ಜನರಿಗೆ ತರಬೇತಿ: ಕಳೆದ ವರ್ಷ ಸಂಚಾರ ನಿಯಮಗಳ ಸಂಬಂಧ 5,20,482 ಜನರಿಗೆ ತರಬೇತಿ ನೀಡಲಾಗಿದೆ. ಅಲ್ಲದೆ ಸಂಚಾರ ನಿರ್ವಹಣಾ ಕೇಂದ್ರಕ್ಕೆ 3992 ಶಾಲೆಗಳ ಮಕ್ಕಳು ಭೇಟಿ ನೀಡಿದ್ದರು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 80.90 ಕೋಟಿ ರು ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಪರ್ಕ ಸಹಿತ ಪ್ರಕರಣಗಳು 4,79,162 ಹಾಗೂ ಸಂಪರ್ಕ ರಹಿತ ಪ್ರಕರಣಗಳು 78,07,399 ಸೇರಿ ಒಟ್ಟು 82,86,561 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 80.90 ಕೋಟಿ ರು ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2024ರಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಪಘಾತ ಹಾಗೂ ಅವುಗಳಿಂದ ಸಾವಿನ ಪ್ರಮಾಣ ಇಳಿಕೆಗೆ ನಿರಂತರ ಪ್ರಯತ್ನಕ್ಕೆ ಫಲಿತಾಂಶ ಸಿಕ್ಕಿದೆ.
-ಎಂ.ಎನ್.ಅನುಚೇತ್, ಜಂಟಿ ಪೊಲೀಸ್ ಆಯುಕ್ತ (ಬೆಂಗಳೂರು ಸಂಚಾರ ವಿಭಾಗ)