ನಾಡ ಪಿಸ್ತೂಲ್ ಮಾರಲು ಯತ್ನಿಸಿದ ಕುಖ್ಯಾತ ರೌಡಿ ಸೇರಿ ಇಬ್ಬರ ಸೆರೆ

| N/A | Published : May 30 2025, 07:43 AM IST

women arrest
ನಾಡ ಪಿಸ್ತೂಲ್ ಮಾರಲು ಯತ್ನಿಸಿದ ಕುಖ್ಯಾತ ರೌಡಿ ಸೇರಿ ಇಬ್ಬರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದ ಕುಖ್ಯಾತ ರೌಡಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದ ಕುಖ್ಯಾತ ರೌಡಿ ಸೇರಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿಯ ಸಮೀರ್‌ ಷರೀಫ್ ಅಲಿಯಾಸ್ ಶೂಟರ್ ಸಮೀರ್ ಹಾಗೂ ಪಂಜಾಬ್‌ ಮೂಲದ ಹರ್ಪಲ್ ಸಿಂಗ್ ಬಂಧಿತರಾಗಿದ್ದು, ಆರೋಪಿಗಳಿಂದ ಒಂದು ನಾಡ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿ.ಜೆ.ಹಳ್ಳಿಯ ಸ್ವತಂತ್ರ ನಗರದ ಮುಖ್ಯರಸ್ತೆಯಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಹರ್ಪಲ್ ಸಿಂಗ್‌ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಿಸ್ತೂಲ್ ಮಾರಾಟ ದಂಧೆ ಬಯಲಾಗಿದೆ.

ಸಮೀರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಕೊಲೆ ಯತ್ನ ಹಾಗೂ ಸುಲಿಗೆ ಸೇರಿ ನಗರದ ವಿವಿಧ ಠಾಣೆಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ. ಶ್ರೀಮಂತರಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಆತ ಕುಖ್ಯಾತನಾಗಿದ್ದು, ಈ ಹಿಂದೆ ಸಮೀರ್ ಬಳಿ ಎರಡು ಪಿಸ್ತೂಲ್‌ಗಳನ್ನು ಜಪ್ತಿ ಮಾಡಲಾಗಿತ್ತು. ಈ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಅಲ್ಲದೆ ಎರಡ್ಮೂರು ಬಾರಿ ಸುಲಿಗೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಮುರಿದು ಬಂದಿದ್ದಾನೆ. ಹೀಗಿದ್ದರೂ ತನ್ನ ಕಾನೂನು ಬಾಹಿರ ಚಟುವಟಿಕೆಗಳನ್ನು ಆತ ಮುಂದುವರಿಸಿದ್ದ.

ಇತ್ತೀಚೆಗೆ ಪಂಜಾಬ್ ಮೂಲದ ಪಿಸ್ತೂಲ್ ಪೂರೈಕೆದಾರ ಹರ್ಪಲ್ ಸಿಂಗ್ ನಿಂದ ಕಡಿಮೆ ಬೆಲೆಗೆ ಪಿಸ್ತೂಲ್‌ ಖರೀದಿಸಿ ನಗರದಲ್ಲಿ ಮಾರಾಟಕ್ಕೆ ಸಮೀರ್ ಯತ್ನಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಸಂಘಟಿತ ಅಪರಾಧ ದಳ (ಪೂರ್ವ)ದ ಎಸಿಪಿ ಆನಂದ್ ಕುಮಾರ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Read more Articles on