ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಮನನೊಂದು ಜಿಮ್ ತರಬೇತುದಾರ ಹಾಗೂ ರಾಜ್ಯ ಮಟ್ಟದ ಬಾಡಿ ಬಿಲ್ಡರ್‌ವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಮನನೊಂದು ಜಿಮ್ ತರಬೇತುದಾರ ಹಾಗೂ ರಾಜ್ಯ ಮಟ್ಟದ ಬಾಡಿ ಬಿಲ್ಡರ್‌ವೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

‘ಗೆಳೆಯರ ಬಳಗ’ದ ನಿವಾಸಿ ಕಿರಣ್ ಕುಮಾರ್ (26) ಮೃತ ಯುವಕ. ಮನೆಯಲ್ಲಿ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪೋಷಕರ ಜತೆ ನೆಲೆಸಿದ್ದ ಕಿರಣ್‌, ಮನೆ ಹತ್ತಿರದ ಜಿಮ್‌ನಲ್ಲಿ ತರಬೇತುದಾರನಾಗಿದ್ದ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ವಿಜೇತನಾಗಿದ್ದ. ಕಳೆದ ಮೂರು ವರ್ಷಗಳಿಂದ ಯುವತಿಯನ್ನು ಕಿರಣ್‌ ಪ್ರೇಮಿಸುತ್ತಿದ್ದನು. ಈತನ ಪ್ರೀತಿಗೆ ಪೋಷಕರು ಸಹ ಸಮ್ಮತಿಸಿದ್ದು, ಕಿರಣ್ ಹಿರಿಯ ಸೋದರನ ಮದುವೆ ಬಳಿಕ ವಿವಾಹ ಮಾಡುವುದಾಗಿ ಆಕೆಗೆ ಕಿರಣ್ ಕುಟುಂಬದವರು ಹೇಳಿದ್ದರು. ಪ್ರಿಯತಮೆಗೆ ಲಕ್ಷಾಂತರ ರು. ಆರ್ಥಿಕವಾಗಿ ನೆರವು ಸಹ ಕೊಟ್ಟಿದ್ದ. ಆದರೆ ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗೆ ಆತನಿಂದ ಪ್ರಿಯತಮೆ ದೂರವಾಗಿದ್ದಳು. ಅಲ್ಲದೆ ಆಕೆಗೆ ಬೇರೆ ವರನ ಜತೆ ವಿವಾಹ ನಿಶ್ಚಿತಾರ್ಥವೂ ನಡೆದಿತ್ತು. ಈ ಬೆಳವಣಿಗೆಯಿಂದ ಕಿರಣ್ ತೀವ್ರವಾಗಿ ಬೇಸರಗೊಂಡಿದ್ದ. ಅಲ್ಲದೆ ಹಲವು ಬಾರಿ ಪ್ರೇಯಸಿಯ ಮನವೊಲಿಕೆಗೆ ಕಿರಣ್ ಯತ್ನ ಸಹ ವಿಫಲವಾಗಿತ್ತು. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಗಳ ಪತ್ತೆಗೆ ಶೋಧ:

ಕಿರಣ್ ಆತ್ಮಹತ್ಯೆಗೆ ಆತನ ಪ್ರೇಯಸಿ ಹಾಗೂ ಕುಟುಂಬದವರು ಕಾರಣರಾಗಿದ್ದಾರೆ ಎಂದು ಆರೋಪಿಸಿ ಮೃತನ ಸೋದರ ದೂರು ಕೊಟ್ಟಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಾಗಿದೆ. ಘಟನೆ ಬಳಿಕ ನಗರ ತೊರೆದಿರುವ ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ. ಆರೋಪಿಗಳ ಬಂಧನ ಬಳಿಕ ಮತ್ತೊಂದು ಬದಿಯ ಕಾರಣ ಸಹ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.