ಹಣಕಾಸಿನ ವಿಷಯಕ್ಕೆ ಕರೆಸಿ ರೌಡಿಗೆ ಗುಂಡಿಕ್ಕಿ ಹತ್ಯೆ: ತಮಿಳುನಾಡಿನಲ್ಲಿ ಶವ ಪತ್ತೆ

| Published : Jan 17 2025, 01:46 AM IST / Updated: Jan 17 2025, 04:18 AM IST

ಸಾರಾಂಶ

ಹಣಕಾಸು ವಿಚಾರ ಸಂಬಂಧ ರೌಡಿ ಶೀಟರ್‌ನನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಹಣಕಾಸು ವಿಚಾರ ಸಂಬಂಧ ರೌಡಿ ಶೀಟರ್‌ನನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊತ್ತನೂರು ನಿವಾಸಿ ಗುಣ(30) ಕೊಲೆಯಾದ ರೌಡಿ. ಜ.10ರಂದು ಕೊತ್ತನೂರಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ ನಿವಾಸಿ ಬ್ರಿಜೇಶ್‌ ಎಂಬಾತನ ರೌಡಿ ಗುಣನನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡು ಬಳಿಕ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕೊಲೆಯಾದ ಗುಣನ ಮೃತದೇಹ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮೃತ ಗುಣನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬ್ರಿಜೇಶ್‌ ಸೇರಿ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ರೌಡಿ ಶೀಟರ್‌ ಗುಣ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊತ್ತನೂರಿನಲ್ಲಿ ನೆಲೆಸಿದ್ದ. ನಾಯಿ ಸಾಕಿ ಮಾರಾಟ ಮಾಡುತ್ತಿದ್ದ. ಜ.10ರಂದು ಮಧ್ಯಾಹ್ನ ಕೆಲಸ ಇದೆ ಎಂದು ಮನೆಯಲ್ಲಿ ಹೇಳಿ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ. ಗುಣ ಜತೆಗೆ ತೆರಳಿದ್ದ ಚಂದ್ರು ಎಂಬಾತ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲೇ ಕಾದು ನಿಂತಿದ್ದಾನೆ. ಎಷ್ಟು ಹೊತ್ತು ಕಳೆದರೂ ಗುಣ ವಾಪಾಸ್‌ ಬಾರದಿದ್ದರಿಂದ ಆತನ ಮೊಬೈಲ್‌ಗೆ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿ ಕರೆ ಸ್ವೀಕರಿಸಿ ಪ್ರಕರಣವೊಂದರ ಸಂಬಂಧ ವಿಚಾರಣೆಗಾಗಿ ಗುಣನನ್ನು ಚಿಕ್ಕಬಳ್ಳಾಪುರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ ಎಂದಿದ್ದಾನೆ. ಬಳಿಕ ಚಂದ್ರು ವಾಪಾಸ್‌ ಆಗಿದ್ದಾನೆ.

ಪತ್ನಿಯಿಂದ ನಾಪತ್ತೆ ದೂರು:

ಮತ್ತೊಂದೆಡೆ ಸಂಜೆಯಾದರೂ ಮನೆಗೆ ಪತಿ ಗುಣ ವಾಪಾಸ್‌ ಆಗಾದ ಹಿನ್ನೆಲೆಯಲ್ಲಿ ಪತ್ನಿ ಬಾಗಲೂರು ಪೊಲೀಸ್‌ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಪ್ರಸ್ಟೀಜ್‌ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ಅಪಾರ್ಟ್‌ಮೆಂಟ್ ನಿವಾಸಿ ಬ್ರಿಜೇಶ್‌ ಹಾಗೂ ಮತ್ತೊಬ್ಬ ಅಂದು ರಾತ್ರಿ 8.45ಕ್ಕೆ ಮೃತದೇಹವೊಂದನ್ನು ಬೆಡ್‌ಶಿಟ್‌ನಲ್ಲಿ ಸುತ್ತಿಕೊಂಡು ಲಿಫ್ಟ್‌ನಲ್ಲಿ ಹೊರಗೆ ಸಾಗಿಸುತ್ತಿರುವುದು ಕಂಡು ಬಂದಿದೆ.

ತಮಿಳುನಾಡಿನಲ್ಲಿ ಮೃತದೇಹ ಪತ್ತೆ:

ಆರೋಪಿಗಳು ಸಾಗಿಸಿರುವ ಆ ಮೃತದೇಹ ಗುಣನದೇ ಇರಬಹುದು ಪೊಲೀಸರು ಶಂಕಿಸಿದ್ದರು. ಇದರ ಬೆನ್ನಲ್ಲೇ ತಮಿಳುನಾಡಿನ ಪೆನ್ನಂಗಾರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುಣನ ಮೃತದೇಹ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳು ಅಪಾರ್ಟ್‌ಮೆಂಟ್‌ನಲ್ಲಿ ಗುಣನನ್ನು ಹತ್ಯೆ ಮಾಡಿ ಬಳಿಕ ಮೃತದೇಹವನ್ನು ತಮಿಳುನಾಡಿಗೆ ಸಾಗಿ ಎಸೆದಿರುವುದು ಖಚಿತವಾಗಿದೆ. ಈಗಾಗಲೇ ಬಾಗಲೂರು ಪೊಲೀಸರ ಒಂದು ತಂಡ ತಮಿಳುನಾಡಿಗೆ ತೆರಳಿದೆ, ಮತ್ತೊಂದು ತಂಡ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯದಲ್ಲಿ ತೊಡಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.