ಸಾರಾಂಶ
ಬೆಂಗಳೂರು : ಮೈಸೂರು ರಸ್ತೆಯ ನಗರ ಮೀಸಲು ಶಸಸ್ತ್ರ ಪಡೆ (ಸಿಎಆರ್) ಕೇಂದ್ರ ಘಟಕ ಆಡಳಿತ ಶಾಖೆಯಲ್ಲಿ ₹50.89 ಲಕ್ಷ ಅವ್ಯವಹಾರ ಆರೋಪದ ಸಂಬಂಧ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆ ಸಹಾಯ ಆಡಳಿತಾಧಿಕಾರಿ(ಎಎಒ) ಡಿ.ರಾಜಲಕ್ಷ್ಮೀ ನೀಡಿದ ದೂರಿನ ಮೇರೆಗೆ ಸಿಎಆರ್ ಕೇಂದ್ರ ಘಟಕ ಆಡಳಿತ ಶಾಖೆಯ ಮಾಜಿ ಎಎಒ ಸರೋಜಾ ಬಿ.ಬಿಜಾಪುರ ಮತ್ತು ಹಿಂದಿನ ದ್ವಿತೀಯ ದರ್ಜೆ ಸಹಾಯಕ(ಎಸ್ಡಿಎ) ಡಿ.ಎಸ್.ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ದೂರಿನಲ್ಲಿ ಏನಿದೆ?: ಸಿಎಆರ್ ಕೇಂದ್ರ ಘಟಕದ ಎಎಒ ಡಿ.ರಾಜಲಕ್ಷ್ಮೀ ನೀಡಿದ ದೂರಿನ ಅನ್ವಯ, ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆ ವ್ಯವಹಾರಗಳ ಸಂಬಂಧ ಕಳೆದ ಜನವರಿಯಲ್ಲಿ ಮಹಾಲೇಖಪಾಲರು 2020-21ರಿಂದ 2022-2023ರ ವರೆಗಿನ ಲೆಕ್ಕ ಪರಿಶೀಲಿಸಿದ್ದಾರೆ. ಈ ವೇಳೆ ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತದಲ್ಲಿ ₹59.80 ಲಕ್ಷ ಕೊರತೆ ಆಗಿರುವುದು ಕಂಡು ಬಂದಿದೆ. ಮಹಾಲೇಖಪಾಲರು ಈ ಬಗ್ಗೆ ಆಕ್ಷೇಪಣೆ ಮಾಡಿ ವರದಿ ಸಲ್ಲಿಸಿದ್ದಾರೆ. ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತವನ್ನು ಡಿಸಿಪಿ ಸಿಎಆರ್ ಕೇಂದ್ರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆಗೆ ತುಂಬಲಾಗುತ್ತದೆ. ಈ ಖಾತೆಯಲ್ಲಿ ಕೆಲವು ಅನಧಿಕೃತ ವಹಿವಾಟುಗಳು ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಎಒ ಪತ್ರ ವ್ಯವಹಾರ: ದ್ವಿತೀಯ ದರ್ಜೆ ಸಹಾಯ ಡಿ.ಎಸ್.ಪ್ರಶಾಂತ್ ಅವರು 2012ರಿಂದ 2021ರ ಜೂ.21ರವರೆಗೆ ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆ ನಗದು ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರೋಜಾ ಅವರು 2015ರಿಂದ 2024 ಮೇ 31ರವರೆಗೆ ಆಡಳಿತ ಶಾಖೆಯ ಎಎಒ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಡಿಸಿಪಿ ಸಿಎಆರ್ ಬ್ಯಾಂಕ್ ಖಾತೆ ಸಂಬಂಧ ವಿಷಯ ನಿರ್ವಾಹಕರು ಮಂಡಿಸುವ ಕಡತಕ್ಕೆ ಅಂತಿಮ ಅನುಮೋದನೆ ಮತ್ತು ಮಂಜೂರಾತಿ ನೀಡುವ ಅಧಿಕಾರ ಎಒಒ ಹೊಂದಿದ್ದಾರೆ. ಈ ಅನಧಿಕೃತ ವಹಿವಾಟುಗಳಿಗೆ ಸರೋಜಾ ಅವರೇ ಪತ್ರ ವ್ಯವಹರಿಸಿರುವುದು ಕಂಡು ಬಂದಿದೆ.
ಇಬ್ಬರಿಂದ ಹಣ ದುರ್ಬಳಕೆ: ಈ ಅನಧಿಕೃತ ಹಣಕಾಸು ವಹಿವಾಟು ಸಂಬಂಧ ನಡೆದ ಇಲಾಖಾ ವಿಚಾರಣೆ ವೇಳೆ ₹91.35 ಲಕ್ಷ ಕಡಿಮೆ ಇರುವುದು ಕಂಡು ಬಂದಿದೆ. ಡಿಸಿಪಿ ಸಿಎಆರ್ ಬ್ಯಾಂಕ್ ಖಾತೆಯಿಂದ ಸಿಎಆರ್ ಕೇಂದ್ರ ಘಟಕದ ಇಲಾಖಾ ವಹಿವಾಟುಗಳಿಗೆ ಅಂದರೆ, ಲೆಂಟ್ ಗಾರ್ಡ್ ಚಾರ್ಜಸ್, ವಸತಿ ಗೃಹಗಳ ನೀರಿನ ಬಿಲ್, ವೇತನ ರಿಕವರಿ ಮೊತ್ತ ಹಾಗೂ ಇತರೆ ಹಣಕಾಸು ನಿರ್ವಹಣೆಗಾಗಿ ಬಳಸಬೇಕು. ಆದರೆ, ಹಿಂದಿನ ಎಎಒ ಸರೋಜಾ ಮತ್ತು ಎಸ್ಡಿಎ ಪ್ರಶಾಂತ್ ಅನಧಿಕೃತವಾಗಿ ಖಾಸಗಿಯವರು ಮತ್ತು ಅನ್ಯ ವಹಿವಾಟಿಗೆ ಹಣ ದುರ್ಬಳಕೆ ಮಾಡಿರುವುದು ಕಂಡು ಬಂದಿದೆ.
ವಹಿವಾಟು ಸಂಬಂಧ ದಾಖಲೆ ನೀಡಿಲ್ಲ: ಎಡಿಎಸ್ ಪ್ರಶಾಂತ್ ಈ ನಗದು ಶಾಖೆಯಿಂದ ವರ್ಗಾವಣೆಯಾಗವ ವೇಳೆ ವಿಷಯ ನಿರ್ವಾಹಕರಿಗೆ ಕಡತಗಳ ಪ್ರಭಾರ ನೀಡಿಲ್ಲ. ಆದರೂ ಎಎಒ ಸರೋಜಾ ಅವರು ಆತನ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಇಲಾಖಾ ವಿಚಾರಣೆ ವೇಳೆ ಈ ಅನಧಿಕೃತ ವಹಿವಾಟಿನ ಬಗ್ಗೆ ಈ ಇಬ್ಬರೂ ಸೂಕ್ತ ಕಾರಣಗಳು ಹಾಗೂ ದಾಖಲೆಗಳನ್ನೂ ನೀಡಿಲ್ಲ. ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.